ಮಂಡ್ಯ ಮಂಜುನಾಥಕನ್ನಡಪ್ರಭ ವಾರ್ತೆ ಮಂಡ್ಯ
೨೦೧೮ರ ಸೆಪ್ಟೆಂಬರ್ ೨೫ರಲ್ಲಿ ಬೇಬಿ ಬೆಟ್ಟದಲ್ಲಿ ಉಂಟಾದ ಭಾರೀ ಶಬ್ಧ ಜಿಲ್ಲೆಯ ಜನರನ್ನು ತಲ್ಲಣಿಸುವಂತೆ ಮಾಡಿತ್ತು. ಈ ಭಾರೀ ಶಬ್ಧದ ಮೂಲ ಹುಡುಕಿದಾಗ ಬೇಬಿ ಬೆಟ್ಟದಲ್ಲಿ ಸಂಭವಿಸಿದ ಗಣಿ ಸ್ಫೋಟದ ಶಬ್ಧ ಎನ್ನುವುದು ಖಚಿತಪಟ್ಟಿತ್ತು. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಶಬ್ಧದ ಮೂಲ ಪತ್ತೆ ಮಾಡುವುದರೊಂದಿಗೆ ಸ್ಫೋಟದಿಂದ ಭೂಮಿಯೊಳಗೆ ಕಂಪನದ ಅಲೆಗಳು ಸಾಗಿರುವುದನ್ನು ಗುರುತಿಸಿತ್ತು. ಸ್ಫೋಟ ಕುರಿತು ಬಿಡುಗಡೆ ಮಾಡಿದ ವರದಿಯಲ್ಲಿ ಕೆಆರ್ಎಸ್ ಅಣೆಕಟ್ಟೆ ಸುತ್ತ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲ ಗಣಿ ಚಟುವಟಿಕೆಗಳನ್ನು ನಿಷೇಧಿಸುವಂತೆ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಸಲಹೆ ನೀಡಿತ್ತು.
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಂಡ್ಯ ಕೇಂದ್ರವನ್ನು ಕೃಷ್ಣರಾಜಸಾಗರ ಅಣೆಕಟ್ಟು ಸಮೀಪ ೧೨.೫.೨೦೧೧ರಲ್ಲಿ ತೆರೆಯಲಾಗಿದೆ. ಇದರ ಮುಖ್ಯ ನಿಯಂತ್ರಣಾ ಕೇಂದ್ರ ಬೆಂಗಳೂರಿನಲ್ಲಿದೆ. ಭೂಕಂಪ ಹಾಗೂ ಗಣಿ ಸ್ಫೋಟದಿಂದ ಭೂಮಿಯೊಳಗೆ ಉಂಟಾಗುವ ಬದಲಾವಣೆಗಳು, ಕಂಪನದ ಪ್ರಮಾಣದ ಮಾಹಿತಿಯನ್ನು ವಿಶ್ಲೇಷಣೆ ಮಾಡುವುದಲ್ಲದೇ, ಸೂಕ್ಷ್ಮ ಅಂಶಗಳನ್ನು ಗುರುತಿಸಿ ತಾಂತ್ರಿಕ ವರದಿ ಸಿದ್ಧಪಡಿಸಿ ಸಂಬಂಧಿಸಿದವರಿಗೆ ರವಾನಿಸುವ ಕೆಲಸವನ್ನು ಮಾಡುತ್ತಿದೆ.ಪರೀಕ್ಷಾರ್ಥ ಸ್ಫೋಟಕ್ಕೆ ಕೂಗೆದ್ದಿರುವ ಈ ಸಮಯದಲ್ಲಿ ಭೂಮಿಯೊಳಗೆ ಸಂಭವಿಸುವ ಭೂಕಂಪನ ಹಾಗೂ ಗಣಿಗಾರಿಕೆ ಚಟುವಟಿಕೆಗಳ ಉಸ್ತುವಾರಿ ಮಾಡುತ್ತಿರುವ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಸಂಯೋಜಿಕ ನೋಂದಾಯಿತ ಸ್ವಾಯತ್ತ ಸಂಸ್ಥೆ ನೀಡಿರುವ ವರದಿ ಬಗ್ಗೆಯೇ ವಿಶ್ವಾಸವಿಲ್ಲ ಎನ್ನುವಂತಾಗಿದೆ.
ಕೃಷ್ಣರಾಜಸಾಗರ ಜಲಾಶಯದ ಸುರಕ್ಷತೆ ದೃಷ್ಟಿಯಿಂದ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಗಣಿ ನಿಷೇಧ ಆದೇಶ ಹೊರಡಿಸಿದ ಹೈಕೋರ್ಟ್ ಮೂಲಕವೇ ಪರೀಕ್ಷಾರ್ಥ ಸ್ಫೋಟಕ್ಕೆ ಆದೇಶ ಹೊರಡಿಸಿರುವುದರ ಹಿಂದೆ ಗಣಿ ಧಣಿಗಳು ನಡೆಸುತ್ತಿರುವ ಲಾಭಿ ಮತ್ತು ರಾಜಕೀಯ ಒತ್ತಡವಿರುವಂತೆ ಕಂಡುಬರುತ್ತಿದೆ. ತಮಗೆ ಅನುಕೂಲ ಮಾಡಿಕೊಳ್ಳುವ ಉದ್ದೇಶದಿಂದ ಗಣಿ ಮಾಲೀಕರು ಗಣಿ ನಿಷೇಧ ಆದೇಶವನ್ನು ತೆರವುಗೊಳಿಸುವುದನ್ನು ಗುರಿಯಾಗಿಸಿಕೊಂಡು ಕಾನೂನು ಅಸ್ತ್ರಕ್ಕೆ ಪ್ರತಿಯಾಗಿ ಕಾನೂನು ಅಸ್ತ್ರವನ್ನೇ ಬಳಸಿ ಹೋರಾಟ ನಡೆಸುತ್ತಿದ್ದಾರೆ.
ಗಣಿಗಾರಿಕೆ ನಡೆಸುವುದಕ್ಕೆ ಜಿಲ್ಲೆಯ ಬೇರೆ ಕಡೆಗಳಲ್ಲಿ ಅವಕಾಶಗಳಿದ್ದರೂ ಗಣಿ ಧಣಿಗಳು ಬೇಬಿ ಬೆಟ್ಟವನ್ನೇ ಗಣಿಗಾರಿಕೆಗೆ ಮುಖ್ಯ ಕೇಂದ್ರಸ್ಥಾನ ಮಾಡಿಕೊಂಡಿರುವುದೇಕೆ ಎನ್ನುವುದು ಸಹಜವಾಗಿ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯಾಗಿದೆ. ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ, ಚಿನಕುರಳಿ ಹಾಗೂ ಸುತ್ತಲಿನ ಪ್ರದೇಶ ಗ್ರಾನೈಟಿಕ್ ಶಿಲಾ ನಿಕ್ಷೇಪ ಹೊಂದಿರುವುದರಿಂದಲೇ ಕಲ್ಲು ಗಣಿ ಧಣಿಗಳು ಇಡೀ ಪ್ರದೇಶದ ಮೇಲೆ ಬಲವಾದ ಹಿಡಿತ ಸಾಧಿಸಿಕೊಂಡು ಬರುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಬಹುಭಾಗ ನೈಸ್ ಶಿಲಾ ಪ್ರದೇಶವಾಗಿದೆ ಎನ್ನುವುದು ಭೌಗೋಳಿಕ ಲಕ್ಷಣದಿಂದ ತಿಳಿದುಬಂದಿರುವ ಅಂಶವಾಗಿದೆ.
ಧಾರವಾಡ ಶಿಲಾ ವರ್ಗದ ರೆಸ್ಟ್ ಕಲ್ಲುಗಳು ಹೆಚ್ಚು ಅಗಲವಿಲ್ಲದ ಪಟ್ಟೆಗಳು ಉದ್ದುದ್ದವಾಗಿ ಜಿಲ್ಲೆಯ ಹಲವೆಡೆ ಸಾಗಿಹೋಗಿದ್ದು, ಪಟ್ಟೆಗಳು ಬೇಬಿಬೆಟ್ಟ, ಚಿನಕುರಳಿ ಮಧ್ಯದಲ್ಲೂ ಹಾದುಹೋಗಿವೆ. ಅಗ್ನಿ ಶಿಲೆಯಿಂದ ಆವೃತವಾಗಿ ನುಣುಪಾಗಿರುವ ಶಿಲಾ ಭಂಡಾರಕ್ಕೆ ಹೆಚ್ಚು ಬೇಡಿಕೆ ಮತ್ತು ಬೆಲೆ ಇರುವ ಕಾರಣದಿಂದಲೇ ಗಣಿಗಾರಿಕೆ ಇಲ್ಲಿ ವ್ಯಾಪಕವಾಗಿ ಹರಡಿಕೊಂಡಿದೆ. ಈ ಜಾಗದಿಂದ ಹೊರ ಹೋಗುವುದಕ್ಕೆ ಗಣಿಧಣಿಗಳು ಸುಲಭವಾಗಿ ಒಪ್ಪುತ್ತಿಲ್ಲ ಎಂದು ತಿಳಿದುಬಂದಿದೆ.ಮೌನಕ್ಕೆ ಜಾರಿದ ಜನಪ್ರತಿನಿಧಿಗಳು
ಪರೀಕ್ಷಾರ್ಥ ಸ್ಫೋಟವೇ ಬೇಕಿಲ್ಲ. ಅಷ್ಟಕ್ಕೂ ಕೆಆರ್ಎಸ್ ಸಮೀಪವೇ ಗಣಿಗಾರಿಕೆ ನಡೆಸಬೇಕೆಂಬ ಹಠ ಏಕೆ. ದೂರ ಎಲ್ಲಾದರೂ ಗಣಿಗಾರಿಕೆ ಮಾಡಿಕೊಳ್ಳಲಿ. ಕೆಆರ್ಎಸ್ಗೆ ಅಪಾಯವನ್ನು ಉಂಟುಮಾಡುವ ಗಣಿಗಾರಿಕೆಗೆ ಅವಕಾಶ ನೀಡಬಾರದು.
- ದರ್ಶನ್ ಪುಟ್ಟಣ್ಣಯ್ಯ, ಶಾಸಕ, ಮೇಲುಕೋಟೆ ಕ್ಷೇತ್ರಇದೊಂದು ಸೂಕ್ಷ್ಮ ಗಂಭೀರ ವಿಷಯ. ಅಣೆಕಟ್ಟೆ ಸುರಕ್ಷತೆ ಕಾಪಾಡುವುದರೊಂದಿಗೆ ಹೈಕೋರ್ಟ್ ಆದೇಶ ಪಾಲನೆ ಮಾಡಬೇಕಿದೆ. ಅಣೆಕಟ್ಟು ಸುರಕ್ಷತೆಗೇ ಮೊದಲ ಆದ್ಯತೆ ಇರಬೇಕು. ಅದಕ್ಕೆ ಅಪಾಯ ಉಂಟಾಗುವಂತ ಪ್ರಕ್ರಿಯೆಗಳಿಗೆ ವಿರೋಧವಿದೆ.
- ಮಂಜುನಾಥ್, ಗ್ರಾ.ಪಂ ಸದಸ್ಯ, ಹುಲಿಕೆರೆಅಧಿಕಾರಿಗಳು ಪಾರದರ್ಶಕವಾಗಿ ವರದಿ ನೀಡುತ್ತಾರೆ ಎನ್ನುವುದು ನಂಬಲು ಸಾಧ್ಯವಿಲ್ಲ. ಕೇವಲ ಬಂಡವಾಳ ಷಾಯಿಗಳು ಹಣ ಮಾಡುವ ಉದ್ದೇಶದಿಂದ ಲಕ್ಷಾಂತರ ಮಂದಿ ನಂಬಿಕೊಂಡು ಜೀವನಾಧಾರವಾಗಿರುವ ಅಣೆಕಟ್ಟೆಗೆ ಅಪಾಯ ಎದುರಾಗಲಿದೆ ಎಂದರೆ ಟ್ರಯಲ್ ಬ್ಲಾಸ್ಟ್ ಮಾಡುವುದು ಬೇಡ.
- ಭರತ್, ಮಜ್ಜಿಗೆಪುರ ಅಣೆಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸಿದರೆ ಅಣೆಕಟ್ಟೆಗೆ ಸುರಕ್ಷತೆಗೆ ಅಡಚಣೆಯಾಲಿಗಲಿದೆ ಎಂದು ಹಲವರು ಹೇಳುತ್ತಿದ್ದಾರೆ. ಸರಿಯಾದ ಚಿತ್ರಣ ಗೊತ್ತಾಗುತ್ತಿಲ್ಲ. ಜೊತೆಗೆ ಅಣೆಕಟ್ಟೆ ಸಾಮರ್ಥ್ಯ ತಿಳಿಯಬೇಕಾಗಿರುವುದರಿಂದ ಕೆಆರ್ಎಸ್ ಬಳಿ ಟ್ರಯಲ್ ಬ್ಲಾಸ್ಟ್ ಮಾಡುವುದು ಸೂಕ್ತ.- ಮಂಜು, ಗ್ರಾಫಂ ಸದಸ್ಯ, ಕೆಆರ್ಎಸ್ಕೆಆರ್ಎಸ್ ಅಣೆಕಟ್ಟೆ ತುಂಬಾ ಹಳೆಯದಾಗಿದ್ದು ಟ್ರಯಲ್ ಬ್ಲಾಸ್ಟ್ ಮಾಡುವುದರಿಂದ ಅಣೆಕಟ್ಟೆಯ ಸಾಮರ್ಥ್ಯ ಹಾಗೂ ಭದ್ರತೆ ತಿಳಿಯಲಿದೆ, ಹಾಗಾಗಿ ಅಧಿಕಾರಿಗಳು ಯಾವುದೇ ಗಣಿದಣಿಗಳು ಅಥವಾ ರಾಜಕಾರಣಿಗಳ ಒತ್ತಡ, ಆಮಿಷಗಳಿಗೆ ಬಲಿಯಾಗದೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಿ ವಸ್ತು ಸ್ಥಿತಿ ಚಿತ್ರಣ ನೀಡಬೇಕು.
-ಗುರುಪ್ರಸಾದ್, ನೆಲಮನೆ