- ಜಗಳೂರಲ್ಲಿ ಬಸ್ ಚಾಲಕರ ಅತಿ ವೇಗ, ಅಜಾಗರೂಕತೆ ಚಾಲನೆಗೆ ಬ್ರೇಕ್ ಹಾಕಲು ಒತ್ತಾಯ
ಪಟ್ಟಣದ ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿಯ ಎನ್ಎಂಸಿ ಹೋಟೆಲ್ ಬಳಿ ಬುಧವಾರ ಮಧಾಹ್ನ ಖಾಸಗಿ ಬಸ್ ಬೈಕ್ ಮೇಲೆ ಹರಿದ ಪರಿಣಾಮ ಇಬ್ಬರು ಬಸ್ಸಿನ ಚಕ್ರಕ್ಕೆ ಸಿಲುಕಿ, ಸಾವನ್ನಪ್ಪಿದ್ದಾರೆ. ಉದ್ರಿಕ್ತ ಜನರು ಬಸ್ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಜಗಳೂರು ತಾಲೂಕಿನ ತಮಲೇಹಳ್ಳಿ ಗ್ರಾಮದ ರಾಜು (42), ಓಬಳೇಶ್ (60) ಮೃತ ದುರ್ದೈವಿಗಳು. ದಾವಣಗೆರೆ ಕಡೆಗೆ ಹೊರಟಿದ್ದ ಎಸ್ಆರ್ಇ ಖಾಸಗಿ ಬಸ್ ಪಟ್ಟಣದ ಹೃದಯ ಭಾಗ ಪ್ರವೇಶಿಸುತ್ತಿತ್ತು. ಇದೇ ವೇಳೆ ಜನನಿಬಿಡ ಪ್ರದೇಶದಲ್ಲಿ ಬೈಕ್ನಲ್ಲಿ ಇಬ್ಬರು ನಿಧಾನವಾಗಿ ಸಾಗುತ್ತಿದ್ದರು. ಬಸ್ ಚಾಲಕನ ಅತಿ ವೇಗ, ಅಜಾಗರೂಕತೆಯ ಚಾಲನೆಯಿಂದಾಗಿ ಅಪಘಾತ ಸಂಭವಿಸಿತು. ಬಸ್ಸಿನ ಚಕ್ರಗಳು ಬೈಕ್ನ ಮೇಲೆ ಹರಿದಿದೆ. ಪರಿಣಾಮ ಓರ್ವ ಬಸ್ ಚಕ್ರಗಳಡಿಯೇ ಪ್ರಾಣ ಬಿಟ್ಟರೆ, ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾರೆ.ಭೀಕರ ಅಪಘಾತದಿಂದ ಆಕ್ರೋಶಗೊಂಡ ಸಾರ್ವಜನಿಕರು, ಖಾಸಗಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಬಸ್ಸು ಚಾಲಕರ ಮಿತಿಮೀರಿದ ವೇಗ, ಅಜಾಗರೂಕತೆ ವಾಹನ ಚಾಲನೆಯಿಂದಾಗಿ ಅಮಾಯಕರು ಜೀವ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಇದೆ. ಮೊದಲು ಪೊಲೀಸರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಖಾಸಗಿ, ಸರ್ಕಾರಿ ಬಸ್, ಟಿಪ್ಪರ್ ಇತರೆ ವಾಹನಗಳ ಚಾಲಕರಿಗೆ ಸೂಕ್ತ ಸಲಹೆ-ಸೂಚನೆ ನೀಡಬೇಕು. ವಾಹನಗಳ ಅತಿ ವೇಗ, ಅಜಾಗರೂಕತೆ ಚಾಲನೆಗೆ ಬ್ರೇಕ್ ಹಾಕಲು ಕಠಿಣ ಕ್ರಮಗಳ ಕೈಗೊಳ್ಳಬೇಕೆಂದು ಪಟ್ಟುಹಿಡಿದರು.
- - - -14ಕೆಡಿವಿಜಿ20: ಜಗಳೂರು ಪಟ್ಟಣದಲ್ಲಿ ಬೈಕ್ ಸವಾರರಿಬ್ಬರ ಬಲಿ ಪಡೆದ ಖಾಸಗಿ ಬಸ್. -14ಕೆಡಿವಿಜಿ21: ಬೈಕ್ ಸವಾರರಿಬ್ಬರ ಮೇಲೆ ಬಸ್ ಚಕ್ರಗಳು ಹರಿದಿರುವುದು.