5ನೇ ದಿನವೂ ಗ್ರಾಪಂ ಕುಟುಂಬ ಪ್ರತಿಭಟನೆ: ಸ್ಪಂದಿಸದ ಸರ್ಕಾರ

KannadaprabhaNewsNetwork | Published : Oct 10, 2024 2:31 AM

ರಾಜ್ಯದ ಗ್ರಾಮ ಪಂಚಾಯಿತಿಗಳು, ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ, ಅಧ್ಯಕ್ಷರು, ಸದಸ್ಯರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಎಲ್ಲ ವೃಂದ ಸಂಘಗಳು ಹಾಗೂ ಗ್ರಾಪಂ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ನಗರದ ಜಿ.ಪಂ. ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಬುಧವಾರ ಐದನೇ ದಿನಕ್ಕೆ ಕಾಲಿಟ್ಟಿತು.

- ಗ್ರಾಪಂಗಳಿಗೆ ಬಲ ತುಂಬಲು ನೌಕರ ಸಂಘಟನೆಗಳ ಬಿಗಿಪಟ್ಟು । ಹಳ್ಳಿಗಳ ಅಭಿವೃದ್ಧಿ ಮರೆತ ರಾಜ್ಯ ಸರ್ಕಾರ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದ ಗ್ರಾಮ ಪಂಚಾಯಿತಿಗಳು, ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ, ಅಧ್ಯಕ್ಷರು, ಸದಸ್ಯರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಎಲ್ಲ ವೃಂದ ಸಂಘಗಳು ಹಾಗೂ ಗ್ರಾಪಂ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ನಗರದ ಜಿ.ಪಂ. ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಬುಧವಾರ ಐದನೇ ದಿನಕ್ಕೆ ಕಾಲಿಟ್ಟಿತು.

ಮುಖಂಡರು ಮಾತನಾಡಿ, ರಾಜ್ಯದ ಶೇ.68-70 ಜನರಿಗೆ ಸ್ಥಳೀಯ ಸಂಸ್ಥೆಯಾದ ಗ್ರಾ.ಪಂ.ಗಳಿಂದ ಶೇ.70ರಷ್ಟು ಸೇವೆ ನೀಡಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಸಹಾಯಕರು, ಗ್ರಾಪಂ ಸಿಬ್ಬಂದಿ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಅಸಡ್ಡೆ ತೋರುತ್ತಿದೆ. ಇದು ಸರಿಯಲ್ಲ. ನೌಕರರ ನ್ಯಾಯುತ ಬೇಡಿಕೆಗಳನ್ನು ಈಡೇರಿಸದ ಹೊರತು, ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.

ಗ್ರಾಪಂ ಮಟ್ಟದಲ್ಲಿ ನಾವೆಲ್ಲರೂ ಹಲವಾರು ಸಮಸ್ಯೆ ಎದುರಿಸುತ್ತಿದ್ದೇವೆ. ಅವುಗಳ ಪರಿಹಾರಕ್ಕೆ ಅನೇಕ ವರ್ಷಗಳಿಂದ ಸಲ್ಲಿಸಿದ ಮನವಿಗಳಿಗೆ ಸ್ಪಂದನೆಯೇ ಇಲ್ಲವಾಗಿದೆ. ಎಲ್ಲ ಸಮಸ್ಯೆಗಳಿಗೂ ಪಿಡಿಒಗಳು, ಸಿಬ್ಬಂದಿಯನ್ನೇ ನೇರ ಹೊಣೆ ಮಾಡಲಾಗುತ್ತಿದೆ. ಸರ್ಕಾರ ಹಾಗೂ ಇಲಾಖೆಯ ಈ ಧೋರಣೆ ಖಂಡಿಸಿ ರಾಜ್ಯಾದ್ಯಂತ ಅ.2ರಿಂದಲೇ ಗ್ರಾಪಂ ಸೇವೆಗಳನ್ನು ಸ್ಥಗಿತಗೊಳಿಸಿ, ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದೇವೆ ಎಂದರು.

ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯರ ಮಹಾ ಒಕ್ಕೂಟದ ದೊಗ್ಗಳ್ಳಿ ವೀರೇಶ, ಚೇತನಕುಮಾರ ಅರೇಹಳ್ಳಿ, ಪಲ್ಲವಿ ಕಿರಣ, ಪಿಡಿಒ ವೃಂದದ ಸಂಗಮೇಶ, ಕಾರ್ಯದರ್ಶಿ ಗ್ರೇಡ್‌-1 ಸಂಘದ ಎನ್.ಆರ್. ರಂಗಸ್ವಾಮಿ, ಗ್ರೇಡ್‌-2 ವೃಂದದ ಸಿದ್ದನಗೌಡ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಸಂಘದ ತಿಪ್ಪೇಸ್ವಾಮಿ ದಾವಣಗೆರೆ, ಗ್ರಾಪಂ ನೌಕರರ ಸಂಘ ಕರ ವಸೂಲಿಗಾರರ ಶ್ರೀನಿವಾಸಾಚಾರಿ, ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ ಸಂಘದ ಕೆ.ಎಸ್.ಸಿದ್ದೇಶ, ಗ್ರಾಪಂ ಜವಾನ ವೃಂದದ ಪ್ರತಿನಿಧಿ ಕಾಂತೇಶ, ನೀರಗಂಟಿ ವೃಂದದ ಕಲ್ಲಯ್ಯ, ಸ್ವಚ್ಛತಾಗಾರರ ವೃಂದದ ಪ್ರತಿನಿಧಿ ಮಂಜುನಾಥ, ಸಾವಿರಾರು ಅಧಿಕಾರಿ, ನೌಕರರು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇದ್ದರು.

- - -

* ಬೇಡಿಕೆಗಳೇನೇನು? - ಪಿಡಿಒಗಳ ವರ್ಗಾವಣೆ ನಿಯಮ, ಜೇಷ್ಠತಾ ಪಟ್ಟಿ ಅಂತಿಮಗೊಳಿಸಬೇಕು

- ಅವೈಜ್ಞಾನಿಕ ಗುರಿ ನೀಡುವುದನ್ನು ಕೈಬಿಟ್ಟು, ಗ್ರಾಪಂಗಳಿಗೆ ಅಗತ್ಯ ಸಿಬ್ಬಂದಿ ನೇಮಿಸಬೇಕು

- ಕುಂದುಕೊರತೆ ಪ್ರಾಧಿಕಾರ ಪೊಲೀಸ್ ಇಲಾಖೆ ಮಾದರಿಯಲ್ಲಿ ಸದೃಢಗೊಳಿಸಬೇಕು

- ಪಿಡಿಒಗಳನ್ನು ಗೆಜೆಟೆಡ್‌ ಗ್ರೂಪ್ ಬಿ ದರ್ಜೆಗೆ ಉನ್ನತೀಕರಿಸಬೇಕು

- ಗ್ರೇಡ್-1, ಗ್ರೇಡ್-2, ಪಿಡಿಒ ಹುದ್ದೆಗಳಿಗೆ ಪದೋನ್ನತಿ ನೀಡಬೇಕು

- ಗ್ರೇಡ್‌-1 ಗ್ರಾಮ ಪಂಚಾಯಿತಿಗಳ ಸಂಖ್ಯೆಯನ್ನು ಹೆಚ್ಚಿಸಲು, ಗ್ರಾಪಂಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು

- ದ್ಪಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಪ್ರಥಮ ದರ್ಜೆ ಲೆಕ್ಕ ಸಹಾಯಕರಾಗಿ ಗ್ರೇಡ್-1 ಗ್ರಾಪಂಗಳಿಗೆ ಮುಂಬಡ್ತಿ ನೀಡಬೇಕು

- ತಾಪಂ, ಜಿಪಂಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಲೆಕ್ಕ ಸಹಾಯಕರ ಹುದ್ದೆಗೆ ಬಡ್ತಿಗೆ ಪರಿಗಣಿಸಬೇಕು

- ಗ್ರಾಪಂ ನೌಕರರಿಗೆ ಕಾಲಕಾಲಕ್ಕೆ ಪದೋನ್ನತಿ ನೀಡಬೇಕು

- ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್ಚುವರಿ ಡೇಟಾ ಎಂಟ್ರಿ ಆಪರೇಟರ್ ಹಾಗೂ ಕರ ವಸೂಲಿಗಾರರಿಗೆ ಒಂದೇ ಬಾರಿಗೆ ಅನುಮೋದನೆ ನೀಡಬೇಕು

- ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಕೆಡಿಪಿ ಸಭೆಗಳನ್ನು ಶಾಸನಬದ್ಧಗೊಳಿಸಬೇಕು

- ರಾಜ್ಯ ಶಿಷ್ಟಾಚಾರದ ವ್ಯಾಪ್ತಿಗೆ ಗ್ರಾಪಂ ಸದಸ್ಯರನ್ನು ತರಬೇಕು

- ಗೌರವಧನ, ಪಿಂಚಣಿ, ಉಚಿತ ಬಸ್‌ ಪಾಸ್, ಆರೋಗ್ಯ ವಿಮೆ ಜಾರಿಗೊಳಿಸಬೇಕು

- ಪಂಚಾಯತ್‌ರಾಜ್ ಸಂಸ್ಥೆಗಳಿಗೆ ಪ್ರತ್ಯೇಕ ಲಾಂಛನ ಸೃಜಿಸಿ, ನೀಡಬೇಕು

- - -

-9ಕೆಡಿವಿಡಿ6, 7:

ದಾವಣಗೆರೆ ಜಿಪಂ ಕಚೇರಿ ಎದುರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಎಲ್ಲ ವೃಂದ ಸಂಘಗಳು ಹಾಗೂ ಗ್ರಾಪಂ ಸದಸ್ಯರ ಒಕ್ಕೂಟ ನೇತೃತ್ವದ ಅನಿರ್ಧಿಷ್ಟಾವಧಿ ಮುಷ್ಕರ 5ನೇ ದಿನವಾದ ಬುಧವಾರವೂ ನಡೆಯಿತು.