ಹಕ್ಕುಪತ್ರ ವಿವಾದ: ಅರಣ್ಯ ಇಲಾಖೆ, ರೈತರ ಜಟಾಪಟಿ

KannadaprabhaNewsNetwork |  
Published : Mar 07, 2025, 12:48 AM IST
ಪೋಟೋ: 06ಎಸ್‌ಎಂಜಿಕೆಪಿ01: ದುಗ್ಗಪ್ಪ ಗೌಡ | Kannada Prabha

ಸಾರಾಂಶ

50 ರಿಂದ 60 ವರ್ಷಗಳ ಹಿಂದಿನಿಂದ ಉಳುಮೆ ಮಾಡಿಕೊಂಡು ಬಂದಿರುವ ಜಮೀನಿನ ಹಕ್ಕುಪತ್ರವನ್ನು ದಿಢೀರನೇ ರದ್ದುಪಡಿಸುವಂತೆ ಕೋರಿ ಅರಣ್ಯ ಇಲಾಖೆ ಅಧಿಕಾರಿಗಳು ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿರುವ ಕಾರಣ 600ಕ್ಕೂ ಹೆಚ್ಚು ರೈತರು ಜಮೀನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಕೃಷಿ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ 600 ಅನ್ನದಾತರು । ಕಾನೂನುಬಾಹಿರವಾಗಿ ಭೂ ಮಂಜೂರಾತಿ: ಆರೋಪ

ಗೋಪಾಲ್‌ ಯಡಗೆರೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

50 ರಿಂದ 60 ವರ್ಷಗಳ ಹಿಂದಿನಿಂದ ಉಳುಮೆ ಮಾಡಿಕೊಂಡು ಬಂದಿರುವ ಜಮೀನಿನ ಹಕ್ಕುಪತ್ರವನ್ನು ದಿಢೀರನೇ ರದ್ದುಪಡಿಸುವಂತೆ ಕೋರಿ ಅರಣ್ಯ ಇಲಾಖೆ ಅಧಿಕಾರಿಗಳು ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿರುವ ಕಾರಣ 600ಕ್ಕೂ ಹೆಚ್ಚು ರೈತರು ಜಮೀನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಶಿವಮೊಗ್ಗ ತಾಲೂಕಿನ ಕಡೇಕಲ್, ಉಂಬಳೇಬೈಲು ಪಂಚಾಯಿತಿ, ಲಕ್ಕಿನಕೊಪ್ಪ (ಕೊರಲಹಳ್ಳಿ), ಹಾಲಕ್ಕವಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ 600ಕ್ಕೂ ಹೆಚ್ಚು ರೈತರು ಹಲವು ವರ್ಷಗಳಿಂದ ತಮ್ಮ ಜಮೀನಿಗೆ ಹಕ್ಕುಪತ್ರ ಪಡೆದು ಉಳುಮೆ ಮಾಡಿಕೊಂಡು ಬಂದಿದ್ದಾರೆ. ಆದರೆ, ಈಗ ರೈತರು ಕಾನೂನುಬಾಹಿರವಾಗಿ ಭೂ ಮಂಜೂರಾತಿ ಪಡೆದುಕೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಅಪಾಧಿಸಿ ಕಂದಾಯ ಇಲಾಖೆ ಕೊಟ್ಟಿರುವ ಹಕ್ಕುಪತ್ರಗಳನ್ನು ವಜಾ ಮಾಡಿ ಎಂದು ಉಪ ವಿಭಾಗಾಧಿಕಾರಿಗಳಿಗೆ ಪತ್ರ ಬರೆದಿದೆ. ಹೀಗಾಗಿ ಹಲವು ರೈತರಲ್ಲಿ ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಆತಂಕ ಮನೆ ಮಾಡಿದೆ.

ಈ ಸಂಬಂಧ ಈಗಾಗಲೇ 600ಕ್ಕೂ ಹೆಚ್ಚು ರೈತರಿಗೆ ನೋಟಿಸ್‍ಗಳನ್ನು ನೀಡಲಾಗಿದ್ದು, ರೈತರು ಸರ್ಕಾರಿ ಕಚೇರಿಗೆ ಅಲೆದಾಡುತ್ತಿದ್ದಾರೆ. ರಾಜ್ಯ ಸರ್ಕಾರ 50 ರಿಂದ 60 ವರ್ಷಗಳ ಹಿಂದೆ ಹಾಗೂ ಇತ್ತೀಚಿನ ವರ್ಷಗಳಲ್ಲಿ ರೈತರಿಗೆ ಕೊಟ್ಟಿರುವ ಜಮೀನಿನ ಹಕ್ಕುಪತ್ರಗಳನ್ನು ವಜಾ ಮಾಡಲು ಉಪವಿಭಾಗಾಧಿಕಾರಿ ಕಚೇರಿಗೆ ಅರಣ್ಯ ಇಲಾಖೆ ಪತ್ರಬರೆದಿದ್ದು, ಈ ಸಂಬಂಧ ಕೋರ್ಟ್‌ನಲ್ಲಿ ದಾವೆ ಹೂಡಿದೆ. ಇತ್ತ ಸರ್ಕಾರವಾಗಲಿ, ಮಂತ್ರಿಗಳಾಗಲಿ ಇದನ್ನು ಬಗೆಹರಿಸುವ ಕೆಲಸ ಮಾಡುತ್ತಿಲ್ಲ. ಕೋರ್ಟ್ ಆದೇಶ ಇದು, ನಾವೇನು ಮಾಡಲು ಆಗುವುದಿಲ್ಲ ಎಂದು ಕೈತೊಳೆದು ಕೂತಿದ್ದಾರೆ.

ಚುನಾವಣೆಗೂ ಮುನ್ನಮಂತ್ರಿಗಳು ಶಿವಮೊಗ್ಗಕ್ಕೆ ಬಂದಾಗ ಇದನ್ನು ತಕ್ಷಣ ಸರಿಪಡಿಸುತ್ತೇವೆ ಎಂದವರು ಇದೂವರೆಗೂ ಸರಿಪಡಿಸಿಲ್ಲ. ಹೀಗಾಗಿ ಶರಾವತಿ, ಭದ್ರ, ತುಂಗಾ, ಚಕ್ರ, ಸಾವೆಹಕ್ಲು, ಅಂಬ್ಲಿಗೊಳ ಮುಳುಗಡೆ ಸಂತ್ರಸ್ತರಿಗೆ ಜಮೀನು ನೀಡಿರುವ ಮಾಲೀಕರಿಗೂ ನೋಟಿಸ್ ನೀಡಿದೆ. 1972ರಿಂದ ದೇವರಾಜು ಅರಸುರವರು ಕೊಟ್ಟ ದರಖಾಸ್ತು ಜಮೀನು ಮಂಜೂರಾತಿ, ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಕೊಟ್ಟ ಬಗರ್‌ಹುಕುಂ ಕಾಯ್ದೆ ಅನ್ವಯ ಕೊಟ್ಟು ಹಕ್ಕು ಪತ್ರಗಳನ್ನು ವಜಾ ಮಾಡಲು ನೋಟಿಸ್ ನೀಡಿದೆ.

ನಾವೆಲ್ಲಿಗೆ ಹೋಗಬೇಕು?

1959 ರಿಂದಲೂ ನಾವು ಸಾಗುವಳಿ ಮಾಡಿಕೊಂಡಿಕೊಂಡು ಬಂದಿದ್ದೇವೆ. ಅವರು ನೋಟಿಸ್‌ ನೀಡಿರುವ ಜಾಗ ಮುಳುಗಡೆ ಸಂಸ್ಥರಿಗೆ ನೀಡಿರುವ ಜಾಗ. ನಮಗೆ ಆದೇಶ ಮಾಡಿರುವ ದಾಖಲೆಗಳು, ಈ ಜಾಗದ ಹಕ್ಕುಪತ್ರ, ಪಹಣಿ ಎಲ್ಲ ದಾಖಲೆಗಳು ಇವೆ. ಈಗ ಈ ಜಾಗ ನಮ್ಮದು ಬಿಟ್ಟುಕೊಡಿ ಎಂದು ಅರಣ್ಯ ಇಲಾಖೆಯವರು ನೋಟಿಸ್ ನೀಡುತ್ತಿದ್ದಾರೆ. 1905ರಲ್ಲಿ ಸರ್ಕಾರ ನೀಡಿದ್ದ ನಿರ್ದೇಶನದ ಪತ್ರವನ್ನು ಇಟ್ಟುಕೊಂಡು ಇದು ನಮ್ಮ ಜಾಗ ಎನ್ನುತ್ತಿದ್ದಾರೆ. ಆದರೆ, ಅದರಲ್ಲಿ ಇಷ್ಟು ಎಕರೆ ಅಂತ ಎಲ್ಲೂ ನಮೂದಾಗಿಲ್ಲ. ಕೇವಲ ಸರ್ವೆ ನಂಬರ್‌ ಇಟ್ಟುಕೊಂಡು ಇದು ನಮ್ಮ ಜಾಗ ಎನ್ನುತ್ತಿದ್ದಾರೆ.

ಆ ಸಮಯದಲ್ಲಿ ಡಿನೋಟಿಫಿಕೇಷನ್‌ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. 1959ರಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳು ಸೇರಿ ಸಭೆ ಮಾಡಿ ಜಾಗ ಮಂಜೂರಾತಿ ಮಾಡಿಸಿಕೊಟ್ಟಿದ್ದಾರೆ. ಅವತ್ತೆ ಡಿನೋಟಿಪಿಕೇಷನ್‌ ಮಾಡಿದ್ದರೆ ಇವತ್ತು ಈ ಸಮಸ್ಯೆ ಉಲ್ಬಣಿಸುತ್ತಿರಲಿಲ್ಲ. ಅಧಿಕಾರಿಗಳು ತಾವು ಮಾಡಿರುವ ತಪ್ಪಿಗೆ ನಮ್ಮನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಮಾತನಾಡಿದರೆ ಈ ಇದು ಹೈಕೋರ್ಟ್‌ ಆದೇಶ. ಈಗ ತೆರವುಗೊಳಿಸದಿದ್ದರೆ ನಾವು ತಪ್ಪಿಸ್ಥರಾಗುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾದರೆ ನಾವು ಎಲ್ಲಿಗೆ ಹೋಗಬೇಕು. ನಾವು ಜೀವನ ಮಾಡುವುದಾದರೂ ಹೇಗೆ? ನಮಗೆ ನ್ಯಾಯ ಕೊಡಿಸುವವರು ಯಾರು? ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಡಿಸಿ ಅವರ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಸಾವಿರಾರು ಮುಳುಗಡೆ ಸಂತ್ರಸ್ತರು ಜಮೀನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಕೇವಲ ಸರ್ವೆ ನಂಬರ್‌ ಇಟ್ಟುಕೊಂಡು ಇದು ನಮ್ಮ ಜಾಗ ಎಂದರೆ ಆಗಲ್ಲ. ಎಷ್ಟು ಎಕರೆ ಎಂದು ಅರಣ್ಯಕ್ಕೆ ಸೇರಿದ್ದು ಎಂದು ಅರಣ್ಯ ಅಧಿಕಾರಿಗಳು ತಿಳಿಸಬೇಕು. ಈ ಪ್ರಕರಣ ಸದ್ಯ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಜಿಲ್ಲೆಯ ಸಚಿವರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಮಧ್ಯೆ ಪ್ರವೇಶ ಮಾಡಿ ರೈತರ ಪರ ನಿಲ್ಲಬೇಕು.

ದುಗ್ಗಪ್ಪ ಗೌಡ, ಡಿಸಿಸಿ ಬ್ಯಾಂಕ್‌ ನಿರ್ದೇಶಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ