ಬೇಬಿಬೆಟ್ಟದ ಜಾತ್ರೆಯಲ್ಲಿ ಕಣ್ಮನ ಸೆಳೆಯುವ ವಿವಿಧ ತಳಿ ರಾಸುಗಳು

KannadaprabhaNewsNetwork | Published : Mar 5, 2025 12:34 AM

ಸಾರಾಂಶ

ಐತಿಹಾಸಿಕ, ಪುರಾಣ ಪ್ರಸಿದ್ಧ ಬೇಬಿ ಬೆಟ್ಟದಲ್ಲಿ ಆರಂಭವಾಗಿರುವ ಭಾರೀ ದನಗಳ ಜಾತ್ರೆಯಲ್ಲಿ ವಿವಿಧ ತಳಿಗಳ ರಾಸುಗಳು ಗಮನ ಸೆಳೆದಿದ್ದು, ಜಾತ್ರೆ ಕಳೆಗಟ್ಟಿದೆ.

ಬಿ.ಎಸ್.ಜಯರಾಮು

ಕನ್ನಡಪ್ರಭ ವಾರ್ತೆ ಪಾಂಡವಪುರ

ಐತಿಹಾಸಿಕ, ಪುರಾಣ ಪ್ರಸಿದ್ಧ ಬೇಬಿ ಬೆಟ್ಟದಲ್ಲಿ ಆರಂಭವಾಗಿರುವ ಭಾರೀ ದನಗಳ ಜಾತ್ರೆಯಲ್ಲಿ ವಿವಿಧ ತಳಿಗಳ ರಾಸುಗಳು ಗಮನ ಸೆಳೆದಿದ್ದು, ಜಾತ್ರೆ ಕಳೆಗಟ್ಟಿದೆ.

ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಫೆ.26 ರಂದು ಆರಂಭವಾದ ದನಗಳ ಜಾತ್ರೆಯಲ್ಲಿ, ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ರೈತರು ರಾಸುಗಳನ್ನು ಜಾತ್ರೆಯಲ್ಲಿ ಕಟ್ಟುವುದು ಹಿಂದಿನಿಂದಲೂ ರೂಢಿಯಲ್ಲಿದೆ.

ರೈತರು ಪ್ರತಿಷ್ಠೆಗಾಗಿ ಜಾತ್ರೆಯ ಪ್ರಮುಖ ಬೀದಿಗಳಲ್ಲಿ ಸಾವಿರಾರು ರು. ಖರ್ಚು ಮಾಡಿ ವಾದ್ಯಗೋಷ್ಠಿಗಳೊಂದಿಗೆ ರಾಸುಗಳನ್ನು ಮೆರವಣಿಗೆ ಮಾಡಿ ಜಾತ್ರೆಯಲ್ಲಿ ಕಟ್ಟಿದ್ದು, ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರದೊಂದಿಗೆ ಪೆಂಡಾಲ್ ನಿರ್ಮಿಸಿ ರಾಸುಗಳ ಪ್ರದರ್ಶನ ಮಾಡಲಾಗುತ್ತಿದೆ. ಲಕ್ಷಾಂತರ ರು. ಬೆಲೆ ಬಾಳುವ ರಾಸುಗಳು ಜಾತ್ರೆಯಲ್ಲಿ ಜನರ, ರೈತರ ಕಣ್ಮನ ಸೆಳೆಯುತ್ತಿವೆ.

ರೈತರಿಗೆ ಅನುಕೂಲವಾಗಲು ವಿವಿಧ ಇಲಾಖೆಗಳ ವಸ್ತು ಪ್ರದರ್ಶನ ಮತ್ತು ಪದಾರ್ಥಗಳ ಮಾರಾಟಕ್ಕೆ ಜಾತ್ರೆ ವೇಳೆ ಅವಕಾಶ ಕಲ್ಪಿಸಲಾಗಿದೆ. ಜಾತ್ರೆ ಯಶಸ್ಸಿಗೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಟೊಂಕ ಕಟ್ಟಿ ನಿಂತಿದ್ದು, 9 ದಿನಗಳ ಬೇಬಿ ಬೆಟ್ಟದ ದನಗಳ ಜಾತ್ರೆ ನಾಳೆ ಅಂತ್ಯವಾಗಲಿದೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ 50 ಸಾವಿರ ರು. ಗಳಿಂದ 1, 2,3,4,5,10,15 ಹಾಗೂ 20 ಲಕ್ಷ ರು. ಗಳವರೆಗಿನ ದನಗಳ ಪ್ರದರ್ಶನ ಮತ್ತು ಮಾರಾಟ ಬಲು ಜೋರಾಗಿ ನಡೆಯುತ್ತಿದೆ. ಎತ್ತ ನೋಡಿದರೂ ರಾಸುಗಳು, ಯಾವ ಕಡೆಗೂ ಆಲಿಸಿದರೂ ರಾಸುಗಳ ಗೆಜ್ಜೆನಾದ ಕೇಳಿಸುತ್ತಿದೆ.

ಸಾವಯವ ಕೃಷಿಕ ಶ್ಯಾದನಹಳ್ಳಿ ಸಿ.ಚಲುವರಾಜು ಅವರು ತಂದೆ ಕಾಲದಿಂದಲೂ 50 ವರ್ಷಗಳಿಂದ ಬೇಬಿ ಜಾತ್ರೆಯಲ್ಲಿ ಜೋಡೆತ್ತುಗಳನ್ನು ಕಟ್ಟುತ್ತಿದ್ದಾರೆ. ತುಮಕೂರಿನ ಶಿರಾದಿಂದ ಖರೀದಿಸಿರುವ ಎರಡು ಹಲ್ಲಿನ ಜೋಡೆತ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ರಾಸುಗಳ ಸಾಕಾಣಿಕೆಗೆ ಆಳಿನ ಖರ್ಚು ಹೊರತುಪಡಿಸಿ ಪ್ರತಿನಿತ್ಯ 500 ರು. ಗಳು ಖರ್ಚು ತಗಲುತ್ತದೆ ಎಂದು ಚಲುವರಾಜು ತಿಳಿಸಿದ್ದಾರೆ.

ಪಶು ಸಂಗೋಪನಾ ಇಲಾಖೆ, ರೇಷ್ಮೆ, ತೋಟಗಾರಿಕೆ, ಕೃಷಿ, ಅರಣ್ಯ, ಶಿಕ್ಷಣ, ಕಾವೇರಿ ನೀರಾವರಿ ನಿಗಮ, ಸೆಸ್ಕ್, ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವತಿಯಿಂದ ರೈತರು ಮತ್ತು ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ನೀಡುವ ಜತೆಗೆ, ಕೃಷಿಗೆ ಸಂಬಂಧಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಜಾತ್ರೆಗೆ ಆಗಮಿಸುವವರ ಗಮನ ಸೆಳೆಯುತ್ತಿದೆ.

ಮಹಿಳಾ ಉತ್ಸವ, ಕಬಡ್ಡಿ, ವಾಲಿಬಾಲ್ ಪಂದ್ಯಾವಳಿ, ಸಾಮೂಹಿಕ ವಿವಾಹ, ವಿವಿಧ ಇಲಾಖೆಗಳಿಂದ ವಿಚಾರಗೋಷ್ಠಿ ಆಯೋಜಿಸಿ ಅರಿವು ಮೂಡಿಸಲಾಗುತ್ತಿದೆ. ಪ್ರತಿದಿನ ಸಂಜೆ ತಾಲೂಕಿನ ಶಾಲಾ ಕಾಲೇಜುಗಳ ಮಕ್ಕಳು ಹಾಗೂ ತಾಲೂಕಿನ ಜಾನಪದ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮ ಜಾತ್ರೆಗೆ ಮತ್ತಷ್ಟು ಮೆರಗು ನೀಡಿವೆ.

ರಾಜ್ಯದಲ್ಲಿ ನಡೆಯುವ ದನಗಳ ಜಾತ್ರೆಯಲ್ಲಿ ಬೇಬಿ ಬೆಟ್ಟದ ಜಾತ್ರೆಗೆ ವಿಶೇಷ ಹೆಸರಿದೆ. ಹಳ್ಳಿಕಾರ್, ಅಮೃತ್ ಮಹಲ್ ತಳಿ, ಬಿಳಿ ಹಾಗೂ ಕಪ್ಪು ಬಣ್ಣದ ರಾಸುಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಬರುತ್ತವೆ. ಜಾತ್ರೆಯಲ್ಲಿ ಭಾಗವಹಿಸುವ ಉತ್ತಮ ರಾಸುಗಳಿಗೆ 15 ವಿಭಾಗಗಳಲ್ಲಿ ಒಟ್ಟು 91 ಜೋಡಿಗಳಿಗೆ ಚಿನ್ನವನ್ನು ಬಹುಮಾನವನ್ನಾಗಿ ನೀಡುವ ಮೂಲಕ ರಾಸುಗಳ ಮಾಲೀಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಹಿಂದಿನ ವರ್ಷಗಳಿಗಿಂತಲೂ ಹೆಚ್ಚು (3 ಸಾವಿರಕ್ಕೂ ಹೆಚ್ಚು ರಾಸುಗಳು) ಭಾಗವಹಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ.

ಮಾ.2ರಂದು ಉಚಿತ ಸರಳ ಸಾಮೂಹಿಕ ವಿವಾಹದಲ್ಲಿ 24 ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಮಾ.4ರಂದು ಶ್ರೀ ಮಾದೇಶ್ವರ ಹಾಗೂ ಸಿದ್ದೇಶ್ವರ ಸ್ವಾಮಿ ರಥೋತ್ಸವ ನಡೆದಿದೆ. ಮಾ. 5ರಂದು ತೆಪ್ಪೋತ್ಸವ ನಡೆಯಲಿದೆ. ಮಾ.6ರಂದು ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಮಾಡುವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.

Share this article