ಸಂವಿಧಾನ ವಿಷಯಕ್ಕೆ ಬಂದ್ರೆ ಅನಂತಕುಮಾರ್‌ ಅಡ್ರೆಸ್ ಇರಲ್ಲಾ

KannadaprabhaNewsNetwork |  
Published : Mar 14, 2024, 02:02 AM IST
 ಮಾಜಿ ಸಚಿವ ನರಸಿಂಹ ನಾಯಕ್‌ (ರಾಜೂಗೌಡ) ಅವರು ಸಮಾರಂಭವೊಂದರಲ್ಲಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ವಿವಾದಾತ್ಮಕ ಹೇಳಿಕೆಗಳ ನೀಡುವ ಸ್ವಪಕ್ಷ ಬಿಜೆಪಿ ಮುಖಂಡರ ವಿರುದ್ಧವೇ ಮಾಜಿ ಸಚಿವ, ಬಿಜೆಪಿ ರಾಜ್ಯ ಮುಖಂಡ ನರಸಿಂಹ ನಾಯಕ್ (ರಾಜೂಗೌಡ) ಕಿಡಿ ಕಾರಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ವಿವಾದಾತ್ಮಕ ಹೇಳಿಕೆಗಳ ನೀಡುವ ಸ್ವಪಕ್ಷ ಬಿಜೆಪಿ ಮುಖಂಡರ ವಿರುದ್ಧವೇ ಮಾಜಿ ಸಚಿವ, ಬಿಜೆಪಿ ರಾಜ್ಯ ಮುಖಂಡ ನರಸಿಂಹ ನಾಯಕ್ (ರಾಜೂಗೌಡ) ಕಿಡಿ ಕಾರಿದ್ದಾರೆ.

ಸಂವಿಧಾನ ಕುರಿತು ಇತ್ತೀಚೆಗೆ ಹೇಳಿಕೆ ನೀಡಿದ್ದ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಸಚಿವ ರಾಜೂಗೌಡ, ಬಾಬಾ ಸಾಹೇಬ್‌ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಅನಂತಕುಮಾರ್‌ ಅಲ್ಲ, ಯಾರಿಂದಲೂ ಸಂವಿಧಾನ ಬದಲಾಯಿಸೋಕಾಗಲ್ಲ ಎಂದು ಯಾದಗಿರಿಯಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದವರೆದುರು ತೀವ್ರ ವಾಗ್ದಾಳಿ ನಡೆಸಿದರು.

ಮುಂದುವರಿದು ಮಾತನಾಡಿದ ರಾಜೂಗೌಡ, 2018 ರಲ್ಲಿ ಇದೇ ಹೆಗಡೆಯವರು ಮೀಸಲಾತಿ ತೆಗೆಯುತ್ತೇವೆ ಎಂದಿದ್ದರು. 2019 ರಲ್ಲಿ ಗೆದ್ದ ಮೇಲೆ ಈ ಅನಂತಕುಮಾರ್ ಹೆಗಡೆ ಎಲ್ಲಿ ಹೋದರು? ಎಂದು ಪ್ರಶ್ನಿಸಿದ ರಾಜೂಗೌಡ, ಟಿಕೆಟ್ ಆಸೆಗೋಸ್ಕರ ಹೆಗಡೆ ಈ ರೀತಿ ಮಾತಾನಾಡುತ್ತಿದ್ದಾರೆ. ಅವರ ಹೇಳಿಕೆಗಳಿಗೂ ಬಿಜೆಪಿಗೂ ಸಂಬಂಧವಿಲ್ಲ, ಆ ರೀತಿ ಹೇಳಿಕೆ ಕೊಟ್ಟು ಅವರ ಭವಿಷ್ಯದ ಮೇಲೆ ಅವರೇ ಕಲ್ಲು ಹಾಕಿಕೊಳ್ಳುತ್ತಾರೆ ಎಂದು ಸಂಸದ ಹೆಗಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನ, ಎಸ್ಸಿ ಮತ್ತು ಎಸ್ಟಿ ಜನರ ವಿಷಯಕ್ಕೆ ಬರಬೇಡಿ ಹೆಗಡೆ ಅವರೇ ಎಂದು ಎಚ್ಚರಿಸಿದ ರಾಜೂಗೌಡ, ನಾವು ಎಷ್ಟು ಒಳ್ಳೇಯವರೋ, ಅಷ್ಟೇ ಕೆಟ್ಟವರು. ನಮ್ಮ ತಂಟೆಗೆ ಬರಬೇಡಿ, ಬಂದರೆ ಅಡ್ರೆಸ್‌ ಇಲ್ಲದೇ ಹೋಗುತ್ತೀರಾ, ಸಂವಿಧಾನದ ಬಗ್ಗೆ ಏನು ಮಾತನಾಡುತ್ತೀರಿ, ನಿಮ್ಮ ತಂದೆಯೇ ಕಾಂಗ್ರೆಸ್‌ಗೆ ಓಟ್‌ ಹಾಕುತ್ತಾರೆ ಅನ್ನೋದನ್ನ ನಾನೇ ಕೇಳಿದ್ದೇನೆ. ನಿಮ್ಮ ತಂದೆಯವರ ಮನವೊಲೈಸುವ ಕೆಲಸ ಮಾಡಿ, ಹೊರತು, ಸಂವಿಧಾನ ತಂಟೆಗೆ ಬರಬೇಡಿ ಎಂದು ವಾಕ್ಪ್ರಹಾರ ನಡೆಸಿದರು.

ನಮ್ಮವರ ಹುಚ್ಚುಚ್ಚು ಹೇಳಿಕೆಗಳು: ರಾಜೂಗೌಡ

ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಸ್ವಪಕ್ಷೀಯ ಕೆಲವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಮಾಜಿ ಸಚಿವ ರಾಜೂಗೌಡ, ನಮ್ಮಲ್ಲೇ (ಬಿಜೆಪಿಯಲ್ಲಿನ) ಕೆಲವೊಂದು ಲೀಡರುಗಳಿಗೆ ಏನಾಗಿದೆ ಅಂದರೆ, ಸ್ವಂತ ಶಕ್ತಿ ಇಲ್ಲದೆ ಯಾವುದೋ ಒಂದು ಗಾಳಿ (ಅಲೆ)ಯಲ್ಲಿ ಚುನಾವಣೆ ಗೆದ್ದು ಬಿಟ್ಟಿರುತ್ತಾರೆ. ಗೆದ್ದ ಮೇಲೆ ನಾಲ್ಕು ವರ್ಷಗಳ ಕಾಲ ಮಾಯ ಆಗ್ಬಿಡ್ತಾರೆ. ಆಮೇಲೆ, ಹುಚ್ಚು ಭಾಷಣ ಮಾಡಿ ಇಡೀ ವಾತಾವರಣ ಕೆಡಿಸ್ತಾರೆ ಎಂದು ಕಿಡಿ ಕಾರಿದರು.

ಡಾ. ಸಾಹೇಬ್‌ ಅಂಬೇಡ್ಕರ್‌ ಅವರ ತತ್ವಾದರ್ಶಳಂತೆ ಪ್ರಧಾನಿ ಮೋದಿ ಅವರು ದೇಶವನ್ನು ಮುನ್ನೆಡೆಸುತ್ತಿದ್ದಾರೆ. ಯಾವುದೇ ಪ್ರಧಾನಿ ಕೊಡದಷ್ಟು ಗೌರವವನ್ನು ಪ್ರಧಾನಿ‌ ಮೋದಿ ಅವರು ಡಾ. ಅಂಬೇಡ್ಕರ್‌ ಅವರ ಸಿದ್ಧಾಂತಗಳಿಗೆ ಕೊಡುತ್ತಿದ್ದಾರೆ. ಅಂಬೇಡ್ಕರ್ ತತ್ವ ಸಿದ್ಧಾಂತದ ಮೇಲೆಯೇ ನಡೆಯುವಂತಹ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಶೇ. 3 ಇದ್ದ ಎಸ್ಟಿ ಮೀಸಲಾತಿ ಶೇ 7ಕ್ಕೆ ಹೆಚ್ಚಿಗೆ ಮಾಡಿದ್ದರು. ಶೇ. 15 ಇರುವ ಎಸ್ಸಿ‌ ಮೀಸಲಾತಿ ಶೇ. 17 ಮಾಡಿದ್ದೇವೆ. ದಲಿತರ ವಿರುದ್ಧವಾಗಿದ್ದಾರೆ. ಈ ಮೀಸಲಾತಿ ಹೆಚ್ಚಳ ವಾಗುತ್ತಿತ್ತೇ ಎಂದು ಪ್ರಶ್ನಿಸಿದ ರಾಜೂಗೌಡ, ಬಿಜೆಪಿ ದಲಿತಪರ ಕಾಳಜಿಯ ಪಕ್ಷ ಎಂದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ