ಡಿಸಿಎಂ ಹುದ್ದೆ ಜಾತಿಗಲ್ಲ, ಪಕ್ಷ ನಿಷ್ಠೆ, ಕಾರ್ಯಕ್ಷಮತೆಯಿಂದ ಡಿಕೆಶಿಗೆ ದಕ್ಕಿದೆ
ಕನ್ನಡಪ್ರಭ ವಾರ್ತೆ ದಾವಣಗೆರೆಉಪ ಮುಖ್ಯಮಂತ್ರಿ ಆಯ್ಕೆ ಮಾಡಿರುವುದು ಯಾವುದೇ ಜಾತಿ ಆಧಾರದ ಮೇಲಲ್ಲ. ಯಾವುದೇ ಕಾರಣಕ್ಕೂ ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಅವಶ್ಯಕತೆಯೇ ಬರುವುದಿಲ್ಲ ಎಂದು ಚನ್ನಗಿರಿ ಶಾಸಕ ಶಿವಗಂಗಾ ವಿ.ಬಸವರಾಜ ಡಿಸಿಎಂ ಡಿ.ಕೆ.ಶಿವಕುಮಾರ ಪರ ಮತ್ತೆ ಬ್ಯಾಟ್ ಬೀಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ ಯಾರೂ ಪಕ್ಷದ ವಿಚಾರವಾಗಿ ಮಾತನಾಡದಂತೆ ಸೂಚಿಸಿದ್ದರು. ಈಗ ಹಿರಿಯರೇ ಮಾತನಾಡಿದ್ದರಿಂದ ನಾವೂ ಸಹ ಮಾತನಾಡುತ್ತಿದ್ದೇವೆ ಎಂದರು.ಪಕ್ಷ ನಿಷ್ಠೆ, ಕಾರ್ಯಕ್ಷಮತೆ ಗಮನಿಸಿ, ಡಿ.ಕೆ.ಶಿವಕುಮಾರ್ಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಜಾತಿಯ ಆಧಾರದ ಮೇಲಲ್ಲ. ಈಗಾಗಲೇ ಒಂದು ಡಿಸಿಎಂ ಹುದ್ದೆ ಇದ್ದು, ಮತ್ತೆ ಯಾವುದೇ ಕಾರಣಕ್ಕೂ ಡಿಸಿಎಂಗಳ ಅವಶ್ಯಕತೆಯೂ ಬರುವುದಿಲ್ಲ ಎಂದು ಹೇಳಿದರು.
ಮೂರು ಉಪ ಮುಖ್ಯಮಂತ್ರಿಗಳ ಹುದ್ದೆ ವಿಚಾರ ಈಗಲೇ ಕೈಬಿಡಬೇಕು. ರಾಜ್ಯದಲ್ಲಿ 136 ಕ್ಷೇತ್ರಗಳನ್ನು ಕಾಂಗ್ರೆಸ್ ಪಕ್ಷ ಗೆದ್ದಿರುವುದು ಜಾತಿಯ ಆಧಾರದಲ್ಲಿಯಲ್ಲ. ಕಾಂಗ್ರೆಸ್ ಪಕ್ಷದ ಆಧಾರದಲ್ಲಿ ಗೆದ್ದಿದ್ದೇವೆ. ಅದೇ ರೀತಿ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ನ ಗೆಲುವಿಗಾಗಿ ಹೋರಾಟ ಮಾಡೋಣ ಎಂದು ತಿಳಿಸಿದರು.ಕಾಂಗ್ರೆಸ್ ಸರ್ಕಾರದ ಜನಪರ ಕೆಲಸದ ಆಧಾರದ ಮೇಲೆ ಕನಿಷ್ಟ 20 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲೋಣ. ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಸಹಿತ ಡಿಸಿಎಂ ಹುದ್ದೆಗಳ ಪ್ರಸ್ತಾಪವಿಲ್ಲವೆಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಡಿಸಿಎಂ ವಿಚಾರವಾಗಿ ಯಾವುದೇ ಚರ್ಚೆಯಾಗಿಲ್ಲ. ವಾಸ್ತವ ಹೀಗಿರುವಾಗ ಡಿಸಿಎಂ ಹುದ್ದೆಗಳ ಸೃಷ್ಟಿಯ ವಿಚಾರವೇ ಬರದು ಎಂದು ವಿವರಿಸಿದರು.
ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ ಸಾಹೇಬರಿಗೆ ಎಲ್ಲಾ ಸಚಿವರು ಕೈಜೋಡಿಸಲಿ. ನಾವೂ ಸಹ ಕನಿಷ್ಟ 20 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಇಂದಿನ ಸಭೆಯಲ್ಲಿ ಅವಕಾಶ ಸಿಕ್ಕರೆ, ರಾಷ್ಟ್ರೀಯ ನಾಯಕರ ಮುಂದೆಯೂ ನಾವು ಮನವಿ ಮಾಡುತ್ತೇವೆ ಎಂಬುದಾಗಿ ಹೇಳುವ ಮೂಲಕ ಶಿವಗಂಗಾ ಬಸವರಾಜ ಕಾಂಗ್ರೆಸ್ ಸಚಿವರಲ್ಲಿ ಒಗ್ಗಟ್ಟಿಲ್ಲವೆಂಬ ಸಂದೇಶವನ್ನು ಪರೋಕ್ಷವಾಗಿ ಸಾರಿದರು. ತಕ್ಷಣ ಡಿಸಿಎಂ ಹುದ್ದೆ ಹೆಚ್ಚು ಮಾಡಲ್ಲಯಾರೋ ಮೂರು-ನಾಲ್ಕು ಜನರು ಹೇಳಿದ ತಕ್ಷಣ ಡಿಸಿಎಂ ಹುದ್ದೆಗಳನ್ನು ಹೆಚ್ಚು ಮಾಡುವುದಿಲ್ಲ. ನಾವು ಡಿ.ಕೆ.ಶಿವಕುಮಾರರ ಪರವಾಗಿ ಮಾತನಾಡುತ್ತಿದ್ದೆವು. ಆದರೆ, ಯಾವಾಗ ಡಿಕೆಶಿ ಸಾಹೇಬರು ಮಾತನಾಡದಂತೆ ಸೂಚಿಸಿದರೋ ನಾವೂ ಮಾತನಾಡಲಿಲ್ಲ. ಈಗ ಮತ್ತೆ ಹಿರಿಯರೇ ಮಾತನಾಡಿದ್ದರಿಂದ ನಾವೂ ಸಹ ಡಿಕೆಶಿ ಸಾಹೇಬರ ಪರವಾಗಿ ನಿಲ್ಲಬೇಕಾಗುತ್ತದೆ.
ಶಿವಗಂಗಾ ಬಸವರಾಜ, ಚನ್ನಗಿರಿ ಶಾಸಕ