ಮಾಜಿ ಶಾಸಕ ವಾಸು, ಕೆ. ಶಿವರಾಂಗೆ ನುಡಿನಮನ

KannadaprabhaNewsNetwork | Published : Mar 18, 2024 1:48 AM

ಶಿವರಾಂ ಅವರು ಅತ್ಯುತ್ತಮ ಅಧಿಕಾರಿಯಾಗಿದ್ದರು. ಆದರೆ ರಾಜಕೀಯದಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ. ವಾಸು ಅವರು ಮೈಸೂರು ನಗರದ ಇತಿಹಾಸದ ಬಗ್ಗೆ ಅಪಾರವಾಗಿ ತಿಳಿದುಕೊಂಡಿದ್ದರು. ಯಾವುದೇ ವಿಷಯವಾದರೂ ಅಧಿಕೃತವಾಗಿ ಮಾತನಾಡಬಲ್ಲವರಾಗಿದ್ದರು. ಭೂಕಬಳಿಕೆ ಆಗುತ್ತಿದ್ದ ಪೀಪಲ್ಸ್ ಪಾರ್ಕಿನ ಜಾಗ ಉಳಿಸಿ, ಅಲ್ಲಿ ಅತ್ಯುತ್ತಮ ಗ್ರಂಥಾಲಯ ಕಟ್ಟಡ ಬರಲು ಕಾರಣಕರ್ತರಾದವರು

ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆಯಿಂದ ಕಾರ್ಯಕ್ರಮ

----

ಕನ್ನಡಪ್ರಭ ವಾರ್ತೆ ಮೈಸೂರು

ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ವಾಸು ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಂ ಅವರಿಗೆ ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆಯ ವತಿಯಿಂದ ಶನಿವಾರ ನುಡಿನಮನ ಸಲ್ಲಿಸಲಾಯಿತು.

ವಿವಿ ಸಂಜೆ ಕಾಲೇಜು ಎದುರು ನಡೆದ ಕಾರ್ಯಕ್ರಮದಲ್ಲಿ ವಾಸು ಹಾಗೂ ಕೆ. ಶಿವರಾಂ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು.

ಪ್ರಾಚ್ಯ ವಿದ್ಯಾ ಸಂಶೋಧನಾಲಯ ಹಾಗೂ ಗಾಂಧಿ ಭವನದ ನಿವೃತ್ತ ನಿರ್ದೇಶಕ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ಶಿವರಾಂ ಅವರು ಐಎಎಸ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆದು ಪಾಸಾದ ಮೊದಲಿಗರಾದರೆ, ವಾಸು ಅವರು ಮೇಯರ್ ಹಾಗೂ ಶಾಸಕರಾಗಿ ಮೈಸೂರು ನಗರದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಶಿವರಾಂ ಅವರು ಎಸಿ ರೂಂನಲ್ಲಿ ಕೂರದೇ ನೇರವಾಗಿ ಜನರ ಅಹವಾಲು ಸ್ವೀಕರಿಸಿ, ನಂತರ ಛೆಂಬರ್‌ಗೆ ಹೋಗುತ್ತಿದ್ದರು. ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ವಾಸು ಅವರು ಶಿಕ್ಷಣ ತಜ್ಞರಾಗಿದ್ದರು. ವಾಸು ಹಾಗೂ ಅವರ ಪತ್ನಿ ಲಲಿತಾ ಅವರು ಮನೆಗೆ ಬಂದವರಿಗೆಲ್ಲಾ ಆತಿಥ್ಯ ನೀಡುವುದರಲ್ಲಿ ಪ್ರಸಿದ್ಧರಾಗಿದ್ದರು. ವಾಸು ಅವರು ಸಾಹಿತ್ಯಕ ಕಾರ್ಯಕ್ರಮಗಳಿಗೆ ಅಪಾರ ಬೆಂಬಲ ನೀಡುತ್ತಿದ್ದರು ಎಂದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿ, ಶಿವರಾಂ ಅವರು ಅತ್ಯುತ್ತಮ ಅಧಿಕಾರಿಯಾಗಿದ್ದರು. ಆದರೆ ರಾಜಕೀಯದಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ. ವಾಸು ಅವರು ಮೈಸೂರು ನಗರದ ಇತಿಹಾಸದ ಬಗ್ಗೆ ಅಪಾರವಾಗಿ ತಿಳಿದುಕೊಂಡಿದ್ದರು. ಯಾವುದೇ ವಿಷಯವಾದರೂ ಅಧಿಕೃತವಾಗಿ ಮಾತನಾಡಬಲ್ಲವರಾಗಿದ್ದರು. ಭೂಕಬಳಿಕೆ ಆಗುತ್ತಿದ್ದ ಪೀಪಲ್ಸ್ ಪಾರ್ಕಿನ ಜಾಗ ಉಳಿಸಿ, ಅಲ್ಲಿ ಅತ್ಯುತ್ತಮ ಗ್ರಂಥಾಲಯ ಕಟ್ಟಡ ಬರಲು ಕಾರಣಕರ್ತರಾದವರು ಎಂದರು.

ಮೈವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ. ನಿಂಗರಾಜ್ ಗೌಡ ಮಾತನಾಡಿ, ವಾಸು ಅವರು ಶಿಕ್ಷಣತಜ್ಞರಾಗಿದ್ದರು. ಅವರಿಗೆ ಹೆಚ್ಚಿನ ಅಧಿಕಾರ ಸಿಗಬೇಕಿತ್ತು. ಆದರೆ ಕೇವಲ ಒಂದು ಬಾರಿ ಮೇಯರ್, ಒಂದು ಬಾರಿ ಮಾತ್ರ ಶಾಸಕರಾಗಲು ಸಾಧ್ಯವಾಯಿತು. ಅಷ್ಟು ಅವಧಿಯಲ್ಲಿಯೇ ಮಹಾರಾಣಿ ಕಾಲೇಜು ಕಟ್ಟಡ, ಜಯದೇವ ಹೃದ್ರೋಗ ಆಸ್ಪತ್ರೆ ಸೇರಿದಂತೆ ಸದಾ ನೆನಪಿನಲ್ಲಿಡುವ ಕೆಲಸ ಮಾಡಿದ್ದಾರೆ ಎಂದರು.

ವಿವಿ ಸಂಜೆ ಕಾಲೇಜು ಪ್ರಾಂಶುಪಾಲ ಪ್ರೊ.ಎಸ್. ಮಹದೇವಮೂರ್ತಿ ಮಾತನಾಡಿ, ಕೆ. ಶಿವರಾಂ ಅವರಿಗೆ ಬಡವರ ಬಗ್ಗೆ ಅಪಾರ ಕಾಳಜಿ ಇತ್ತು. ಹೋದ ಕಡೆಯಲ್ಲಾ ಬಡವರ ಗುಡಿಸಲುಗಳನ್ನು ತೆರವು ಮಾಡಿಸಿ, ಮನೆ ಕಟ್ಟಿಕೊಳ್ಳಲು ನೆರವಾಗುತ್ತಿದ್ದರು. ಅವರು ನಟಿಸಿದ ಬಾನಲ್ಲೆ ಮಧುಚಂದ್ರಕೆ ಚಿತ್ರ ತುಂಬಾ ಪ್ರಸಿದ್ಧಿ ಪಡೆದಿತ್ತು. ವಾಸು ಅವರು ಎಲ್ಲಿಯೇ ಸಿಕ್ಕಿದರೂ ಅತ್ಯಂತ ಪ್ರೀತಿಯಿಂದ ಮಾತನಾಡಿಸುತ್ತಿದ್ದರು ಎಂದರು.

ಮಾನಸ ಗಂಗೋತ್ರಿ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕಿ ಡಾ.ಎಚ್.ಪಿ. ಜ್ಯೋತಿ ಮಾತನಾಡಿ, ವಾಸು ಅವರು ಆತಿಥ್ಯಕ್ಕೆ ಹೆಸರಾದವರು. ನಾನು ಹಾಗೂ ಪ್ರೊ.ಸಪ್ನಾ ಅವರ ಮನೆಗೆ ಹೋದಾಗ ಸ್ವತಃ ಉಪಾಹಾರ ಬಡಿಸಿದ್ದರು. ಅಂತಹ ಹೃದಯವೈಶ್ಯಾಲತೆ ಅವರಲ್ಲಿತ್ತು. ಶಿವರಾಂ ಅವರ ಕೆಲಸಗಳ ಬಗ್ಗೆ ಕೇಳಿತಿಳಿದುಕೊಂಡಿದ್ದೆ. ಕನ್ನಡದಲ್ಲೂ ಬರೆದು ಐಎಎಸ್ ಪಾಸು ಮಾಡಬಹುದು ಎಂಬುದಕ್ಕೆ ಅವರೇ ಸ್ಫೂರ್ತಿ ಎಂದರು.

ವಿವಿ ಸಂಜೆ ಕಾಲೇಜು ಪ್ರಾಧ್ಯಾಪಕಿ ಡಾ.ಕೆ. ಸೌಭಾಗ್ಯವತಿ ಮಾತನಾಡಿ, ನಗರದ ಅಶೋಕಪುರಂನ ಎಲ್ಲಾ 13 ಕ್ರಾಸುಗಳಿಗೂ ಭೇಟಿ ನೀಡಿ, ಗುಡಿಸಲು ಬದಲು ಮನೆಗಳನ್ನು ಕಟ್ಟಿಕೊಳ್ಳಲು ಸಹಾಯ ಮಾಡಿದ್ದರು. ಈಗಲೂ ಅದನ್ನು ಊರಿನವರು ಸ್ಮರಿಸಿಕೊಳ್ಳುತ್ತಾರೆ ಎಂದರು.

ಸಿಂಡಿಕೇಟ್ ಸದಸ್ಯ ಮಹದೇಶ್ ಶಿವರಾಂ ಅವರು ಆಯುಕ್ತರಾಗಿ, ವಾಸು ಅವರು ಮೇಯರ್ ಹಾಗೂ ಶಾಸಕರಾಗಿ ಅತ್ಯುತ್ತಮ ಕೆಲಸ ಮಾಡಿದರು. ವಾಸು ಅವರಿಗೆ ರಾಜಕೀಯವಾಗಿ ಇನ್ನೂ ಹೆಚ್ಚಿನ ಅವಕಾಶಗಳು ಸಿಗಬೇಕಿತ್ತು ಎಂದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿದರು. ಜಿಲ್ಲಾ ಕಸಾಪ ಕೋಶಾಧ್ಯಕ್ಷ ಜಿ. ಪ್ರಕಾಶ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಸ್. ಸಪ್ನಾ, ಸಿಂಡಿಕೇಟ್ ಸದಸ್ಯ ಸಿ. ನಾಗರಾಜು, ವೇದಿಕೆಯ ಅಧ್ಯಕ್ಷ ಆರ್. ವಾಸು, ಪ್ರೊ.ಜಗದೀಶ್, ಡಾ.ನಿಂಗರಾಜು, ಪ್ರೊ.ಶೇಖರ್ ನಾಯಕ್, ಪದಾಧಿಕಾರಿಗಳಾದ ಭಾಸ್ಕರ್, ವಿನೋದ್, ಯೋಗೇಶ್, ವಿವೇಕ್, ಗಣೇಶ್ ಮೊದಲಾದವರು ಇದ್ದರು.