ಕನ್ನಡಪ್ರಭ ವಾರ್ತೆ ಚಾಮರಾಜನಗರನಖ್ಯಾತ ಬೆನ್ನುಹುರಿ ತಜ್ಞ ಪ್ರಲಾಕ್ಷ ಅಸ್ಪತ್ರೆಗಳ ಸಂಸ್ಥಾಪಕ ನಿರ್ದೇಶಕ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಡಾ.ಎನ್.ಎಸ್. ಮೋಹನ್ ರಚಿಸಿರುವ ಎರಡನೇ ಕೃತಿ ರೈತರೇ ಆರೋಗ್ಯವಂತರಾಗಿ ಕೃತಿ ಮಾ. ೬ ರ ಬುಧವಾರ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ಅಂಬೇಡ್ಕರ್ ಭವನದಲ್ಲಿ ಲೋಕಾರ್ಪಣೆಯಾಗಲಿದೆ. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೊಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಡಾ. ಎನ್.ಎಸ್. ಮೋಹನ್ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ನನ್ನ ಅನುಭವ ಹಾಗು ರೈತರೊಂದಿಗಿನ ಒಡನಾಟವನ್ನು ಗಮನಿಸಿ, ರೈತರು ನಮ್ಮ ದೇಶದ ಅನ್ನದಾತರು, ಸೈನಿಕರು ದೇಶವನ್ನು ಕಾಯುವವರು, ಈ ಇವರಿಬ್ಬರು ಆರೋಗ್ಯವಂತರಾದರೆ, ನಮ್ಮ ದೇಶದ ಪ್ರಗತಿ ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಪಡುವಲ ಮಠದ ಶ್ರೀ ಮಹದೇವಸ್ವಾಮೀಜಿ, ಹಂಚಿಪುರ ಮಠದ ಶ್ರೀ ಚನ್ನಬಸವಸ್ವಾಮೀಜಿ, ದಡದಹಳ್ಳಿ ಮಠದ ಶ್ರೀ ಷಡಕ್ಷರಿ ದೇಶಿಕೇಂದ್ರಸ್ವಾಮೀಜಿ ವಹಿಸಲಿದ್ದಾರೆ. ಆದಿವಾಸಿ ಸಮುದಾಯದ ಹೋರಾಟಗಾರ ಪದ್ಮಶ್ರೀ ಪುರಸ್ಕೃತರಾದ ಸೋಮಣ್ಣ, ಹಿರಿಯ ಮುಖಂಡ ಜೆ.ಪಿ. ಚಂದ್ರಶೇಖರ್, ಪ್ರಗತಿಪರ ರೈತ ಮಲಾರ ಪುಟ್ಟಯ್ಯ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.
ವೈದ್ಯ ವೃತ್ತಿಗೆ ನೀಡಿದ್ದ ರಾಜೀನಾಮೆ ಅಂಗೀಕಾರ : ಸಂಜಯ್ ಗಾಂಧಿ ಅಸ್ಪತ್ರೆಯ ಕೀಲು ಮತ್ತು ಮುಳೆ ವಿಭಾಗದ ಮುಖ್ಯಸ್ಥರ ಹುದ್ದೆಗೆ ಸ್ವ ಇಚ್ಚೆಯಿಂದ ರಾಜೀನಾಮೆ ನೀಡಿ ಅದು ಅಂಗೀಕಾರವಾಗಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಪ್ರಮುಖ ಆಕಾಂಕ್ಷಿಯಾಗಿದ್ದು, ಕಳೆದ ಅವಧಿಯಲ್ಲೂ ನಾನು ಆಕಾಂಕ್ಷಿಯಾಗಿದ್ದೆ. ನಮ್ಮ ಮಾವ ವಿ. ಶ್ರೀನಿವಾಸಪ್ರಸಾದ್ ಅವರೇ ಸ್ಪರ್ಧೆ ಮಾಡಿದ್ದರಿಂದ ನಾನು ಹಿಂದೆ ಸರಿದೆ. ಈ ಬಾರಿ ವರಿಷ್ಠರು ನನಗೆ ಅವಕಾಶ ಮಾಡಿಕೊಡುತ್ತಾರೆ ಎಂಬ ಆಶಾಭಾವನೆ ಇದೆ. ಹೀಗಾಗಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಎಲ್ಲರಂತೆ ನಾನು ಒಬ್ಬ ಆಕಾಂಕ್ಷಿದ್ದೇನೆ. ವರಿಷ್ಠರು ನನ್ನ ಸೇವೆಯನ್ನು ಗುರುತಿಸಿ ಟಿಕೆಟ್ ನೀಡಿದರೆ, ಕ್ಷೇತ್ರದಲ್ಲಿ ಗೆಲ್ಲುವುದು ನಿಶ್ಚಿತ, ಕಳೆದ ಹಲವಾರು ವರ್ಷಗಳಿಂದ ಕ್ಷೇತ್ರದ ಜನರ ಒಡನಾಟ ಇದೆ. ಕೋವಿಡ್ ಸಂದರ್ಭದಲ್ಲಿ ಉತ್ತಮ ಸೇವೆ. ಟ್ರಸ್ಟ್ ವತಿಯಿಮದ ಬಳಗದಿಂದ ಜನಪರ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ರಾಜಕೀಯ ಎಂದಾಗ ಆರೋಪಗಳು ಸಹ. ಅಂತಿಮವಾಗಿ ವರಿಷ್ಟರು ಹಾಗೂ ಮತದಾರರು ಮುಖ್ಯವಾಗುತ್ತಾರೆ. ಯಾವುದೇ ಟೀಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮೋಹನ್ ತಿಳಿಸಿದರು.ಗೋಷ್ಠಿಯಲ್ಲಿ ಡಾ.ಎಂ.ಎಸ್. ಮೋಹನ್ ಬಳಗದ ಅಧ್ಯಕ್ಷ ಕೆ.ಆರ್. ಲೋಕೇಶ್, ಮುಖಂಡರಾದ ಕೂಡ್ಲುರು ಹನುಮಂತಶೆಟ್ಟಿ, ಪಣ್ಯದಹುಂಡಿ ರಾಜು, ಜಯರಾಮಶೆಟ್ಟಿ ಇತರರು ಇದ್ದರು. .