ಅಂತರ್ಜಲ ಕ್ಷೀಣ ಹಿನ್ನೆಲೆ ನೀರು ಪುನರ್‌ ಬಳಕೆ ಅಗತ್ಯ: ಡಾ.ವಿನೋದ್ ಕೆ.ಪಾಲ್

KannadaprabhaNewsNetwork |  
Published : Nov 07, 2025, 04:15 AM IST
Water 7 | Kannada Prabha

ಸಾರಾಂಶ

ದೇಶದಲ್ಲಿ ನೀರಿನ ಲಭ್ಯತೆ ಕಡಿಮೆಯಾಗುತ್ತಿದ್ದು, 2030ರ ವೇಳೆಗೆ ಶೇ.50 ರಷ್ಟು ಹಾಗೂ 2045ರ ವೇಳೆಗೆ ಶೇ.100 ರಷ್ಟು ನೀರಿನ ಪುನರ್‌ ಬಳಕೆ ಕಡೆಗೆ ಹೆಜ್ಜೆ ಇಡಬೇಕು ಎಂದು ನೀತಿ ಆಯೋಗದ ಸದಸ್ಯ ಡಾ.ವಿನೋದ್ ಕೆ.ಪಾಲ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೇಶದಲ್ಲಿ ನೀರಿನ ಲಭ್ಯತೆ ಕಡಿಮೆಯಾಗುತ್ತಿದ್ದು, 2030ರ ವೇಳೆಗೆ ಶೇ.50 ರಷ್ಟು ಹಾಗೂ 2045ರ ವೇಳೆಗೆ ಶೇ.100 ರಷ್ಟು ನೀರಿನ ಪುನರ್‌ ಬಳಕೆ ಕಡೆಗೆ ಹೆಜ್ಜೆ ಇಡಬೇಕು ಎಂದು ನೀತಿ ಆಯೋಗದ ಸದಸ್ಯ ಡಾ.ವಿನೋದ್ ಕೆ.ಪಾಲ್ ಹೇಳಿದರು.

ರಾಜ್ಯ ಸರ್ಕಾರ ಮತ್ತು ಬೆಂಗಳೂರು ಜಲಮಂಡಳಿಯ ಸಹಯೋಗದಲ್ಲಿ ನೀತಿ ಆಯೋಗ ಆಯೋಜಿಸಿದ್ದ ಭಾರತದಲ್ಲಿ ಸಂಸ್ಕರಿಸಿದ ನೀರಿನ ಪುನರ್‌ ಬಳಕೆ ಕುರಿತ ಎರಡು ದಿನದ ಕಾರ್ಯಾಗಾರಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ದೇಶದ 11 ರಾಜ್ಯದಲ್ಲಿ ಸಂಸ್ಕರಿಸಿದ ನೀರಿನ ಪುನರ್‌ ಬಳಕೆಗೆ ನೀತಿ ಇದೆ. ಸಂಸ್ಕರಿಸಿದ ನೀರಿನ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತ ಪಡಿಸಲು ಏಕೀಕೃತ ರಾಷ್ಟ್ರೀಯ ಮಾನದಂಡ ರೂಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಅಂತರ್ಜಲ ಮಟ್ಟ ಕುಸಿಯುತ್ತಿದೆ. ನದಿಗಳಲ್ಲೂ ನೀರಿನ ಹರಿವು ಕಡಿಮೆಯಾಗುತ್ತಿದೆ. ಗಂಗಾ ನದಿಯನ್ನು ಪುನಶ್ಚೇತನ ನಡೆಸುವ ಕಾರ್ಯ ಪ್ರಗತಿಯಲ್ಲಿದ್ದು, 2045ರ ವೇಳೆಗೆ ಪೂರ್ಣಗೊಳ್ಳಲಿದೆ. ಕೃಷಿ ಕೆಲಸಕ್ಕೆ ಸಂಸ್ಕರಿಸಿದ ನೀರು ಬಳಸಲು ಉತ್ತೇಜನ ನೀಡಬೇಕು ಎಂದು ಹೇಳಿದರು.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಪರ ಕಾರ್ಯದರ್ಶಿ ಡಿ. ತಾರಾ ಮಾತನಾಡಿ, ಬೆಂಗಳೂರು ಜಲಮಂಡಳಿಯು ಪ್ರಸ್ತುತ 190 ಕೋಟಿ ರು. ನೀರಿನ ಆದಾಯವನ್ನು ಹೊಂದಿದ್ದು, ಪುನರ್‌ಬಳಕೆ, ಮೀಟರಿಂಗ್ ಮತ್ತು ವ್ಯವಸ್ಥಿತ ಮರುಬಳಕೆಯಿಂದ ಈ ಆದಾಯವನ್ನು ಒಂದು ಸಾವಿರ ಕೋಟಿ ರು.ಗೆ ಏರಿಸಬಹುದಾಗಿದೆ. ಜಲಮಂಡಳಿಯು ನೀರಿನ ಲೆಕ್ಕಪತ್ರ ಮತ್ತು ಪುನರ್‌ಬಳಕೆಯನ್ನು ನಿರ್ವಹಿಸಲು ವೃತ್ತಿಪರ ವಿಭಾಗ ಸ್ಥಾಪಿಸುವ ಅಗತ್ಯವಿದೆ. ಮಹಿಳಾ ಸ್ವಸಹಾಯ ಗುಂಪುಗಳ ಮೂಲಕ ನೀರಿನ ಬಳಕೆ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ಮಾತನಾಡಿ, ಬೆಂಗಳೂರು ನಗರದ 110 ಕೆರೆಗಳ ಪುನರುಜ್ಜೀವನಗೊಳಿಸಲಾಗಿದೆ. 2028ರೊಳಗೆ ಶೇ.100 ಸಂಸ್ಕರಿಸಿದ ಬಳಕೆ ಮತ್ತು ಮಳೆನೀರು ಸಂಗ್ರಹಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು. ಅಲ್ಲದೆ, ಸಂಸ್ಕರಿಸಿದ ನೀರಿನ ಪುನರ್‌ಬಳಕೆ ಸಂಬಂಧಿತ ನಿಯಮ ಜಾರಿಗೊಳಿಸಲಾಗುವುದು ಎಂದರು.

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮಾತನಾಡಿ, ಬೆಂಗಳೂರಿಗೆ ಪ್ರತಿದಿನ 2,225 ಎಂಎಲ್‌ಡಿ ನೀರು ಪೂರೈಸುತ್ತಿದೆ. ಜತೆಗೆ ಪ್ರತಿ ನಿತ್ಯ 34 ಒಳಚರಂಡಿ ಸಂಸ್ಕರಿಸುವ ಘಟಕ (ಎಸ್‌ಟಿಪಿ)ದ ಮೂಲಕ 1,350 ಎಂಎಲ್‌ಡಿ ಸಂಸ್ಕರಿಸಲಾಗುತ್ತಿದೆ. ಬಾಕಿ ಇರುವ ತ್ಯಾಜ್ಯ ನೀರನ್ನು ಸಂಸ್ಕರಿಸಲು 12 ಹೊಸ ಎಸ್‌ಟಿಪಿ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ನೀರಿನ ಪುನರ್‌ಬಳಕೆ ಕುರಿತು ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಕಾರ್ಯಾಗಾರದಲ್ಲಿ ನೀರಿನ ಸಂಸ್ಕರಣೆ ಮತ್ತು ಬಳಕೆಯ ಕುರಿತು ನೂತನ ತಂತ್ರಜ್ಞಾನದ ಬಗ್ಗೆ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. ರಾಜ್ಯ ಮಟ್ಟದಲ್ಲಿರುವ ಉತ್ತಮ ಪ್ರಯೋಗಗಳು, ನೀರಿನ ಬಳಕೆಯ ತಂತ್ರಜ್ಞಾನ ಮತ್ತು ಸಹಯೋಗ, ವ್ಯವಹಾರದ ಮಾದರಿ, ಖಾಸಗಿ ಸಹಭಾಗಿತ್ವ, ಅಂತಾರಾಷ್ಟ್ರೀಯ ಅನುಭವಗಳ ಬಗ್ಗೆ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ ಪ್ರಸಾದ್ ಮನೋಹರ್ ಸೇರಿದಂತೆ ತಜ್ಞರು ತಮ್ಮ ಅನುಭವ ಮತ್ತು ಸಲಹೆ ಹಂಚಿಕೊಂಡರು.

PREV

Recommended Stories

ಕಸದಿಂದ ಲಕ್ಷ ಮನೆಗೆ ವಿದ್ಯುತ್ ಪೂರೈಕೆ: ಕರಿಗೌಡ
‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ