ಬಳ್ಳಾರಿ: ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿ, ಯುವ ಜನರು ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡು ಜೀವನದಲ್ಲಿ ಯಶ ಕಾಣಬೇಕು ಎಂದು ಟಿವಿ ನಿರೂಪಕಿ ನವಿತಾ ಜೈನ್ ತಿಳಿಸಿದರು.
ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ಜರುಗಿದ ನೂತನ ಪತ್ರಿಕೋದ್ಯಮ ಹಾಗೂ ಇಂಗ್ಲಿಷ್ ವಿಭಾಗವನ್ನು ಉದ್ಘಾಟಿಸಿ, ಪತ್ರಿಕೋದ್ಯಮ ವಿಭಾಗದ ಪ್ರಾಯೋಗಿಕ ಪತ್ರಿಕೆ ಯುವ ಸ್ಫೂರ್ತಿ ಬಿಡುಗಡೆಗೊಳಿಸಿ ಮಾತನಾಡಿದರು.ತೆಕ್ಕಲಕೋಟೆಯಂತಹ ಗ್ರಾಮೀಣ ಪ್ರದೇಶದಲ್ಲಿ ಪತ್ರಿಕೋದ್ಯಮದೊಂದಿಗೆ ಆಂಗ್ಲ ಭಾಷೆಯನ್ನು ಕಲಿಯುವ ಅವಕಾಶವನ್ನು ಕಾಲೇಜಿನ ಪ್ರಾಚಾರ್ಯರು ಕಲ್ಪಿಸಿದ್ದಾರೆ. ಇದನ್ನು ಈ ಭಾಗದ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಬದುಕಿನಲ್ಲಿ ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳು ಮಾಧ್ಯಮ ಲೋಕದಲ್ಲಿ ಯಶಸ್ಸು ಕಾಣಬೇಕಾದರೆ ಜ್ಞಾನ ಸಂಪಾದನೆಯ ಜತೆಗೆ ಪದ ಸಂಪತ್ತು, ಬರವಣಿಗೆ ಮತ್ತು ಭಾಷಾ ಕೌಶಲ್ಯವನ್ನು ಗಳಿಸಿಕೊಳ್ಳುವುದು ತುಂಬಾ ಅಗತ್ಯವಾಗಿದೆ ಎಂದರು.ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಮೋಕ ಮಾತನಾಡಿ, ತಾವು ಕಾಲೇಜು ಪ್ರವೇಶ ಪಡೆದಾಗ ಪತ್ರಿಕೋದ್ಯಮ ಅಭ್ಯಾಸ ಮಾಡುವ ಅವಕಾಶ ಇರಲಿಲ್ಲ. ಹೀಗಾಗಿ ತಮ್ಮ ಕಾಲೇಜಿನಲ್ಲಿ ಈ ವಿಭಾಗವನ್ನು ಆರಂಭಿಸಿ ಗ್ರಾಮೀಣ ವಿದ್ಯಾರ್ಥಿಗಳು ವಿಶಿಷ್ಟ ವಿಷಯಗಳನ್ನು ಕಲಿಯಲು ಅವಕಾಶ ಕಲ್ಪಿಸಲಾಗಿದೆ. ನೂತನವಾಗಿ 2024- 25ನೇ ಶೈಕ್ಷಣಿಕ ವರ್ಷದಿಂದ ಪತ್ರಿಕೋದ್ಯಮ ಮತ್ತು ಇಂಗ್ಲಿಷ್ ವಿಭಾಗದ ಕೋರ್ಸ್ ಆರಂಭಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಅತಿಥಿ ಉಪನ್ಯಾಸಕ ಸಿ. ಮಂಜುನಾಥ್ ಮಾತನಾಡಿದರು. ಯುವ ಮುಖಂಡ ಸಿದ್ದಪ್ಪ, ರಾಜ್ಯಶಾಸ್ತ್ರ ವಿಭಾಗದ ಡಾ. ಜಗದೀಶ, ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ತೇಜಸ್ವಿನಿ, ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ವೈ. ಜನಾರ್ದನರೆಡ್ಡಿ, ಐಕ್ಯುಎಸಿ ಸಂಚಾಲಕ ಡಾ. ಬಿ. ವೀರೇಶ್, ಸಹಾಯಕ ಪ್ರಾಧ್ಯಾಪಕರಾದ ಎಸ್. ವರಲಕ್ಷ್ಮಿ ಉಪಸ್ಥಿತರಿದ್ದರು.ಉಪನ್ಯಾಸಕರಾದ ಡಿ. ಕುಮಾರಸ್ವಾಮಿ, ಸಿದ್ದೇಶ, ಮಾರಪ್ಪ ಎ.ಕೆ. ವರಲಕ್ಷ್ಮಿ, ಸುಭಾನ್ ಸಾಬ್ ಸೇರಿದಂತೆ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.