ಎಚ್ಚರ... ಇನ್ನು ಆರಂಭವಾಗಲಿದೆ ಕಾಳಿಂಗಗಳ ಸಂಚಾರ

KannadaprabhaNewsNetwork | Published : Feb 27, 2024 1:30 AM

ಸಾರಾಂಶ

ಮಿಲನ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಸಮಯವಾದ್ದರಿಂದ ಮಾರ್ಚ್ ಮೊದಲ ವಾರದಿಂದ ಜೂನ್ ವರೆಗೆ ಕಾಳಿಂಗ ಸರ್ಪಗಳ ಓಡಾಟ ಹೆಚ್ಚಾಗಲಿದೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಮಲೆನಾಡ ತಪ್ಪಲಿನ ಪ್ರದೇಶಗಳಲ್ಲಿ ಮಾರ್ಚ್ ಮೊದಲ ವಾರದಿಂದ ಜೂನ್ ವರೆಗೆ ಕಾಳಿಂಗ ಸರ್ಪಗಳ ಓಡಾಡ ಹೆಚ್ಚಾಗಲಿದ್ದು, ಜನರ ಕಣ್ಣಿಗೆ ಕಾಣಿಸುವುದು ಸಾಮಾನ್ಯವಾಗಲಿದೆ‌.

ತಪ್ಪಲು ಪ್ರದೇಶಗಳಾದ ಅಜೆಕಾರು, ಶಿರ್ಲಾಲು, ಕೆರುವಾಶೆ, ಮಾಳ, ಮುಡಾರು, ಬಜಗೋಳಿ, ಹೊಸ್ಮಾರು, ಈದು, ಅಂಡಾರು, ಮುನಿಯಾಲು, ಮುದ್ರಾಡಿ, ಕಬ್ಬಿನಾಲೆ, ನಾಡ್ಪಾಲು, ಮಡಾಮಕ್ಕಿ, ಅಲ್ಬಾಡಿ, ಚಾರ, ಹೆಬ್ರಿ, ಕುಚ್ಚೂರು ಆಗುಂಬೆ, ಕುಂದಾಪುರ ತಾಲೂಕು, ಬೆಳ್ತಂಗಡಿ ತಾಲೂಕಿನ ಭಾಗಗಳಲ್ಲಿ ಈ ವಿಷಕಾರಿ ಹಾವಿನ ಓಡಾಟವಿರಲಿದೆ.

* ಓಡಾಟಕ್ಕೆ ಕಾರಣ:ಕಾಳಿಂಗ ಸರ್ಪಗಳು ವಿಷಹೊಂದಿರುವ ಹಾವುಗಳು. ಸಾಮಾನ್ಯವಾಗಿ ಮಾರ್ಚ್ ನಿಂದ ಜೂನ್ ಮೊದಲ ವಾರದ ವರೆಗೂ ಮಿಲನ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಸಮಯವಾಗಿದೆ. ಇದಕ್ಕೂ ಮುಂಚೆ ತನ್ನ ಆಹಾರವನ್ನು ಹುಡುಕಿ ದೇಹವನ್ನು ಮಿಲನಕ್ಕೆ ಅಣಿಗೊಳಿಸುವ ಪ್ರಕ್ರಿಯೆ ಮುಗಿಸಿರುತ್ತವೆ. ವಯಸ್ಸಿಗೆ ಬಂದ ಹೆಣ್ಣು ಹಾವು ತಾನು ಸಂತಾನೋತ್ಪತ್ತಿಗೆ ಸಿದ್ಧ ಎಂದು ತನ್ನ ಜನನಾಂಗದಿಂದ ಲೈಂಗಿಕ ಸಂಕೇತವನ್ನು ರಾಸಾಯನಿಕ (ಸೆಕ್ಸ್‌ ಫೆರಮೋನ್) ಅಂಶವನ್ನು ಹೊರಹಾಕುವುದರ ಮೂಲಕ ವ್ಯಕ್ತ ಪಡಿಸುತ್ತದೆ. ಈ ರಾಸಾಯನಿಕಕ್ಕೆ ಆಕರ್ಷಿತವಾದ ಗಂಡುಹಾವು ಮಿಲನಕ್ಕಾಗಿ ಹೆಣ್ಣಿನ ಹುಡುಕಾಟದಲ್ಲಿ ತೊಡಗುತ್ತವೆ.

* ಕಾಳಿಂಗ ಸರ್ಪಗಳ ಸೀಮಾ ವ್ಯಾಪ್ತಿ:ಕಾಳಿಂಗ ಹೆಣ್ಣು ಹಾವುಗಳು 5 ಕಿ.ಮೀ. ಸೀಮಾ ವ್ಯಾಪ್ತಿಯಲ್ಲಿ ಬದುಕುತ್ತವೆ. ಗಂಡು ಕಾಳಿಂಗಗಳು 8 ಕಿ.ಮೀ. ವ್ಯಾಪ್ತಿಯ ಸೀಮಾ ವಲಯದಲ್ಲಿ ವಾಸಿಸಬಲ್ಲವು. ಆದರೆ ಬೆದೆಯ ಕಾಲದಲ್ಲಿ ಗಂಡು 2 ಕಿ.ಮೀ. ದೂರದ ವರೆಗೂ ಕ್ರಮಿಸಿ ಮೂಲ ನೆಲೆಗೆ ವಾಪಾಸಾಗಬಲ್ಲವು. ಹೆಣ್ಣುಗಳು ಸಾಮಾನ್ಯವಾಗಿ 9 ಅಡಿಗಳಷ್ಟು, ಗಂಡು 12 ಅಡಿಗಳಿಗಿಂತ ಉದ್ದ ಬೆಳೆಯಬಲ್ಲವು.

* ದೂರ ಬಿಡಬೇಡಿ: ಬೆದೆಯ ತಿಂಗಳಲ್ಲಿ ಕಾಳಿಂಗಗಳು ಮನೆ, ಕಟ್ಟಿಗೆ ರಾಶಿ, ದನದ ಕೊಟ್ಟಿಗೆಗಳಲ್ಲಿ ಅಡಗಿ ಕುಳಿತರೆ ಉರಗ ಸಂರಕ್ಷಕರನ್ನ ಕರೆಯಿಸಿ ಹಾವನ್ನು ಸೆರೆ ಹಿಡಿದು ಸ್ವಲ್ಪ ದೂರದಲ್ಲಿ ಬಿಟ್ಟರೆ ಅಲ್ಲಿರುವ ಗಂಡು ಹೆಣ್ಣುಗಳು ಮಿಲನವಾಗುವ ಸಾಧ್ಯತೆ ಅಧಿಕ. ಬೆದೆಯ ಕಾಲ ವರ್ಷಪೂರ್ತಿ ಇರುವುದಿಲ್ಲ. ಹೆಣ್ಣು ಕಾಳಿಂಗ ಬೆದೆಗೆ ಬಂದಾಗ ಅದನ್ನು ಸೆರೆ ಹಿಡಿದು ದೂರ ಸಾಗಿಸಿಬಿಟ್ಟರೆ, ಅದಕ್ಕೆ ಗಂಡು ಸಿಗುವುದರೊಳಗೆ ಬೆದೆ ಚಕ್ರದ ಅವಧಿ ಮುಗಿದು ಗಂಡು ಸಿಕ್ಕರೂ ತಿರಸ್ಕರಿಸಬಹುದು. ಇಲ್ಲವೇ ಮಿಲನಕ್ಕೆ ಒಪ್ಪದ ಹೆಣ್ಣು, ಗಂಡಿಗೆ ಆಹಾರವಾಗಬಹುದು. ಬೆದೆಗೆ ಬಂದ‌ ಹೆಣ್ಣು ಕಾಳಿಂಗಕ್ಕಾಗಿ ನಾಲ್ಕೈದು ಗಂಡು ಕಾಳಿಂಗ ಹಾವುಗಳು ಕಾಣಸಿಗಬಹುದು.ನಂಬಿಕೆಯೇ ಸುರಕ್ಷಿತ: ಹಾವುಗಳ ಮಿಲನವನ್ನು ನೋಡಬಾರದು ಎಂಬ ನಂಬಿಕೆ ಇದೆ. ಹೆಣೆಯಾಡುವ ಹಾವುಗಳನ್ನು ನೋಡಿದರೆ ಅವುಗಳ ಮಿಲನಕ್ಕೆ ಮಾನವರಿಂದ ತೊಂದರೆ ಆಗಬಾರದು ಎಂಬುದೇ ಇದರ ಹಿಂದಿನ ಉದ್ದೇಶ. ನಂಬಿಕೆಗಳನ್ನು ಹಾಗೆಯೇ ಉಳಿಸಿಕೊಳ್ಳುವಂತಾಗಲಿ. ಗಂಡು ಕಾಳಿಂಗಗಳ ಹೋರಾಟವನ್ನು ಕೊಂಬಾಟ್ ಎಂದು ಕರೆಯುತ್ತಾರೆ.* ಸುರಕ್ಷತೆ ಮುಖ್ಯ: ಕಾಳಿಂಗ ಹಾವುಗಳು ಮನೆಯೊಳಗೆ ಬಂದರೆ ಅರಣ್ಯ ಇಲಾಖೆಯ ಸಂಪರ್ಕಿಸಿ ಮಾಹಿತಿ ಪಡೆದು ಉರಗತಜ್ಞರನ್ನು ಸಂಪರ್ಕಿಸಿ. ಹಾವು ಹಿಡಿಯುವುದು ಅಪಾಯಕಾರಿ, ಆದ್ದರಿಂದ ಸುರಕ್ಷಾ ವಿಧಾನಗಳು ಮುಖ್ಯ. ಮದ್ಯಪಾನ ಮಾಡಿ ಹಾವು ಹಿಡಿಯಲು ಪ್ರಯತ್ನಿಸಬೇಡಿ. ಪರಿಣಿತರು ಹಾವು ಹಿಡಿಯಲಿ. ರಸ್ತೆ ಅಗಲೀಕರಣ, ಅರಣ್ಯನಾಶಗಳಿಂದ ಕಾಳಿಂಗ ಸರ್ಪಗಳು ತೋಟಗಳಲ್ಲಿ ಕಾಣಸಿಗುತ್ತಿವೆ. * ಹವಾಮಾನ ವೈಪರೀತ್ಯ: ಕಳೆದ ಎರಡು ತಿಂಗಳಲ್ಲಿ ಬಿಸಿಲ ಬೇಗೆ ಏರಿಕೆಯಾಗುತ್ತಿದ್ದು, ಉರಗಗಳ ಸಂತಾನೋತ್ಪತ್ತಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಪರಿಸರ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಮಳೆಕಾಡುಗಳ ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಕಾಳಿಂಗ ಸರ್ಪಗಳು ಕಾಣಸಿಗುವ ಕಾರಣ ಬಿಸಿ ವಾತಾವರಣ ಪ್ರಾಣಿ ಸಂಕುಲಕ್ಕೆ ನೇರ ಪರಿಣಾಮ ಬೀಳಬಹುದು.----

ಬೆದೆಯ ತಿಂಗಳಲ್ಲಿ ಹೆಣ್ಣು ಅಥವಾ ಗಂಡು ಕಾಳಿಂಗಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬಾರದು. ಹೆಣ್ಣು ಸಂಚರಿಸಿದ ದಾರಿಯನ್ನು ಹುಡುಕಿ ಬರುವ ಗಂಡುಗಳ ಮಧ್ಯೆ ಕೆಲವು ಸಲ ಭೀಕರ ಕದನ ಏರ್ಪಡುತ್ತದೆ. ಹೆಣ್ಣನ್ನು ಸೆರೆ ಹಿಡಿದು ಚೀಲಕ್ಕೆ ತುಂಬಿದರೆ ಹೆಣ್ಣು ಫೆರೋಮೋನು ಸಿಂಪಡಿಸಿ ಸಾಗಿದ ಹಾದಿ ತುಂಡಾಗಿ ಗಂಡು ಹೆಣ್ಣನ್ನು ಹುಡುಕಲು ತೊಂದರೆಯಾಗುತ್ತದೆ. ಇಲ್ಲಿ ಸಂರಕ್ಷಣೆ ಎಂದರೆ ಹಾವನ್ನು ತನ್ನ ಪಾಡಿಗೆ ಹೋಗಲು ಬಿಡುವುದು. ಕಾಳಿಂಗಗಳ ಮಿಲನದ ದೃಶ್ಯಗಳು ಕಂಡುಬಂದರೆ ದೂರದಿಂದ ಗಮನಿಸಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿ. ಹಾವುಗಳು 2-3 ದಿನ ಅಲ್ಲಿದ್ದು ನಂತರ ಹೊರಟು ಹೋಗುತ್ತವೆ.

। ನಾಗರಾಜ್ ಬೆಳ್ಳೂರು, ಉರಗ ತಜ್ಞರು, ನಿಸರ್ಗ ಕನ್ಸರ್‌ವೇಷನ್‌ ಟ್ರಸ್ಟ್ ಶಿವಮೊಗ್ಗ-------

ಕಾಳಿಂಗ ಸರ್ಪಗಳು ಪರಿಸರ ಸಂರಕ್ಷಣೆಯಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಮಾರ್ಚ್‌ನಿಂದ ಜೂನ್‌ ವರೆಗೆ ಮಿಲನ ಪ್ರಕ್ರಿಯೆ ನಡೆಯುತ್ತದೆ. ಕಾಳಿಂಗಗಳು ಗೂಡು ಕಟ್ಟಿ ಮೊಟ್ಟೆಯಿಟ್ಟು ಜನ್ಮನೀಡುವ ಅಪರೂಪದ ಹಾವುಗಳು. ಕಾಳಿಂಗ ಸರ್ಪಗಳನ್ನು ಹಿಡಿಯಲು ಪ್ರಯತ್ನಿಸಬೇಡಿ. ವಿಷಕಾರಿ ಹಾವುಗಳೇ ಕಾಳಿಂಗದ ಮುಖ್ಯಾಹಾರ. ಇಲಿ ಹೆಗ್ಗಣಗಳು ಮನೆಯೊಳಗೆ ಅಕ್ಕಪಕ್ಕ ಬರದಂತೆ ನೋಡಿಕೊಂಡರೆ ಹಾವುಗಳು ಮನೆಯೊಳಗೆ ಬರುವುದಿಲ್ಲ.। ಅಜಯ್ ಗಿರಿ, ಖ್ಯಾತ ಉರಗ ತಜ್ಞ, ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ

Share this article