ಮಹಿಳೆಯರು ಸಾಧನೆ ಮಾಡದ ಕ್ಷೇತ್ರಗಳೇ ಇಲ್ಲ-ಪಿಎಸ್‌ಐ ಸವಿತಾ

KannadaprabhaNewsNetwork | Published : Mar 10, 2024 1:48 AM

ಸಾರಾಂಶ

ಭಾರತದ ಮೇಲೆ ಆಕ್ರಮಣ ಮಾಡಿ ಲೂಟಿಗೈದು, ಮಹಿಳೆಯರ ಮಾನಹರಣ ಮಾಡಿದ ಔರಂಗಜೇಬ, ಘಜನಿ ಮಹಮ್ಮದ ಇವರೆಲ್ಲರ ವಿರುದ್ಧ ಮಹಿಳೆಯರೇ ಹೋರಾಡಿದ್ದಾರೆ. ಸಾಧನೆ ಮಾಡದ ಕ್ಷೇತ್ರಗಳೇ ಇಲ್ಲ. ಸಾಧನೆ ಮಾಡುವಲ್ಲಿ ಪುರುಷರು ಹಿಂದೆ ಬಿದ್ದಿದ್ದಾರೆ.

ನರಗುಂದ: ಭಾರತದ ಮೇಲೆ ಆಕ್ರಮಣ ಮಾಡಿ ಲೂಟಿಗೈದು, ಮಹಿಳೆಯರ ಮಾನಹರಣ ಮಾಡಿದ ಔರಂಗಜೇಬ, ಘಜನಿ ಮಹಮ್ಮದ ಇವರೆಲ್ಲರ ವಿರುದ್ಧ ಮಹಿಳೆಯರೇ ಹೋರಾಡಿದ್ದಾರೆ. ಸಾಧನೆ ಮಾಡದ ಕ್ಷೇತ್ರಗಳೇ ಇಲ್ಲ. ಸಾಧನೆ ಮಾಡುವಲ್ಲಿ ಪುರುಷರು ಹಿಂದೆ ಬಿದ್ದಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಪುರುಷರ ದಿನ ಆಚರಣೆ ಮಾಡಬೇಕೆಂದು ನರಗುಂದ ಪೊಲೀಸ್‌ ಠಾಣೆಯ ಪಿಎಸ್ಐ ಸವಿತಾ ಮುನ್ಯಾಳ ಹೇಳಿದರು. ಅವರು ಪುರಸಭೆ ಆವರಣದಲ್ಲಿ ಶುಕ್ರವಾರ ಸಂಜೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಶಿವರಾತ್ರಿಯ 88ನೇ ತ್ರಿಮೂರ್ತಿ ಶಿವಜಯಂತಿ ಕಾರ್ಯಕ್ರಮದಲ್ಲಿ ಮಹಿಳಾ ದಿನಾಚರಣೆ, ಕಾನೂನು ಮತ್ತು ಆಧ್ಯಾತ್ಮ ವಿಷಯದ ಕುರಿತು ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪುರುಷರಿಗೂ ಜನ್ಮ ನೀಡಿದ್ದು ಹೆಣ್ಣು, ಜಗತ್ತಿನಲ್ಲಿ ಭಾರತವನ್ನು ತಂದೆಗೆ ಬದಲಾಗಿ ಮಾತೆಗೆ ಹೋಲಿಸಿದ್ದಾರೆ. ನದಿಗಳು ತಾಯಿ ಹೆಸರಲ್ಲಿವೆ. ಸ್ತ್ರೀ ಯನ್ನು ಗೌರವಿಸಲ್ಪಡುವ ಜಾಗದಲ್ಲಿ ಭಗವಂತನಿರುತ್ತಾನೆ. ಹೆಣ್ಣಿನಲ್ಲಿ ಸಹನೆ, ತಾಳ್ಮೆ, ಶಾಂತಿ, ಸಮಾಧಾನ ಎಲ್ಲವೂ ಇದೆ. ಸಮಯ ಬಂದರೆ ಸುನಾಮಿಯೂ ಆಗುತ್ತಾಳೆ. ಹೆಣ್ಣು ಹುಣ್ಣು ಅಲ್ಲ, ಹೊನ್ನು ಆಗಿದ್ದಾಳೆ. ಪೌರಾಣಿಕ ಇತಿಹಾಸದಲ್ಲಿ ರಾಕ್ಷಸರ ವಂಶವನ್ನು ನಾಶ ಮಾಡಿದ್ದು ದೇವತೆ ಆಗಿದ್ದಾಳೆ. ಭಾರತಾಂಬೆ ಜಗತ್ತಿನ ಉತ್ತುಂಗಕ್ಕೇರಲು ಸ್ತ್ರೀ ಶಕ್ತಿ ಬೇಕೆಬೇಕು. ದೇಶ ಮತ್ತು ಸಂಸ್ಕೃತಿಯ ಉಳಿವಿಗಾಗಿ ರಜಪೂತ ಮಹಿಳೆಯರ ತ್ಯಾಗಬಲಿದಾನ ದೊಡ್ಡದಿದೆ. ಹೀಗಾಗಿ ಹೆಣ್ಣು ಸಾಮಾನ್ಯಳಲ್ಲ ಎಂದು ಹೇಳಿದರು.

ದಾಂಡೇಲಿ ಸಿವಿಲ್ ನ್ಯಾಯಾಧೀಶೆ ರೋಹಿಣಿ ಬಸಾಪೂರ ಮಾತನಾಡಿ, ಕಾನೂನು ಮತ್ತು ಆಧ್ಯಾತ್ಮ ಪರಸ್ಪರ ವಿರುದ್ಧ ದಿಕ್ಕಿನಲ್ಲಿವೆ. ಮನಸ್ಸಿನಲ್ಲಿ ನಾವೇನೇ ಯೋಚಿಸಲಿ ಅದಕ್ಕೆ ಕಾನೂನಿನಲ್ಲಿ ಶಿಕ್ಷೆ ಇಲ್ಲ. ಅಪರಾಧ ಮಾಡಿ ಜೈಲುವಾಸ ಅನುಭವಿಸಿ ಶಿಕ್ಷೆಗೊಳಗಾದ ವ್ಯಕ್ತಿ ಪಶ್ಚಾತ್ತಾಪ ಪಡುತ್ತಾನೆ. ಹೀಗಾಗಿ ಚಿಕ್ಕ ವಯಸ್ಸಿನಲ್ಲೇ ಸಂಸ್ಕಾರ ಮತ್ತು ದೈವಭಕ್ತಿಯನ್ನು ಕಲಿಸಿದರೆ ಆ ಕುಟುಂಬ ಸುಖಿಃಭವ ಆಗುತ್ತದೆ. ಸಂಸ್ಕಾರವಿಲ್ಲದಿದ್ದರೆ ಜಗತ್ತಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತವೆ. ಇತ್ತೀಚೆಗೆ ಯುವಕರು ಡ್ರಗ್ಸಗೆ ದಾಸರಾಗಿ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಜಾತಿ ಮತ ಇವುಗಳನ್ನು ಮನುಷ್ಯರು ಮಾಡಿದ್ದು, ಹುಟ್ಟಿನಿಂದ ನಾವೆಲ್ಲರೂ ಒಂದೇ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಕೀಲ ಬಿ. ಎನ್. ಭೋಸಲೆ ಮಾತನಾಡಿ, ಜೀವನದಲ್ಲಿ ಸಂಸ್ಕಾರವಂತರಾಗಿ, ಸನ್ಮಾರ್ಗದಲ್ಲಿ ನಡೆಯಬೇಕಾದರೆ ಮೌಲ್ಯಾಧಾರಿತ ಶಿಕ್ಷಣ ಪಡೆಯುವುದೊಂದೇ ಪರಿಹಾರ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರನ್ನು ಮತ್ತು ಧರ್ಮಸ್ಥಳ ಸ್ವಸಹಾಯ ಸಂಘದ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬ್ರ.ಕು. ಪ್ರಬಕ್ಕನವರು, ಯಲ್ಲಮ್ಮನ ಗುಡ್ಡದ ಸಂಚಾಲಕಿ ಬ್ರ.ಕು. ರಾಜೇಶ್ವರಿ, ರೋಣ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಸಜ್ಜನ, ನ್ಯಾಯವಾದಿಗಳಾದ ಎಸ್. ಕೆ. ಹರಪನಹಳ್ಳಿ, ಅಪ್ಪಣ್ಣ ನಾಯ್ಕರ, ಆರ್. ಆರ್. ನಾಯ್ಕರ, ಡಾ. ಸುಮಂಗಲಾ ಸವದತ್ತಿ, ಗಂಗಾ ರಾಯನಗೌಡ್ರ, ಕವಿತಾ ಪಾಟೀಲ, ಜಗದೀಶ ಭಂಡಾರಿ, ವ್ಹಿ. ಎನ್. ಕೊಳ್ಳಿಯವರ, ಡಾ.ವ್ಹಿ.ಎಸ್. ವೀರನಗೌಡ್ರ, ಚನಬಸಪ್ಪ ಕಂಠಿ, ಶಿವಪ್ಪ ಬೊಳಶೆಟ್ಟಿ, ಬಾಳಕಾಯಿ, ಶಿಕ್ಷಕ ಮಾದರ, ರಂಗಪ್ಪ ತೆಗ್ಗಿನಮನಿ, ಮಂಗಳಾ ಪಾಟೀಲ, ಬಸನಗೌಡ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Share this article