ಚನ್ನಪಟ್ಟಣ: ಪ್ರತಿಷ್ಠಿತ ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಎ.ಆರ್.ಚನ್ನೇಗೌಡ(ಅರಳಾಪುರ ಸುರೇಶ್) ಹಾಗೂ ಉಪಾಧ್ಯಕ್ಷೆಯಾಗಿ ಪೂಜಾ ಲೋಕೇಶ್ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ನಿರ್ದೇಶಕರಾದ ಎಚ್.ಸಿ.ಜಯಮುತ್ತು, ಎಂ.ಎನ್.ರಾಜಶೇಖರ್, ಇ.ತಿ.ಶ್ರೀನಿವಾಸ್, ಮಳೂರುಪಟ್ಟಣ ರವಿ, ರೇವ ಹೆಗ್ಗಡೆ, ಕೆ.ಮಂಜುನಾಥ್, ತಗಚಗೆರೆ ಪವನ್, ವಿ.ಎಚ್.ಮಧುಕರ್, ಪುಟ್ಟಸ್ವಾಮಿ, ಶಿಲ್ಪಾಮಹೇಶ್ ಭಾಗವಹಿಸಿದ್ದರು. ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಸಹಿ ಹಂಚಿ ಸಂಭ್ರಮಿಸಿದರು.
ನೂತನ ಅಧ್ಯಕ್ಷ ಚನ್ನೇಗೌಡ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಮುಖಂಡರು ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ನೀಡಿದ್ದಾರೆ. ಅಂತೆಯೇ ಸಂಸ್ಥೆಯ ಎಲ್ಲ ನಿರ್ದೇಶಕರು ಸೇರಿ ಅಧ್ಯಕ್ಷನನ್ನಾಗಿ ಅವಿರೋಧ ಆಯ್ಕೆ ಮಾಡಿದ್ದಾರೆ. ಎಲ್ಲ ನಿದೇರ್ಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಅಭಿವೃದ್ಧಿ ಹಾದಿಯಲ್ಲಿ ಕೊಂಡೊಯ್ಯತ್ತೇನೆ ಎಂದು ಭರವಸೆ ನೀಡಿದರು.ಸಂಸ್ಥೆಗೆ ಅಂಟಿರುವ ಅಕ್ಕಿ ಹಗರಣದ ಕಳಂಕದಲ್ಲಿ ನಮ್ಮ ಹಿಂದಿನ ಆಡಳಿತ ಮಂಡಳಿಯ ಪಾತ್ರವಿಲ್ಲ. ಇದನ್ನು ನಿರೂಪಿಸುವುದು ನನ್ನ ಉದ್ದೇಶವಾಗಿದೆ. ನನ್ನ ಮೇಲೆ ಪಕ್ಷದ ಮುಖಂಡರು ಹಾಗೂ ಸಂಸ್ಥೆಯ ನಿರ್ದೇಶಕರು ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಪ್ರತಿಷ್ಠಿತ ಟಿಎಪಿಸಿಎಂಎಸ್ ಸಂಸ್ಥೆ ಅಧ್ಯಕ್ಷರಾಗಿ ಆಯ್ಕೆಯಾದ ಎ.ಆರ್.ಚನ್ನೇಗೌಡ ಹಾಗೂ ಉಪಾಧ್ಯಕ್ಷೆಯಾಗಿ ಪೂಜಾ ಲೋಕೇಶ್ ಅವರನ್ನು ಸಂಸ್ಥೆ ನಿರ್ದೇಶಕರು ಹಾಗೂ ಜೆಡಿಎಸ್ ಮುಖಂಡರು ಅಭಿನಂದಿಸಿದರು.