ಕನ್ನಡಪ್ರಭ ವಾರ್ತೆ ದಾವಣಗೆರೆ
ಹೀಗೆ ಹತ್ತು ಹಲವಾರು ನಿರೀಕ್ಷೆಯೊಂದಿಗೆ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ 2024-25ನೇ ಸಾಲಿನ ರಾಜ್ಯ ಮುಂಗಡಪತ್ರದ ಕಡೆಗೆ ದಾವಣಗೆರೆ ಜಿಲ್ಲೆ ಜನತೆ ಚಾತಕ ಪಕ್ಷಿಯಂತೆ ಇದಿರು ನೋಡುತ್ತಿದ್ದಾರೆ. ಶಿಕ್ಷಣ, ವಾಣಿಜ್ಯ, ಕೃಷಿ ಹೀಗೆ ನಾನಾ ರೀತಿ ರಾಜ್ಯಕ್ಕೆ ತನ್ನದೇ ಕೊಡುಗೆ ನೀಡುತ್ತಿರುವ ಜಿಲ್ಲೆಯ ಬಗ್ಗೆ ಆಳುವ ಸರ್ಕಾರಗಳು ಇನ್ನಾದರೂ ಗಮನ ಹರಿಸಬೇಕಿದೆ. ಕಳೆದ ನಾಲ್ಕೈದು ಬಜೆಟ್ ಮಂಡಿಸಿದ ಯಾವುದೇ ಸರ್ಕಾರಗಳು ದಾವಣಗೆರೆಗೆ ಖಾಲಿ ಬಾಗಿನ ಕೊಟ್ಟಿದ್ದನ್ನು ಬಿಟ್ಟರೆ, ಏನೂ ಮಾಡಲಿಲ್ಲ. ಇನ್ನಾದರೂ ಸಿದ್ದರಾಮಯ್ಯ ತುಂಬಿದ ಬಾಗಿನ ನೀಡುತ್ತಾರಾ ಎಂಬುದೇ ಸತ್ಯ ಕುತೂಹಲಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಜುಲೈ 2023ರಂದು ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಕೆಲವೊಂದಿಷ್ಟು ಯೋಜನೆ ಜಿಲ್ಲೆಗೆ ಘೋಷಿಸಿದರೂ, ಯಾವುದರಲ್ಲೂ ಸ್ಪಷ್ಟತೆ ಇರಲಿಲ್ಲ. ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದನ್ನು ಬಿಟ್ಟರೆ, ಇಂತಹದ್ದೊಂದು ಯೋಜನೆ ನೀಡಿದ್ದ ಬಗ್ಗೆ ಯಾವುದೇ ಕುರುಹು ಸಿಗುವಂತಹ ಕೆಲಸ ಆಗಿಲ್ಲವೆಂಬುದೂ ಅಷ್ಟೇ ಸ್ಪಷ್ಟ. ಒಂದು ಕಾಲದ ಕೈಗಾರಿಕಾ ನಗರಿ, ಈಗಿನ ವಿದ್ಯಾ, ವಾಣಿಜ್ಯ ನಗರಿ ಖ್ಯಾತಿಯ ದಾವಣಗೆರೆಯಲ್ಲೊಂದು ವಿಮಾನ ನಿಲ್ದಾಣ ಆಗಬೇಕೆಂಬ ತಲೆಮಾರುಗಳ ಕನಸು ಹಾಗೆಯೇ ಇದೆ. ವಿಮಾನ ನಿಲ್ದಾಣ ಇವಾಗ ಆಗುತ್ತೆ, ನಾಳೆ ಆಗತ್ತೆ ಅಂತಲೇ ಕಾಲಹರಣವಾಗಿದೆ. ನೆರೆಯ ಶಿವಮೊಗ್ಗ ವಿಮಾನ ನಿಲ್ದಾಣ ಬಂದರೂ, ದಾವಣಗೆರೆಗೆ ಮಾತ್ರ ಅದು ಗಗನ ಕುಸುಮವೇ ಆಗಿದೆ.ರಾಜ್ಯದ ಮೆಕ್ಕೆಜೋಳದ ಕಣಜ ಅಂತಲೇ ಜಿಲ್ಲೆ ಗುರುತಿಸಲ್ಪಡುತ್ತದೆ. ಮೆಕ್ಕೆಜೋಳ ಸಂಸ್ಕರಣಾ ಘಟಕ, ಮೆಕ್ಕೆ ಸೇರಿ ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಇಲ್ಲಿವರೆಗೂ ಸರ್ಕಾರವಂತೂ ಮನಸ್ಸು ಮಾಡಿಲ್ಲ. ಒಂದು ಕಡೆ ಭದ್ರಾ ನಾಲೆಯು ಜಿಲ್ಲೆಯ ಬಹುತೇಕ ಕಡೆ ನರ ನಾಡಿಯಂತೆ ಹರಡಿದೆ. ಮತ್ತೊಂದು ಕಡೆ ನಾಡಿನ ಜೀವನದಿಗಳಲ್ಲೊಂದಾದ ತುಂಗಭದ್ರಾ ಹರಿಯುತ್ತದೆ. ಅನೇಕ ಕಡೆ ಸಮೃದ್ಧ ನೀರಾವರಿ, ಮತ್ತೆ ಕೆಲ ಕಡೆ ಬೆದ್ದಲು ಹೊಂದಿರುವ ಜಿಲ್ಲೆ ಇದು. ಕಳೆದೊಂದು ಶತಮಾನದ ಬಹುಪಾಲು ಬರವನ್ನೇ ಹಾಸು ಹೊದ್ದಿರುವ ತಾಲೂಕು ಇಲ್ಲಿದ್ದರೆ, ರಾಜ್ಯದಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೊಂದು ಇಲ್ಲಿದೆ. ಈಗ ವಿವಿಧತೆಯಲ್ಲಿ ಏಕತೆಯ ದಾವಣಗೆರೆ ಜಿಲ್ಲೆಯೇ ಸಂಪೂರ್ಣ ಕಡೆಗಣಿಸಲ್ಪಡುತ್ತಿದೆ.
ಸತತ ಬರ ಹಿನ್ನೆಲೆ ಅಂತರ್ಜಲದ ಮಟ್ಟವೂ ಕುಸಿಯುತ್ತಿದ್ದು, ಬೇಸಿಗೆ ನೀರಿನ ದಾಹ ಈಗಾಗಲೇ ಅನೇಕ ಕಡೆ ಕಾಣಿಸಿಕೊಳ್ಳಲಾರಂಭಿಸಿದೆ. ಈ ಪರಿಸ್ಥಿತಿಯಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರ ಒತ್ತು ನೀಡಬೇಕಿದೆ.
ದಕ್ಷಿಣ ಕಾಶಿ ಅಂತಲೇ ಕರೆಯಲ್ಪಡುವ ಹರಿಹರದ ತುಂಗಭದ್ರಾ ತಟದ ಶ್ರೀ ಹರಿಹರೇಶ್ವರ ದೇವಸ್ಥಾನ ಹರಿ-ಹರರ ಸಂಗಮ ಸ್ಥಳವೆಂಬ ನಂಬಿಕೆ ಇದೆ. ಸಮೀಪದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠವಿದೆ. ಅಯೋಧ್ಯೆ ಶ್ರೀರಾಮನ ಮೂಲ ವಿಗ್ರಹ ಇದೆಯೆನ್ನಲಾದ ಮಂದಿರ ಹರಿಹರ ಸಮೀಪವಿದೆ. ಇದೇ ತಾಲೂಕಿನ ಕೊಂಡಜ್ಜಿ ಅರಣ್ಯ ಪ್ರದೇಶ ಹೊಂದಿದ್ದು, ನವಿಲು, ನರಿ ಸೇರಿ ಸಾಕಷ್ಟು ಪ್ರಾಣಿ, ಪಕ್ಷಗಳ ಆಶ್ರಯ ತಾಣವಾಗಿವೆ. ಹೊನ್ನಾಳಿ ಹಿರೇಕಲ್ಮಠ, ದಕ್ಷಿಣ ಭಾರದ 2ನೇ ಅತೀ ದೊಡ್ಡ ಕೆರೆ ಸೂಳೆಕೆರೆ, ಸಂತೇಬೆನ್ನೂರಿನ ಆಕರ್ಷಕ ಪುಷ್ಕರಣಿ, ಜೋಳದಾಳ್, ಚನ್ನಗಿರಿ ಕೋಟೆ, ಉಬ್ರಾಣಿ ಅರಣ್ಯ ಪ್ರದೇಶ ಹೀಗೆ ಪ್ರವಾಸಿ ತಾಣಗಳಿವೆ.
ದಾವಣಗೆರೆಯಲ್ಲಿ ಕೈಗಾರಿಕೆಗಳ ಸ್ಥಾಪನೆ ಆಗಬೇಕಿದೆ
ಐಟಿ ಪಾರ್ಕ್ ಕನಸಿಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಆಗಲಿ
ಕೃಷಿ ಸೇರಿ ಕೈಗಾರಿಕೆಗಳ ಸ್ಥಾಪನೆ ಈಗಾದರೂ ಆಗಬಹುದೆ?
ಪ್ರತಿ ಗ್ರಾಮಕ್ಕೂ ಶುದ್ಧ ನೀರು ಪೂರೈಸಿ, ಜನರಿಗೆ ಸ್ಪಂದಿಸಬೇಕಿದೆ
ತೋಟಗಾರಿಕೆ, ಕೃಷಿ, ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆದುಡಿಯುವ ಯುವ ಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ಸಿಕ್ಕೀತೆ?
ಪ್ರವಾಸೋದ್ಯಮ ನಕ್ಷೆಯಲ್ಲಿ ದಾವಣಗೆರೆ ಜಿಲ್ಲೆ ಕಕ್ಷೆ ಇನ್ನಾದ್ರೂ ಇರುತ್ತಾ?