ಶೇಷಮೂರ್ತಿ, ಬಿಂದುಮಾಧವ
ಸುರುವಿಗಿ ಬಂಪರ್ ಕ್ರಾಪ್ ಬಂತ್ರಿ, ಬೆಳಿ ನೋಡಿ ಹಿಗ್ಗಿದ್ವಿ, ಆದ್ರ ನಮ್ಮ ದುರಾದೃಷ್ಟ ಅನ್ಬೇಕು, ಹೂವು, ಕಾಯಿ ಹಿಡಿಯೋ ಟೈಮಿನ್ಯಾಗೇ ಬೆಳಿ ಒಣಗಿ ನಿಂತಿತು, ಬಂಪರ್ ಕ್ರಾಪ್ಕ ಕನಸು ನುಚ್ಚುನೂರಾಯ್ತು, ಬರಗಾಲ ಬಿದ್ದಿದ್ರ ವೈನಾಗ್ತಿತ್ತಿ, ಹೀಂಗ ಆಶಾ ಹಚ್ಚಿ ದುಡ್ಡ ಹಾಕೋವ್ಹಂಗ ಮಾಡಿ ಈಗ ಬೆಳಿ ಒಣಗಿ ನಿಂತದ, ಈ ಹಾನಿ ತಡಕೊಳ್ಳೋದೇ ಆಗ್ತಿಲ್ಲ ನೋಡ್ರಿ.
ಮಣ್ಣೂರಿನ ಯುವ ರೈತ ಶಿವಪುತ್ರ ನಿವರಗಿ ಅವರ ಮಾತಲ್ಲಿ ತೊಗರಿ ಹಾನಿಯಿಂದಾಗಿ ಹೇಗೆಲ್ಲಾ ತೊಂದರೆಯಾಗಿದೆ ಎಂಬುದರ ನೋವು ಅಡಗಿತ್ತು. ದನ, ಕರು, ಇಡೀ ಸಂಸಾರವೇ ತೊಗರಿಯಿಂದಾಗಿ ಬಕ್ಳ ಹೈರಾಣದಲ್ಲಿದೆ ಎಂದು ಗೋಳಾಡಿದ ಶಿವಪುತ್ರ ಹೊಲಕ್ಕ ಹೋಗೋದೇ ಬಿಟ್ಟಿರೋದಾಗಿ ಹೇಳಿದರು.20 ಎಕರೆಗೂ ಹೆಚ್ಚಿನ ತೊಗರಿ ಬೇಸಾಯ ಮಾಡಿರುವ ಶಿವಪುತ್ರ ತೊಗರಿ ಬೆಳೆ ಉತ್ತಮ ನಿರ್ವಹಣೆ ಮಾಡಿದ್ದರೂ ಕೂಡಾ ಕಾಯಿ ಕಟ್ಟಿಲ್ಲ.
ಅಫಜಲ್ಪುರ ರೈತರ ಕಣ್ಣೀರ ಕಹಾನಿ:
ಮಣ್ಣೂರಿನ ಯುವ ರೈತ ವೇಣುಮಾಧವ ಅವಧಾನಿ ತೊಗರಿ ನಂಬಿ ಪರೇಶಾನಿಯಲ್ಲಿದ್ದಾರೆ. ಖಟ ಗುತ್ತಿಗೆ ಹಾಕಿಕೊಂಡಿದ್ದ 20 ಎಕರೆಯಲ್ಲಿ ಬೆಳೆದಿದ್ದ ತೊಗರಿ ಸಂಪೂರ್ಣ ಹಾಳಾಗಿದೆ. 3ರಿಂದ 5 ಲಕ್ಷ ಲಾಗೋಡಿ ಲಾಸ್ ಎಂದು ಗೋಳಾಡುತ್ತಿದ್ದಾರೆ. ಮಣ್ಣೂರ ಗ್ರಾಮದಲ್ಲಿ ಅನೇಕ ರೈತರು ತೊಗರಿ ಬಿತ್ತನೆ ಮಾಡಿ ಲಕ್ಷಾಂತರ ಲಾಗೋಡಿ ಭರಿಸಿದ್ದರೂ ಆ ಹಣವೂ ಮರಲಿ ಬಾರದ ಸ್ಥಿತಿಯಲ್ಲಿದ್ದಾರೆ.
ರೈತ ಕಲ್ಲಪ್ಪ ಅಲ್ಲಾಪೂರ ಅವರ 35 ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ ತೊಗರಿ ಒಣಗಿರೋದರಿಂದ ಹೌಹಾರಿದ್ದಾರೆ. 35 ಎಕರೆ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಿ ಕೀಟ ನಾಶಕ ಸಿಂಪರಣೆ ಸೇರಿದಂತೆ 4 ಲಕ್ಷ ರೂಪಾಯಿ ಲಾಗೋಡಿ ಮಾಡಿದ್ದಾರೆ. ತೊಗರಿ ರಾಶಿ ಮಾಡಿದರೆ ಮಾರುಕಟ್ಟೆಯಲ್ಲಿ ಈಗಿರುವ ತೊಗರಿ ಬೆಲೆಯನ್ನು ಗಮನಿಸಿದರೆ 1.30 ಲಕ್ಷ ರುಪಾಯಿ ಬರಬಹುದ್ರಿ, ಹಾಕಿರೋ ಹಣವೂ ಬರುತ್ತಿಲ್ಲವೆಂದು ಆತಂಕದಲ್ಲಿದ್ದಾರೆ. ತಾಲೂಕಿನಾದ್ಯಂತ 1.20 ಲಕ್ಷ ಎಕರೆ ತೊಗರಿ ಬಿತ್ತನೆ ಮಾಡಲಾಗಿದೆ. ಶೇ.75 ರಿಂದ 80 ಸಾವಿರ ಎಕರೆ ತೊಗರಿ ಬೆಳೆ ನೆಟೆ ರೋಗ ನಂಜಾಣು ರೋಗದಿಂದ ಹಾಳಾಗಿದೆ.
ಅಫಜಲ್ಪುರದ ಭಾಗದಲ್ಲಿ ತೊಗರಿಗೆ ಬಂದಿರುವ ನಂಜಾಣು ರೋಗದಿಂದ ರೈತರಿಗೆ ಅಪಾರ ಹಾನಿಯಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಬೆಳೆ ಪರಿಹಾರ ನೀಡಬೇಕು ಎಂದು ತಾಲೂಕಿನ ಮಣ್ಣೂರ ಗ್ರಾಮದ ರೈತರಾದ ಸೇತುಮಾಧವ ಅವದಾನಿ, ಕಲ್ಲಪ್ಪ ಅಲ್ಲಾಪೂರ ವಿವೇಕಾನಂದ ಕೋಗಟನೂರ ಶರಣಬಸಪ್ಪ ಉಪ್ಪಿನ ಕಾಶಿನಾಥ ಜೇವೂರ ಮಹ್ಮದಕರಿಂ ಮಂಗಲಗಿರಿ ಅಣ್ಣಪ್ಪ ಬಿಜಾಪುರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸಂತೋಷ ಕೋನಳ್ಳಿ, ರೈತ, ಮಣ್ಣೂರು
ವೇಣುಮಾಧವ ಅವಧಾನಿ, ರೈತ, ಮಣ್ಣೂರು