ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಪಟ್ಟಣದ ವಿಶ್ವನಾಥ ಕಾಲೋನಿಯ ಹಲವು ರಸ್ತೆಗಳಿಗೆ ಟಿಎಚ್ಒ ಡಾ.ಟಿ. ರವಿಕುಮಾರ್ ಮತ್ತು ತಂಡ ಮತ್ತು ಪುರುಸಭೆ ಮುಖ್ಯಾಧಿಕಾರಿ ಸುರೇಶ್ಅವರು ಭೇಟಿ ನೀಡಿ ಲಾರ್ವ ಸಮೀಕ್ಷೆ ಮಾಡುತ್ತಿರುವುದನ್ನು ಪರಿಶೀಲಿಸಿದರು.ಈ ವೇಳೆ ಮಾತನಾಡಿದ ಟಿಎಚ್ಒ ರವಿಕುಮಾರ್, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಿಂದ ಪ್ರತಿ ಶುಕ್ರವಾರ,ಮತ್ತು ಪ್ರತಿ ಮಂಗಳವಾರ ಎಚ್.ಡಿ. ಕೋಟೆ ಮತ್ತು ಹ್ಯಾಂಡ್ ಪೋಸ್ಟ್, ಸರಗೂರಿನಲ್ಲಿ ಲಾರ್ವ ಸಮೀಕ್ಷೆ ಮಾಡುತ್ತಾರೆ. ಇದರ ಜೊತೆಗೆ ಡೆಂಘಿ ಮತ್ತು ಚಿಕನ್ ಗುನ್ಯಾ ಪ್ರಕರಣ ಕಾಣಿಸಿಕೊಂಡಿರುವ ಗ್ರಾಮದಲ್ಲಿ ಕ್ರಿಯಾ ಯೋಜನೆಯಂತೆ ಪ್ರತಿ ದಿನ ಲಾರ್ವ ಸಮೀಕ್ಷೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಇದರಿಂದ ಸೊಳ್ಳೆಗಳ ಉತ್ಪತ್ತಿ ತಡೆಗಟ್ಟಬಹುದು ಮತ್ತು ಸೊಳ್ಳೆಯಿಂದ ಹರಡುವ ಜ್ವರಗಳ ಬಗ್ಗೆ ಜನರಿಗೆ ಆರೋಗ್ಯ ಶಿಕ್ಷಣ ನೀಡಲಾಗುತ್ತದೆ. ಡೆಂಘಿ ಮತ್ತು ಚಿಕೂನ್ಗುನ್ಯ ಕಾಯಿಲೆಯು ಜ್ವರ ಸೋಂಕು ಹೊಂದಿದ ಈಡಿಸ್ ಎಂಬ ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ಸೊಳ್ಳೆಯು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತದೆ ಎಂದರು.ಈ ರೋಗದ ಮುಖ್ಯಲಕ್ಷಣಗಳೆಂದರೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗುಡ್ಡೆ ಹಿಂಭಾಗದಲ್ಲಿ ವಿಪರೀತ ನೋವು ,ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು, ಮತ್ತು ವಸಡುಗಳಲ್ಲಿ ರಕ್ತ ಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ ಎಂದರು.
ಇದು ಡೆಂಘೀ ರಕ್ತಸ್ರಾವ ಜ್ವರ ಹಾಗೂ ಡೆಂಘೀ ಆಘಾತಕರಕ. ಆದ್ದರಿಂದ ಇದು ಮಾರಣಾಂತಿಕವಾಗಬಹುದು. ಡೆಂಘೀ ಜ್ವರಕ್ಕೆ ಯಾವುದೇ ನಿರ್ದಿಷ್ಟ ಔಷಧಿ ಅಥವಾ ಲಸಿಕೆ ಇಲ್ಲ. ರೋಗ ಲಕ್ಷಣಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುವುದು. ಇಡೀ ಸೊಳ್ಳೆಗಳ ನಿಯಂತ್ರಣ ಡೆಂಘೀ ರೋಗದ ಹತೋಟಿಗೆ ಮುಖ್ಯ ವಿಧಾನ. ಈ ಸೊಳ್ಳೆಗಳು ಸ್ವಚ್ಛ ನೀರಿನಲ್ಲಿ ಅಂದರೆ ಮನೆಯ ಒಳಗೆ ಹಾಗೂ ಹೊರಗೆ ನೀರನ್ನು ಶೇಖರಿಸುವ ತೊಟ್ಟಿ ಮಣ್ಣಿನ ಮಡಿಕೆ ಉಪಯೋಗಿಸಿದ ಒರಳು ಕಲ್ಲುಗಳು, ಹೂವಿನ ಕುಂಡಗಳು, ತಟ್ಟೆಗಳು, ಬಳಸದ ಟೈರು, ಎಳನೀರು ಚಿಪ್ಪುಗಳು, ಒಡೆದ ಬಾಟಲ್, ಘನತ್ಯಾಜ್ಯ ವಸ್ತುಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು ಎಂದು ಕಿವಿಮಾತು ಹೇಳಿದರು.ಆದ್ದರಿಂದ ಎಲ್ಲಾ ನೀರಿನ ತೊಟ್ಟಿಗಳು, ಡ್ರಮ್ ಗಳ, ಬ್ಯಾರೆಲ್ ಗಳು, ಏರ್ ಕೂಲರ್, ತೊಟ್ಟಿ ಇತ್ಯಾದಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಉಜ್ಜಿ ತೊಳೆದು ಒಣಗಿಸಿ ಮತ್ತೆ ಭರ್ತಿ ಮಾಡಬೇಕು. ಪ್ರತಿ ಶುಕ್ರವಾರ ಡ್ರೈ ಡೇ ಮಾಡಬೇಕು. ಇದರಿಂದ ಸೊಳ್ಳೆಗಳನ್ನು ನಿಯಂತ್ರಿಸಬಹುದು. ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಟೈರು, ಎಳನೀರಿನ ಚಿಪ್ಪು, ಮರದ ಪೊಟರೆ, ಒಡೆದ ಬಾಟಲಿ, ಕುಡಿದು ಬಿಸಾಡಿದ ಪ್ಲಾಸ್ಟಿಕ್ ಲೋಟ, ಬಾಟಲ್ ಮುಂತಾದವುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರವಹಿಸುವುದು ಸೂಕ್ತ ವಿಲೇವಾರಿ ಮಾಡಬೇಕು ಎಂದರು.
ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ಪರದೆ ಬಳಸುವುದು, ಮೈ ತುಂಬಾ ಬಟ್ಟೆ ಧರಿಸುವುದು, ಆರೋಗ್ಯ ಇಲಾಖೆ ಹಮ್ಮಿಕೊಂಡ ಸೊಳ್ಳೆ ನಿಯಂತ್ರಣ ಕ್ರಮಗಳಿಗೆ ಸಹಕಾರ ನೀಡಬೇಕು ಎಂದು ಅವರು ತಿಳಿಸಿದರು.ಈ ವೇಳೆ ಆರೋಗ್ಯ ನಿರೀಕ್ಷಣಾಧಿಕಾರಿ ನಾಗೇಂದ್ರ, ರವಿರಾಜ್, ಚಂದ್ರು, ಪ್ರದೀಪ, ಆರೋಗ್ಯ ಸಂರಕ್ಷಣಾಧಿಕಾರಿ ಲಕ್ಷ್ಮಿ ಭಟ್, ಸುಮಾದೇವಿ, ಶೋಭಾ,
ಸವಿತಾ ಮೊದಲಾದವರು ಇದ್ದರು.