ಕನ್ನಡಪ್ರಭ ವಾರ್ತೆ ತಿಪಟೂರು
ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಒಗ್ಗಟ್ಟು, ಸಾಮರಸ್ಯಗಳಲ್ಲಿ ಸಹಬಾಳ್ವೆಯೊಂದಿಗೆ ಜೀವನ ನಡೆಸುತ್ತಿದ್ದು ದೇಶವನ್ನು ಸದೃಢವಾಗಿಸಲು ನಿಟ್ಟಿನಲ್ಲಿ ರಾಷ್ಟ್ರದ ಐಕ್ಯತೆ ಮತ್ತು ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಒಗ್ಗಟ್ಟಾಗಿ ರಾಷ್ಟ್ರದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಬೇಕೆಂದು ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಾಶ್ರೀ ತಿಳಿಸಿದರು.ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಶುಕ್ರವಾರ ತಾಲೂಕು ಆಡಳಿತದ ವತಿಯಿಂದ ನಡೆದ 75ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಡಾ.ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚನೆಯಾಯಿತು. ಸಂವಿಧಾನವನ್ನು ಭಾರತದ ಎಲ್ಲಾ ನಾಗರೀಕರು ಅನುಸರಿಸಬೇಕಾದ ಮೂಲಭೂತ ನಿಯಮ ಮತ್ತು ಹಕ್ಕುಗಳ ಸ್ಥಾಪನೆಯೊಂದಿಗೆ ಅವರು ರಚಿಸಿರುವ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾದುದಾಗಿದೆ. ಬಾಹ್ಯಾಕಾಶ, ಸಾಫ್ಟ್ವೇರ್, ವೈದ್ಯಕೀಯ, ತಂತ್ರಜ್ಞಾನ, ಯೋಗ, ಸಂಸ್ಕೃತಿ, ಆರೋಗ್ಯ, ಧರ್ಮ, ಶಿಕ್ಷಣ, ರಕ್ಷಣೆ, ರಾಜಕೀಯದಂತಹ ಎಲ್ಲ ಪ್ರಮುಖ ಕ್ಷೇತ್ರಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದು ಅಭಿವೃದ್ಧಿಶೀಲ ರಾಷ್ಟ್ರಗಳು ಭಾರತದ ಪ್ರಗತಿಯತ್ತ ತಿರುಗಿ ನೋಡುವಂತಾಗಿದೆ ಎಂದರು.
ಸಂವಿಧಾನ ನಮಗೆ ನೀಡಿರುವ ಮತದಾನದ ಹಕ್ಕನ್ನು ನಿರ್ಲಕ್ಷಿಸದೆ ಹದಿನೆಂಟು ವರ್ಷ ತುಂಬಿದ ಯುವ ಅರ್ಹರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಅತ್ಯಂತ ಜವಾಬ್ದಾರಿಯುತವಾಗಿ ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕೆಂದರು.ಶಾಸಕ ಕೆ. ಷಡಕ್ಷರಿ ಮಾತನಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಸಮಾಜದಲ್ಲಿ ಸರಿಸಮಾನವಾಗಿ ಎಲ್ಲರೂ ಬಾಳಬೇಕು, ಬದುಕುಬೇಕು, ಎಲ್ಲರಿಗೂ ಮೂಲಭೂತ ಸೌಕರ್ಯಗಳು ದೊರೆಬೇಕೆಂಬ ಆಶಯದಿಂದ ಸಂವಿಧಾನ ರಚಿಸಿದರು. ಆದರೆ ಇತ್ತೀಚಿನ ದಿನಗಳಲ್ಲಿ ಸಂವಿಧಾನವನ್ನು ಬದಲಾಯಿಸುವುದಾಗಿ ಮಾತನಾಡುವ ಜನರು ರಾಜಕಾರಣದಲ್ಲಿದ್ದು ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕು. ಯುವಜನಾಂಗ ಎಚ್ಚೆತ್ತುಕೊಳ್ಳದಿದ್ದರೆ ದೇಶದ ಪರಿಸ್ಥಿತಿ ಅದೋಗತಿಗೆ ಹೋಗಲಿದೆ. ಅಧಿಕಾರಕ್ಕಾಗಿ ರಾಜಕೀಯದಲ್ಲಿ ಕೆಟ್ಟ ವಾತಾವರಣ ನಿರ್ಮಾಣವಾಗುವುದು ಬೇಡ. ಅಂಬೇಡ್ಕರ್ ಅವರ ಆಶಯದಂತೆ ಸರ್ಕಾರ ಹಾಗೂ ಸಮಾಜದಲ್ಲಿ ಸಿಗುವ ಯೋಜನೆಗಳು ಸಮಾನವಾಗಿ ಸಿಗಬೇಕು ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಪವನ್ ಕುಮಾರ, ಡಿವೈಎಸ್ಪಿ ವಿನಾಯಕ ಶಟಗೇರಿ, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ, ಸಿಡಿಪಿಒ ಅಶೋಕ್, ಗ್ರೇಡ್-2 ತಹಸೀಲ್ದಾರ್ ಜಗನ್ನಾಥ್, ನಗರಸಭೆ ಸದಸ್ಯರಾದ ಯಮುನಾ, ಮೇಘಶ್ರೀ, ಆಶೀಫಾಬಾನು, ಬೆಸ್ಕಾಂ ಎಇಇ ಮನೋಹರ್, ಸಣ್ಣ ನೀರಾವರಿ ಇಲಾಖೆಯ ದೊಡ್ಡಯ್ಯ, ಲೋಕೋಪಯೋಗಿ ಇಲಾಖೆ ದಯಾನಂದ್, ಪಶುಸಂಗೋಪನೆ ಇಲಾಖೆಯ ಡಾ. ನಂದೀಶ್, ಎಪಿಎಂಸಿ ಕಾರ್ಯದರ್ಶಿ ನ್ಯಾಮಗೌಡ, ಅರಣ್ಯ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ-ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಲ್ಲಾ ಶಾಲಾ ಕಾಲೇಜುಗಳ ೩೬ ವಿದ್ಯಾರ್ಥಿಗಳ ತಂಡಗಳಿಂದ ಹಾಗೂ ಪೊಲೀಸರಿಂದ ಆಕರ್ಷಕ ಪಥ ಸಂಚಲನ ನಡೆಯಿತು. ನಂತರ ಮಕ್ಕಳಿಂದ ದೇಶ ಭಕ್ತಿಗೀತೆಗಳ ಜೊತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.