ಕನ್ನಡಪ್ರಭ ವಾರ್ತೆ ಕಾರ್ಕಳ
ಸರ್ಕಾರವು ಸಣ್ಣ ಪ್ರಮಾಣದ ಅನೇಕ ಯೋಜನೆಗಳನ್ನು ರೂಪಿಸಿದ್ದು, ಫಲಾನುಭವಿಗಳು ಅದರ ಸದುಪಯೋಗ ಪಡೆದು ಉದ್ಯೋಗ ನಿರ್ಮಾಣ ಮಾಡಬೇಕು. ಸ್ಥಳೀಯ ನಿರುದ್ಯೋಗಿಗಳಿಗೆ ಉದ್ಯೋಗ ದೊರೆತರೆ ಅಭಿವೃದ್ಧಿ ಸಾಧ್ಯವಾಗಲಿದೆ. ಕೇಂದ್ರ ಸರ್ಕಾರದ ಎಂಎಸ್ಎಂಇ ಹಾಗೂ ಸ್ಫೂರ್ತಿ ಯೋಜನೆಯಲ್ಲಿ ನಿಟ್ಟೆಯಲ್ಲಿ ನಿರ್ಮಾಣಗೊಂಡ ಹಲಸಿನ ಸಂಸ್ಕಾರಣಾ ಘಟಕ ದೇಶದ ಮೊದಲ ಹಲಸು ಘಟಕವಾಗಿದೆ ಎಂದು ಹೈದರಾಬಾದ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಎಂಎಸ್ಎಂಇ ಆಡಳಿತ ನಿರ್ದೇಶಕಿ ಡಾ.ಗ್ಲೋರಿ ಸ್ವರೂಪ ಹೇಳಿದರು.ಅವರು ನಿಟ್ಟೆ ಎಂಜಿನಿಯರಿಂಗ್ ಕಾಲೇಜು ಆವರಣದ ಸದಾನಂದ ಸಭಾಂಗಣದಲ್ಲಿ ಭಾರತ ಸರ್ಕಾರದ ಎಂಎಸ್ಎಂಇ ಹಾಗೂ ಸ್ಫೂರ್ತಿ ಯೋಜನೆ ಸಹಯೋಗದೊಂದಿಗೆ ನಿಟ್ಟೆ ಹಲಸು ಕ್ಲಸ್ಟರ್ ವತಿಯಿಂದ ಆಯೋಜಿಸಲಾದ ಎರಡು ದಿನಗಳ ಹಲಸು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.ಪಂಜಾಬ್ ರಾಜ್ಯದಲ್ಲಿ ಅನೇಕ ಕ್ಲಸ್ಟರ್ ಅಭಿವೃದ್ಧಿ ಹೊಂದಿದ್ದು, ಮಹಿಳೆಯರು ಕೂಡ ಪಾಲುದಾರರಾಗಿದ್ದಾರೆ. ದೇಶದಲ್ಲಿ ಸಣ್ಣ ಪ್ರಮಾಣದ ಉತ್ಪನ್ನ ಸಂಸ್ಕರಣಾ ಘಟಕಗಳಲ್ಲಿ 6.3 ಕೋಟಿ ಉದ್ಯೋಗಿಗಳು ನೊಂದಾಯಿಸಿಕೊಂಡಿದ್ದಾರೆ. ಯುವಜನರು ಸರ್ಕಾರದ ಅನೇಕ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳ ಬೇಕು ಎಂದರು.ಕೊಡಗು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಅಶೋಕ್ ಆಲೂರು ಮಾತನಾಡಿ, ಹಲಸು ಬೆಳೆಯುವ ಅನ್ನದಾತರಿಗೆ ಉತ್ತಮ ಮೌಲ್ಯ ದೊರೆಯಲು ಸಾಧ್ಯವಿದೆ. ಹಲಸು ಉತ್ತಮ ಗುಣಮಟ್ಟದ ಬೆಳೆಯಾಗಿದ್ದು, ದೇಶೀಯ ಮಟ್ಟದಲ್ಲಿ ಮಹತ್ವದ ಬೆಳೆಯಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿ ಹಲಸನ್ನು ರಾಜ್ಯದ ಬೆಳೆಯಾಗಿ ಘೋಷಿಸಲಾಗಿದೆ ಎಂದರು.ಎಐಸಿ ನಿಟ್ಟೆ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಪಿ. ಆಚಾರ್ ಪ್ರಾಸ್ತಾವಿಕ ಮಾತನಾಡಿದರು.
ನಬಾರ್ಡ್ ಸಹಾಯಕ ನಿರ್ದೇಶಕ ಸಂಗೀತ ಎಸ್. ಕಾರ್ತ ಮಾತನಾಡಿದರು. ಕೆನರಾ ಬ್ಯಾಂಕ್ ಸಹಾಯಕ ನಿರ್ದೇಶಕ ಕೆ. ಶ್ರೀಜಿತ್, ಸಿರಿ ಧರ್ಮಸ್ಥಳ ಆಡಳಿತ ನಿರ್ದೇಶಕ ಜನಾರ್ದನ, ನಿಟ್ಟೆ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ನಿರಂಜನ್ ಚಿಪ್ಳೂಣ್ಕರ್, ಸುಫಲಾ ಫಾರ್ಮ್ ಅಧ್ಯಕ್ಷ ಎನ್.ಟಿ. ಪೂಜಾರಿ, ಸುಫಲಾ ಫಾರ್ಮ್ ನಿರ್ದೇಶಕ ನವೀನ ನಾಯಕ್, ಶ್ರೀ ಪಡ್ರೆ ಉಪಸ್ಥಿತರಿದ್ದರು. ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧೀರ್ ರಾಜ್ ಕಾರ್ಯಕ್ರಮ ನಿರೂಪಿಸಿದರು.ಕೇಂದ್ರ ಸರ್ಕಾರದ ಎಸ್ಎಫ್ಯುಆರ್ಟಿಐ ಹಾಗೂ ಎಂಎಸ್ಎಂಇ ಯೋಜನೆಯಡಿಯಲ್ಲಿ ಸುಮಾರು 6.30 ಕೋಟಿ ರು. ವೆಚ್ಚದಲ್ಲಿ ನಿಟ್ಟೆಯಲ್ಲಿ ನಿರ್ಮಾಣಗೊಂಡ ಹಲಸು ಸಂಸ್ಕರಣಾ ಘಟಕವನ್ನು ಹೈದರಾಬಾದ್ ಎಂಎಸ್ಎಂಇ ಆಡಳಿತ ನಿರ್ದೇಶಕಿ ಡಾ.ಗ್ಲೋರಿ ಸ್ವರೂಪ ಉದ್ಘಾಟಿಸಿ ಶುಭಹಾರೈಸಿದರು.ಈ ಸಂದರ್ಭದಲ್ಲಿ ಇಂಕಿಬ್ಯುಲೆಶನ್ ಸೆಂಟರ್ ನಿಟ್ಟೆ ಕಾರ್ಯನಿರ್ವಾಹಕ ಅಧಿಕಾರಿ ಎ.ಪಿ. ಆಚಾರ್ಯ, ಹಲಸು ಸಂಸ್ಕರಣಾ ಘಟಕ ಅಧ್ಯಕ್ಷ ನವೀನ್ ನಾಯಕ್, ಸುಫಲಾ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಅಧ್ಯಕ್ಷ ಎನ್.ಟಿ. ಪೂಜಾರಿ, ಉದ್ಯಮಿ ಅಶೋಕ್ ಅಡ್ಯಾಂತಾಯ, ಯೋಗೀಶ್ ಹೆಗ್ಡೆ ಉಪಸ್ಥಿತರಿದ್ದರು.