ನಾಗರಿಕತೆ ಬೆಳೆದರೂ ಬದಲಾಗದ ಮಹಿಳೆಯ ಸ್ಥಿತಿ

KannadaprabhaNewsNetwork | Published : Mar 23, 2025 1:31 AM

ಸಾರಾಂಶ

ಮಹಿಳೆಯರನ್ನು ಮನೆಯಲ್ಲಿ ತಂದೆ, ಶಾಲೆಯ ಶಿಕ್ಷಕ, ಸಮಾಜದಲ್ಲಿನ ಪುರುಷರು ಇನ್ನೂ ಸಹ ಕೆಟ್ಟ ದೃಷ್ಟಿಯಿಂದಲೇ ನೋಡುವ ಭಾವನೆ ಸಾಕಷ್ಟು ಇದೆ. ಅದರಲ್ಲೂ ಶಿಕ್ಷಿತ ವಲಯದಲ್ಲಿಯೂ ಇದು ಇರುವುದು ಬೇಸರದ ಸಂಗತಿ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಬೆಳೆದ ನಾಗರಿಕತೆಯ ನಡುವೆಯೂ ಮಹಿಳೆಯ ಸ್ಥಿತಿ ಘನಘೋರವಾಗಿದೆ. ಮಹಾತ್ಮ ಗಾಂಧೀಜಿ ಅವರ ಆಶಯದಂತೆ ರಾತ್ರಿಯಲ್ಲ, ಹಗಲು ಸಹ ಆಕೆ ಸ್ವತಂತ್ರವಾಗಿ ಓಡಾಡುವ ಸ್ಥಿತಿ ಇಲ್ಲ ಎಂದು ಕೊಪ್ಪಳ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ ಮಾಲಾ ಡಿ. ಬಡಿಗೇರ ಹೇಳಿದ್ದಾರೆ.

ಕನ್ನಡಪ್ರಭಪ್ರಭಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹೇಳಿದ್ದಾರೆ.

ಹಾಗಂತ ಮಹಿಳೆಯರಿಗೆ ಗೌರವವೇ ಸಿಗುತ್ತಿಲ್ಲ ಎಂದಲ್ಲ, ಸಿಗುತ್ತದೆಯಾದರೂ ಸಿಗಬೇಕಾದಷ್ಟು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಹಿಳೆಯರನ್ನು ಮನೆಯಲ್ಲಿ ತಂದೆ, ಶಾಲೆಯ ಶಿಕ್ಷಕ, ಸಮಾಜದಲ್ಲಿನ ಪುರುಷರು ಇನ್ನೂ ಸಹ ಕೆಟ್ಟ ದೃಷ್ಟಿಯಿಂದಲೇ ನೋಡುವ ಭಾವನೆ ಸಾಕಷ್ಟು ಇದೆ. ಅದರಲ್ಲೂ ಶಿಕ್ಷಿತ ವಲಯದಲ್ಲಿಯೂ ಇದು ಇರುವುದು ಬೇಸರದ ಸಂಗತಿ. ಮಹಿಳೆಯನ್ನು ಸಮಾನವಾಗಿಯೂ ಕಾಣಬೇಕು. ಆಕೆಯನ್ನು ಪುರುಷ ಸಮಾಜ ಗೌರವಿಸಬೇಕು. ಮನೆಯಿಂದ ಆಚೆಯೂ ಆಕೆಗೆ ಸಿಗಬೇಕಾದ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ. ಇನ್ನು ಸರ್ಕಾರದ ಸಂಸ್ಥೆಗಳು ಸೇರಿದಂತೆ ಅನೇಕ ಹುದ್ದೆಗಳಲ್ಲಿ ಮಹಿಳೆಯರನ್ನು ಅಷ್ಟಾಗಿ ಪರಿಗಣಿಸುವುದಿಲ್ಲ. ಇದು ಸಮಾನವಾಗಿ ಪರಿಗಣಿಸುವಂತಾಗಬೇಕು ಎನ್ನುವುದು ನನ್ನ ಬಯಕೆ ಎಂದಿದ್ದಾರೆ.

ಕನ್ನಡಕ್ಕೆ ಸಂಕಷ್ಟ:

ಕನ್ನಡ ನೆಲದಲ್ಲಿಯೇ ಕನ್ನಡ ಸಂಕಷ್ಟದಲ್ಲಿದೆ. ಅನ್ಯರ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಆಂಗ್ಲ ವ್ಯಾಮೋಹ ಹೆಚ್ಚಾಗುತ್ತಲೇ ಇದೆ. ಕನ್ನಡ ಶಾಲೆ ಮುಚ್ಚುವ ಸ್ಥಿತಿಗೆ ತಂದಿದ್ದಾರೆ. ಸರ್ಕಾರವೇ ಈಗ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸುತ್ತಿರುವುದು ಕನ್ನಡಕ್ಕೆ ದೊಡ್ಡ ಪೆಟ್ಟು. ಕನ್ನಡ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಮತ್ತು ಅಗತ್ಯ ಶಿಕ್ಷಕರನ್ನು ನೀಡಿದರೆ ಖಂಡಿತವಾಗಿಯೂ ಕನ್ನಡ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆತು, ಕನ್ನಡ ಬೆಳೆಯಲು ಕಾರಣವಾಗುತ್ತದೆ. ಆದರೆ, ಈ ದಿಸೆಯಲ್ಲಿ ಸರ್ಕಾರ ಚಿಂತನೆ ಮಾಡುತ್ತಿಲ್ಲ. ಹೀಗಾಗಿ ಪಾಲಕರು ಆಂಗ್ಲಮಾಧ್ಯಮ ಶಾಲೆಯತ್ತ ಮೊರೆ ಹೋಗುತ್ತಿದ್ದಾರೆ ಎಂದರು.

ಕೊಪ್ಪಳ ಬಳಿ ಕಾರ್ಖಾನೆಗಳು ಬರುತ್ತಿರುವುದು ಅತ್ಯಂತ ಅಘಾತಕಾರಿಯಾಗಿದೆ. ಈಗಾಗಲೇ ಅನೇಕರು ದೊಡ್ಡ ಹೋರಾಟ ಮಾಡುತ್ತಿದ್ದಾರೆ. ನಾನು ಸಹ ಕಾರ್ಖಾನೆ ಸ್ಥಾಪನೆ ವಿರೋಧಿಸಿ ನಡೆದ ಮಾನವಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಸಮ್ಮೇಳನ ಮುಗಿದ ಮೇಲೆ ಇದನ್ನು ದೊಡ್ಡ ಹೋರಾಟವಾಗಿ ರೂಪಿಸುವ ದೃಷ್ಟಿಯಿಂದ ಮನೆ-ಮನೆಗೆ ಹೋಗಿ ನಾವು ಸಹ ಗುಂಪು ಕಟ್ಟಿಕೊಂಡು, ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದ್ದಾರೆ.

ಕೊಪ್ಪಳ ಬಳಿ ಇರುವ ಕಾರ್ಖಾನೆಯಿಂದಲೇ ದೊಡ್ಡ ಸಮಸ್ಯೆಯಾಗಿದೆ. ಈಗ ಮತ್ತೊಂದು ಬೃಹತ್ ಕಾರ್ಖಾನೆ ಬಂದರೇ ಕೊಪ್ಪಳದಲ್ಲಿರಲು ಸಾಧ್ಯವೇ ಇಲ್ಲ. ಹೀಗಾಗಿ ಇದನ್ನು ಎಲ್ಲರೂ ಒಗ್ಗೂಡಿ ಹೋರಾಟ ಮಾಡಿ, ಸ್ಥಾಪಿಸದಂತೆ ನೋಡಿಕೊಳ್ಳಬೇಕು ಎಂದರು.ಕಿರುಪರಿಚಯ:

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಿರೇಕುಂಬಿಯವರಾದ ಮಾಲ ಬಡಿಗೇರ ೧೯೮೧ರಲ್ಲಿ ಉಪ್ಪಿನ ಬೆಟಗೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆಗೆ ಸೇರಿದರು. ಕೆಲ ವರ್ಷಗಳ ಬಳಿಕ ಕುಕನೂರು ತಾಲೂಕಿನ ಮಂಗಳೂರು ಶಾಲೆಗೆ ವರ್ಗವಾದರು. ನಂತರ ಭಾಗ್ಯನಗರ, ಕಿನ್ನಾಳ ಹಾಗೂ ಕವಲೂರು (ಮುಖ್ಯಶಿಕ್ಷಕಿ) ಸೇವೆ ಸಲ್ಲಿಸಿ ನಿವೃತ್ತರಾದರು.

ವಿರಂಚಿ ಕಲಾಬಳಗದಲ್ಲಿ ಸದಸ್ಯೆಯಾಗಿ ಕೆಲವು ನಾಟಕಗಳಲ್ಲಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಭಕ್ತಿಗೀತೆ, ಭಾವಗೀತೆ ಹಾಗೂ ರಂಗಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ.

ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ''''''''ನೀಲಗಂಗಾ ದತ್ತಿ ಪ್ರಶಸ್ತಿ'''''''' ಈ ಕೃತಿಗೆ ಲಭಿಸಿದ್ದು ಗಮನಾರ್ಹ. ಅದೇ ಪ್ರಕಾಶನ ಅವರ ಪ್ರಬಂಧ ಸಂಕಲನ ''''''''ಮನದಾಳ'''''''' ೨೦೨೪ರಲ್ಲಿ ಮುದ್ರಿಸಿ ಪ್ರೋತ್ಸಾಹ ನೀಡಿದೆ.

Share this article