ಸುಭಾಶ್ಚಂದ್ರ ಎಸ್.ವಾಗ್ಳೆ
ಕೃಷ್ಣನೂರು ಉಡುಪಿಯಲ್ಲಿ ಎಲ್ಲಿ ನೋಡಿದರೂ ಪರ್ಯಾಯೋತ್ಸವದ ಸಂಭ್ರಮವೇ ಕಾಣುತ್ತಿದೆ. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು 4ನೇ ಬಾರಿ ಕೃಷ್ಣನ ಪೂಜೆಯ ಸರ್ವಜ್ಞ ಪೀಠ ಅಲಂಕರಿಸುವ ಶುಭಗಳಿಗೆಗಾಗಿ ಉಡುಪಿಯ ಭಕ್ತರು ಕಾತುರರಾಗಿದ್ದಾರೆ.
ಗುರುವಾರ ಮುಂಜಾನೆ 5 ಗಂಟೆ 55 ನಿಮಿಷಕ್ಕೆ ಶ್ರಿ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಶಿಷ್ಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರೊಡಗೂಡಿ ಸರ್ವಜ್ಞ ಪೀಠಾರೋಹಣ ಮಾಡಿ, ಅಕ್ಷಯಪಾತ್ರೆಯನ್ನು ಸ್ವೀಕರಿಸಲಿದ್ದಾರೆ.ಇದರೊಂದಿಗೆ ಶ್ರೀಪಾದರು ಮುಂದಿನ 2 ವರ್ಷಗಳ ಕಾಲ ಕೃಷ್ಣನ ಪೂಜೆಯ ಪರ್ಯಾಯ ಅಧಿಕಾರ, ಕೃಷ್ಣಮಠದ ಆಡಳಿತದ ಜವಾಬ್ದಾರಿ ಮತ್ತು ನಿತ್ಯ ಸಾವಿರಾರು ಮಂದಿಗೆ ಅನ್ನದಾನದ ಕರ್ತವ್ಯವನ್ನು ಹೊಂದಲಿದ್ದಾರೆ.
ಒಂಭತ್ತು ಶತಮಾನಗಳ ಹಿಂದೆ, ಮಧ್ವಾಚಾರ್ಯರ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ಕೃಷ್ಣನ ಪೂಜೆಯ ಪರ್ಯಾಯವು ಇಲ್ಲಿನ ಅಷ್ಟ ಮಠಗಳ ನಡುವೆ ಸರದಿ ಪ್ರಕಾರ, ಅಲಿಖಿತ ಶಾಸ್ತ್ರಬದ್ಧವಾಗಿ ಯಾವುದೇ ವ್ಯತ್ಯಾಸ ಇಲ್ಲದೆ ನಡೆಯುತ್ತದೆ ಎನ್ನುವುದೇ ಅಚ್ಚರಿಯಾಗಿದೆ.
ಗುರುವಾರ ಬೆಳಗ್ಗೆ ಪರ್ಯಾಯ ಅಧಿಕಾರ ಸ್ವೀಕರಿಸುವ ಶ್ರೀಪಾದರು ಬುಧವಾರ ರಾತ್ರಿ ಉಡುಪಿಯಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ದಂಡತೀರ್ಥ ಎಂಬಲ್ಲಿನ ಕೆರೆಗೆ ತೆರಳಿ ಸ್ನಾನ ಮಾಡಿ, ಮಧ್ಯರಾತ್ರಿಯ ಹೊತ್ತಿಗೆ ಉಡುಪಿ ನಗರದ ಜೋಡುಕಟ್ಟೆ ಎಂಬಲ್ಲಿ ಬರುತ್ತಾರೆ.
ನಂತರ ಶ್ರೀಗಳು ರಾಜಾಂಗಣದಲ್ಲಿ ಭವ್ಯ ರಾಜಸಭೆ ದರ್ಬಾರನ್ನು ನಡೆಸುತ್ತಾರೆ. ಇದರಲ್ಲಿ ಸರ್ಕಾರದ ಪ್ರತಿನಿಧಿಗಳು, ಸಾಮಾಜಿಕ - ಧಾರ್ಮಿಕ ಪ್ರತಿನಿಧಿಗಳು ಭಾಗವಹಿಸುತ್ತಾರೆ. ಸಾಧಕರಿಗೆ ಸನ್ಮಾನ, ಮಠದ ಅಧಿಕಾರಿಗಳ ಘೋಷಣೆ, ಮುಂದಿನೆರಡು ವರ್ಷಗಳ ಯೋಜನೆಗಳ ಘೋಷಣೆಗಳು ನಡೆಯುತ್ತವೆ.
ಇಂದು ಉಡುಪಿಯಲ್ಲಿ ರಾತ್ರಿಯೇ ಆಗುವುದಿಲ್ಲ...!
ಮಂತ್ರಿಮಾಗಧರು, ಗಣ್ಯರು, ಹತ್ತಿಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಇಪ್ಪತ್ತಕ್ಕೂ ಹೆಚ್ಚು ಟ್ಯಾಬ್ಲೋಗಳು, ಹತ್ತಕ್ಕೂ ಹೆಚ್ಚು ಜನಪದ ತಂಡಗಳು, ಹುಲಿವೇಷಧಾರಿಗಳು, ಐದಾರು ತಂಡಗಳಲ್ಲಿ ಮಂಗಳವಾದ್ಯ, ಮಠದ ಬಿರುದುಬಾವಲಿಗಳು ಮೆರವಣಿಗೆಗೆ ಬೇರೆಯೇ ಖದರನ್ನು ನೀಡುತ್ತವೆ.