ಅಧಿಕಾರಿ, ಸಿಬ್ಬಂದಿಯನ್ನು ಸ್ನೇಹದಿಂದ ಕಾಣಿ

KannadaprabhaNewsNetwork | Published : Jul 6, 2024 12:59 AM

ಸಾರಾಂಶ

ಯಾವುದೇ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸ್ನೇಹದಿಂದ ಕಾಣಬೇಕು. ಜತೆಗೆ ಎಲ್ಲರನ್ನೂ ಗೌರವಿಸುವ ಗುಣವಿದ್ದರೇ ಸರ್ಕಾರಿ ಕೆಲಸಗಳನ್ನು ಉತ್ತಮವಾಗಿ ನಿರ್ವಹಿಸಬಹುದು ಎಂದು ನಿರ್ಗಮಿತ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಯಾವುದೇ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸ್ನೇಹದಿಂದ ಕಾಣಬೇಕು. ಜತೆಗೆ ಎಲ್ಲರನ್ನೂ ಗೌರವಿಸುವ ಗುಣವಿದ್ದರೇ ಸರ್ಕಾರಿ ಕೆಲಸಗಳನ್ನು ಉತ್ತಮವಾಗಿ ನಿರ್ವಹಿಸಬಹುದು ಎಂದು ನಿರ್ಗಮಿತ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಯಾಗಿರುವ ಹಿನ್ನೆಲೆ ಶುಕ್ರವಾರ ಜಿಲ್ಲಾಡಳಿತ ವತಿಯಿಂದ ಜಿಲ್ಲಾಮಟ್ಟದ ಅಧಿಕಾರಿಗಳು‌‌ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಎರಡೂವರೆ ವರ್ಷದಿಂದ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವುದು ಸಂತಸ ತಂದಿದೆ ಎಂದು ತಿಳಿಸಿದರು.ಆರ್.ಸಿ.ಯು ರಿಜಿಸ್ಟರ್ ರಾಜಶ್ರೀ ಜೈನಾಪುರ ಮಾತನಾಡಿ, ನಿತೇಶ್ ಪಾಟೀಲ್ ಅವರ ಕಾರ್ಯ ದಕ್ಷತೆಗೆ ಇಡೀ ಜಿಲ್ಲೆಯೇ ಮೆಚ್ಚುಗೆ ವ್ಯಕ್ತಪಡಿಸಿದೆ. ಆಡಳಿತ ವರ್ಗವನ್ನು ಸುಧಾರಣೆಗೆ ತರುವುದು ಮಾತ್ರವಲ್ಲದೆ ಶಿಸ್ತುಬದ್ಧವಾಗಿ ಕರ್ತವ್ಯ ನಿರ್ವಹಿಸಿದ ಜನಪರ ಅಧಿಕಾರಿಯಾಗಿದ್ದಾರೆ ಎಂದು ತಿಳಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮಾತನಾಡಿ, ಇಲಾಖೆಯ ಯಾವುದೇ ಸಣ್ಣ ಕಾರ್ಯಕ್ರಮವು ಯಶಸ್ವಿಯಾಗಬೇಕೆಂದರೇ ಅವರ ಪರಿಪೂರ್ಣ ಸಹಭಾಗಿತ್ವ ಬಹಳಷ್ಟಿದೆ. ಕಿತ್ತೂರು ಉತ್ಸವ, ಬೆಳವಡಿ ಮಲ್ಲಮ್ಮ ಉತ್ಸವ, ಗಣೇಶ ಹಬ್ಬ ಸೇರಿದಂತೆ ಪ್ರತಿಯೊಂದು ಕಾರ್ಯಕ್ರದ ಯಶಸ್ವಿಗೆ ಅವರು ನಿರಂತರ ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ನಿತೇಶ್ ಪಾಟೀಲ ಅವರ ಅಧಿಕಾರವಧಿಯಲ್ಲಿ ನಡೆದ ಚಳಿಗಾಲದ ಅಧಿವಶನದಲ್ಲಿ ಅವರ ಕಾರ್ಯವೈಖರಿಯನ್ನು ಇಡೀ ರಾಜ್ಯ ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ. ಎಲ್ಲ ಇಲಾಖೆಗಳಗೆ ಅವರು ವಹಿಸಿಕೊಟ್ಟ ಜವಾಬ್ದಾರಿಗಳಿಂದ ಆಡಳಿತ ಸುಧಾರಣೆಯಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ ಎಂದು ತಿಳಿಸಿದರು.

ನಿತೇಶ್ ಪಾಟೀಲ ಅವರ ಹಲವು ಹೊಸ ವಿಚಾರಗಳು ಕಲಿಯಲು ಎಲ್ಲರಿಗೂ ಅವಕಾಶ ದೊರೆಯಿತು. ಅವರೊಬ್ಬ ಶಿಸ್ತಿನ ಸಿಪಾಯಿ ಎಂದು ಅಧಿಕಾರಿಗಳು ಗುಣಗಾನ ಮಾಡಿದರು.ವಿಧಾನಸಭೆ ಚುನಾವಣೆ, ಲೋಕಸಭಾ ಚುನಾವಣೆ, ಚಳಿಗಾಲದ ಅಧಿವೇಶನದಲ್ಲಿ ನಿತೇಶ್ ಪಾಟೀಲ ಮಾರ್ಗದರ್ಶನದ ಜೊತೆಗೆ ಅವರೊಂದಿಗಿನ ಬಾಂಧವ್ಯ, ಒಡನಾಟವನ್ನು ಅಧಿಕಾರಿಗಳು ಹಂಚಿಕೊಂಡರು. ಜಿಲ್ಲಾಧಿಕಾರಿಯಾಗಿ ಅವರು ಮಾಡಿದ ಕೆಲಸಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ವರ್ಗಾವಣೆಯಾಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ದಂಪತಿಯನ್ನು ಸನ್ಮಾನಿಸಲಾಯಿತು. ನೂತನ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ದಿನೇಶಕುಮಾರ್ ಮೀನಾ, ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರ್‌ಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿ ಸಿಬ್ಬಂದಿ, ಕಂದಾಯ ಇಲಾಖೆಯ ಸಿಬ್ಬಂದಿ ಬೀಳ್ಕೊಡುಗೆ ಸಮಾರಂಭ ಭಾಗವಹಿಸಿದ್ದರು.

Share this article