ಆರೋಪಿ ಶರಣಗೌಡ ಪಾಟೀಲ ಬಂಧನಕ್ಕೆ ಕುರುಬರ ಸಂಘ ಮನವಿ

KannadaprabhaNewsNetwork | Published : Feb 15, 2024 1:32 AM

ಸಾರಾಂಶ

ಡಾ. ಶಶಿಧರ ಹಟ್ಟಿ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣನಾದ ಗಜೇಂದ್ರಗಡ ತಾಲೂಕಿನ ಸರ್ಜಾಪುರ ಗ್ರಾಮದ‌ ಆರೋಪಿ ಶರಣಗೌಡ ಪಾಟೀಲನನ್ನು ಶೀಘ್ರವೇ ಬಂಧಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ರೋಣ ಘಟಕ ಆಗ್ರಹಿಸಿದೆ.

ರೋಣ: ಡಾ. ಶಶಿಧರ ಹಟ್ಟಿ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣನಾದ ಗಜೇಂದ್ರಗಡ ತಾಲೂಕಿನ ಸರ್ಜಾಪುರ ಗ್ರಾಮದ‌ ಆರೋಪಿ ಶರಣಗೌಡ ಪಾಟೀಲನನ್ನು ಶೀಘ್ರವೇ ಬಂಧಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘ ರೋಣ ತಾಲೂಕು ಘಟಕ ವತಿಯಿಂದ ರೋಣ ಸಿಪಿಐ ಎಸ್.ಎಸ್. ಬಿಳಗಿ ಅವರಿಗೆ ಬುಧವಾರ ರಾತ್ರಿ ಮನವಿ ಸಲ್ಲಿಸಲಾಯಿತು.

ಆರೋಪಿ ಶರಣಗೌಡ ಪಾಟೀಲ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದು, ತನಗಿರುವ ರಾಜಕೀಯ ಪ್ರಭಾವ, ಹಣ ಬಲದಿಂದ ಆತನ ಬಂಧನಕ್ಕೆ ಪೊಲೀಸ್ ಇಲಾಖೆ ಹಿಂದೇಟು ಹಾಕಿದರೆ ಬೀದಿಗಿಳಿದು ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು. ಆರೋಪಿ ಶರಣಗೌಡ ಪಾಟೀಲ ಕಿರುಕುಳದಿಂದಲೇ ಡಾ. ಶಶಿಧರ ಹಟ್ಟಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡಾ. ಶಶಿಧರ ಪತ್ನಿ ಸುನಂದಾ ಪೊಲೀಸರಿಗೆ ದೂರು ನೀಡಿದ್ದಾರೆ. ಆದಾಗ್ಯೂ ಪೊಲೀಸರು ಈ ವರೆಗೂ ಆರೋಪಿಯನ್ನು ಬಂಧನ ಮಾಡಿಲ್ಲ. ಪೊಲೀಸ್ ಇಲಾಖೆ ಯಾವುದೇ ರೀತಿಯ ರಾಜಕೀಯ ಪ್ರಭಾವಕ್ಕೆ ಒಳಗಾಗದೇ ತಲೆ ಮರೆಸಿಕೊಂಡ ಆರೋಪಿ ಶರಣಗೌಡನನ್ನು ಬಂಧಿಸಬೇಕು ಎಂದು ಮನವಿ ಪತ್ರದ ಮೂಲಕ ಆಗ್ರಹಿಸಿದರು.

ಮನವಿ ಸ್ವೀಕರಿಸಿ ಸಿಪಿಐ ಎಸ್.ಎಸ್. ಬಿಳಗಿ ಮಾತನಾಡಿ, ಆರೋಪಿ ಶರಣಗೌಡ ಪಾಟೀಲ ಬಂಧನಕ್ಕೆ ಈಗಾಗಲೇ ಪೊಲೀಸ್ ತಂಡ ರಚಿಸಿ ಶೋಧ ಕಾರ್ಯ ಕೈಗೊಳ್ಳಲಾಗಿದ್ದು, ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಕರ್ನಾಟಕ ಪ್ರದೇಶ ಕುರುಬರ ಸಂಘ ತಾಲೂಕು ಅಧ್ಯಕ್ಷ ಬಸವರಾಜ ಜಗ್ಗಲ, ಅಂದಪ್ಪ ಬಿಚ್ಚೂರ, ಬಸವರಾಜ ಯರಗೊಪ್ಪ, ಈಶಪ್ಪ ಜಗ್ಗಲ, ಅಶೋಕ ಕೊಪ್ಪದ, ಬಸರಾಜ ಮುಗಳಿ, ಚಂದ್ರಶೇಖರ ಉಸಲಕೊಪ್ಪ, ಶರಣಪ್ಪ ಹತ್ತಿಕಟಗಿ, ಸುನೀಲ ಬಿಸಾಟಿ, ಮುತ್ತಣ್ಣ ಕೊಪ್ಪಳ, ಮುದಿಯಪ್ಪ ಬಿಸಾಟಿ, ಹನುಮಂತಪ್ಪ ಮುತಾರಿ ಮುಂತಾದವರಿದ್ದರು.

Share this article