ಧಾರವಾಡ:
ಇದಾವ ಸಂತೆ ಅಂತೀರಾ!
ತಾಲೂಕಿನ ಮರೇವಾಡ ಶಾಲೆಯ ಮಕ್ಕಳು ತಮ್ಮ ಶಾಲಾವರಣದಲ್ಲಿ ಮೆಟ್ರಿಕ್ ಮೇಳ ಮತ್ತು ಸಂತೆ ಮೇಳದಲ್ಲಿ ನಾ ಮುಂದೆ ತಾ ಮುಂದೆ ಎನ್ನುತ್ತ ತಮ್ಮ ವಸ್ತುಗಳನ್ನು ಮಾರಿ ಎಲ್ಲರಿಗೂ ಅಚ್ಚರಿ ಮೂಡಿಸಿದರು.ಒಂದೆಡೆ ತಾವೇ ತಯಾರಿಸಿದ ಪಾನಿ ಪುರಿ, ಭೇಲ್ ಪುರಿ, ಸಮೋಸಾ, ಸ್ಯಾಂಡ್ವಿಚ್, ಫ್ರೂಟ್ ಸಲಾಡ್ನ ಅಂಗಡಿಗಳ ಸಾಲು. ಇನ್ನೊಂದೆಡೆ ತರಕಾರಿ ಮಾರುಕಟ್ಟೆ. ತಾವೇ ತಯಾರಿಸಿದ ಕಿವಿಯೋಲೆ, ಕೈ ಬಳೆ, ಸರ, ಗ್ರೀಟಿಂಗ್ ಕಾರ್ಡ್ಗಳ ಮಾರಾಟದಲ್ಲಿ ತೊಡಗಿರುವ ಕರಕುಶಲಕರ್ಮಿಗಳು. ಒಟ್ಟಾರೆ ಶಾಲೆಯ ಆವರಣ ಮಕ್ಕಳ ಸಂತೆಯ ದೃಶ್ಯವಾಗಿತ್ತು. ಮಕ್ಕಳು ಮಾರಾಟ ಮಾಡುತ್ತಿದ್ದ ರೀತಿಗೆ ಪಾಲಕರು ಮತ್ತು ಶಿಕ್ಷಕರು ಬೆರಗಾಗಿದ್ದರು. ಗ್ರಾಮದ ನಿವಾಸಿಗಳು ಸಂತೆಗೆ ಬಂದು ತಮಗೆ ಬೇಕಾದ ವಸ್ತು ಖರೀದಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಿದರು. ಮೆಟ್ರಿಕ ಮೇಳದಲ್ಲಿ ಮಾದರಿ ಎಟಿಎಂ, ಬ್ಯಾಂಕ್, ಪೋಸ್ಟ್ ಆಫೀಸ್ ಸಹ ಗಮನ ಸೆಳೆದವು.ಪ್ರತಿನಿತ್ಯ ಜೀವನದಲ್ಲಿ ನಡೆಯುವ ಚಟುವಟಿಕೆಯಲ್ಲಿ ಹಣದ ಪಾತ್ರವೇನು ಎಂಬುದನ್ನು ಮಕ್ಕಳಿಗೆ ತಿಳಿಸಿಕೊಡುವ ಉದ್ದೇಶದಿಂದ ಮಕ್ಕಳ ಮೆಟ್ರಿಕ್ ಹಾಗೂ ಸಂತೆ ಮೇಳ ಏರ್ಪಡಿಸಲಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ ಕೆ.ಎಫ್. ಹೇಳಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಸ್.ವಿ. ಸಂತಿ ಮಾತನಾಡಿ, ಮಕ್ಕಳಿಗೆ ವ್ಯವಹಾರದ ಕುರಿತು ಪುಸ್ತಕ, ಬ್ಲಾಕ್ ಬೋರ್ಡ್ನಲ್ಲಿ ತಿಳಿಸಲಾಗಿತ್ತು. ಆದರೆ, ವಾಸ್ತವಿಕವಾಗಿ ಅರಿಯಬೇಕು ಎಂಬ ಉದ್ದೇಶದಿಂದ ಸಂತೆ ಏರ್ಪಡಿಸಿದ್ದು, ಮಕ್ಕಳು ಸಂತಸದಿಂದಲೆ ಪಾಲ್ಗೊಂಡಿದ್ದಾರೆ ಎಂದು ಹೇಳಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ನರಸಿಂಹಮೂರ್ತಿ ರಾಜೂರ, ಎಸ್ಡಿಎಂಸಿ ಅಧ್ಯಕ್ಷ ಉಮೇಶ ಹುಲಮನಿ, ಗ್ರಾಪಂ ಸದಸ್ಯ ವಿಠ್ಠಲ್ ಕಬನೂರ, ಸಿಆರ್ಪಿ ಬಸವರಾಜ ಕುರಗುಂದ, ಪವಿತ್ರಾ ಪಟ್ಟೇದ, ಬಸವರಾಜ ಮೀಸಿ, ಪ್ರಭು ತಡಕೋಡ, ವೀರಬಸಯ್ಯ ಹಿರೇಮಠ, ಸುರೇಶ ಮನೆಕ್ಕನವರ, ಬಸವರಾಜ ಮಾದರ, ಲಕ್ಷ್ಮೀ ನವಲಗುಂದ, ದ್ರಾಕ್ಷಾಯಣಿ ಹುಲಮನಿ ಮತ್ತಿತರರು ಇದ್ದರು.