ಮತಗಳ್ಳತನ: ಚು.ಆಯುಕ್ತರ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

KannadaprabhaNewsNetwork |  
Published : Nov 06, 2025, 02:00 AM ISTUpdated : Nov 06, 2025, 11:35 AM IST
CM siddaramaiah

ಸಾರಾಂಶ

ಹರ್ಯಾಣ ಫಲಿತಾಂಶವನ್ನು ಹೇಗೆ ಬುಡಮೇಲು ಮಾಡಲಾಗಿದೆ ಎಂಬುದನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರು ದಾಖಲೆ ಸಹಿತ ಜನರ ಮುಂದಿಟ್ಟಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರು ಈ ಬಾರಿಯಾದರೂ ತನ್ನ ‘ಮಾಲೀಕರ’ ರಕ್ಷಣೆಯ ದುಸ್ಸಾಹಕ್ಕೆ ಕೈ ಹಾಕದೆ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ -  ಸಿದ್ದರಾಮಯ್ಯ

 ಬೆಂಗಳೂರು :  ಹರ್ಯಾಣ ವಿಧಾನಸಭೆ ಫಲಿತಾಂಶವನ್ನು ಹೇಗೆ ಬುಡಮೇಲು ಮಾಡಲಾಗಿದೆ ಎಂಬುದನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರು ದಾಖಲೆ ಸಹಿತ ಜನರ ಮುಂದಿಟ್ಟಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರು ಈ ಬಾರಿಯಾದರೂ ತನ್ನ ‘ಮಾಲೀಕರ’ ರಕ್ಷಣೆಯ ದುಸ್ಸಾಹಕ್ಕೆ ಕೈ ಹಾಕದೆ ಮಾಡಿದ ಪಾಪಗಳಿಗೆ ಕಾನೂನು ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣವಾಗಿ ಹೇಳಿದ್ದಾರೆ.

ವ್ಯವಸ್ಥಿತ ಅಕ್ರಮಗಳ ಕರಾಳ‌ ಮುಖವನ್ನು ರಾಹುಲ್‌ಗಾಂಧಿ ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ

ದೇಶದ ಚುನಾವಣಾ ವ್ಯವಸ್ಥೆಯಲ್ಲಿ ನಡೆಯುತ್ತಿರುವ ವ್ಯವಸ್ಥಿತ ಅಕ್ರಮಗಳ ಕರಾಳ‌ ಮುಖವನ್ನು ರಾಹುಲ್‌ಗಾಂಧಿ ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ. ಮೊದಲು ಕರ್ನಾಟಕದ ಮಹದೇವಪುರ, ನಂತರ ಆಳಂದ ವಿಧಾನಸಭಾ ಮತಗಳ್ಳತನ ಬಯಲು ಮಾಡಿದ್ದರು. ಬುಧವಾರ ಹರ್ಯಾಣದ ಇಡೀ ಚುನಾವಣಾ ಫಲಿತಾಂಶವನ್ನೇ ಹೇಗೆ ಬುಡಮೇಲು ಮಾಡಲಾಗಿದೆ ಎಂಬುದನ್ನು ದಾಖಲೆ ಸಹಿತ ಜನರ ಮುಂದಿಟ್ಟಿದ್ದಾರೆ ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

ಪ್ರಜಾತಂತ್ರದ ರಕ್ಷಣೆ ಮಾಡಬೇಕಿರುವುದು ಚುನಾವಣಾ ಆಯೋಗ

ಪಾರದರ್ಶಕ, ನಿಷ್ಪಕ್ಷಪಾತ ಚುನಾವಣೆ ಮೂಲಕ ಪ್ರಜಾತಂತ್ರದ ರಕ್ಷಣೆ ಮಾಡಬೇಕಿರುವುದು ಚುನಾವಣಾ ಆಯೋಗ. ಅಂತಹ ಆಯೋಗವೇ ಕೇಂದ್ರ ಸರ್ಕಾರದ ಜೊತೆಗೂಡಿ ಹೇಗೆ ಪ್ರಜಾತಂತ್ರ ವ್ಯವಸ್ಥೆಯ ಕತ್ತು ಹಿಸುಕುತ್ತಿದೆ ಎಂಬುದಕ್ಕೆ ರಾಹುಲ್‌ಗಾಂಧಿ ಬಿಡುಗಡೆ ಮಾಡಿರುವ ದಾಖಲೆಗಳೇ ಸಾಕ್ಷಿ ಎಂದು ಕಿಡಿಕಾರಿದ್ದಾರೆ.

ಬ್ರೆಜಿಲ್‌ ರೂಪದರ್ಶಿ ಹೆಸರಲ್ಲಿ ಮತಗಳ್ಳತನ:

ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಭಾರತೀಯರ ಹೆಸರುಗಳನ್ನಷ್ಟೇ ಬಳಸಿ ನಕಲಿ ಮತದಾರರನ್ನು ಸೃಷ್ಟಿಸುತ್ತಿದ್ದ ಬಿಜೆಪಿ ಮತ್ತು ಚುನಾವಣಾ ಆಯೋಗ, ಹರ್ಯಾಣದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಬ್ರೆಜಿಲ್‌ನ ರೂಪದರ್ಶಿ ಗುರುತನ್ನು ಕೂಡ ತನ್ನ ಮತಗಳ್ಳತನಕ್ಕೆ ಬಳಕೆ ಮಾಡಿಕೊಂಡಿದೆ. ಇದು ಅವರ ನಿರ್ಲಜ್ಜತನಕ್ಕೆ ಸಾಕ್ಷಿ. ಈ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮಾನ ಹೋಗುವುದು ಗ್ಯಾರಂಟಿ ಎಂದು ಸಿದ್ದರಾಮಯ್ಯ ದೂರಿದ್ದಾರೆ.

5 ಲಕ್ಷಕ್ಕೂ ಅಧಿಕ ನಕಲಿ ಮತದಾರರು, ತಿರುಚಿದ ಅಥವಾ ಗುರುತಿಸಲು ಸಾಧ್ಯವಾಗದಂತಹ ಫೋಟೊ ಬಳಸಿ ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ಕಳವು ಮಾಡಲಾಗಿದೆ. ಹೀಗೆ ಒಟ್ಟು ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ 25 ಲಕ್ಷಕ್ಕೂ ಅಧಿಕ ಮತಗಳ್ಳತನ ನಡೆದಿದೆ. ಅಂದರೆ ಹರ್ಯಾಣದಲ್ಲಿ ಮತ ಚಲಾಯಿಸಿದ ಪ್ರತಿ 8 ಜನರ ಪೈಕಿ‌ ಒಂದು ನಕಲಿ‌ ಮತ ಎನ್ನುವುದು ಸ್ಪಷ್ಟ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಚುನಾವಣಾ ಸಮೀಕ್ಷೆಗಳ ಭವಿಷ್ಯ ಸುಳ್ಳಾಗಿದ್ದು ಹೀಗೆ:

ದೇಶದ ಬಹುತೇಕ ಚುನಾವಣಾ ಸಮೀಕ್ಷೆಗಳು ಹರ್ಯಾಣದಲ್ಲಿ ಬಿಜೆಪಿ ಧೂಳಿಪಟವಾಗಲಿದೆ ಎನ್ನುವ ಭವಿಷ್ಯ ನುಡಿದಿದ್ದರೂ, ಆ ಪಕ್ಷ ಹೇಗೆ ಬಹುಮತ ಪಡೆದು ಸರ್ಕಾರ ರಚಿಸಿತು ಎನ್ನುವ ಅನುಮಾನಕ್ಕೆ ರಾಹುಲ್ ಗಾಂಧಿ ಅವರು ಉತ್ತರ ನೀಡಿದ್ದಾರೆ. ತಮ್ಮ ಮೇಲಿನ ಆರೋಪಗಳಿಗೆ ಹಾರಿಕೆ ಉತ್ತರ ನೀಡಿ ಪಲಾಯನ ಮಾಡುತ್ತಿದ್ದ, ಆರೋಪ ಮಾಡಿದವರನ್ನೇ ಪ್ರಮಾಣ ಮಾಡಿ ಎಂದು ಅಸಂಬದ್ಧವಾಗಿ ಮಾತನಾಡುತ್ತಿದ್ದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಈ ಬಾರಿಯಾದರೂ ‘ತನ್ನ ಮಾಲೀಕರ’ ರಕ್ಷಣೆಯ ದುಸ್ಸಾಹಸಕ್ಕೆ ಕೈಹಾಕದೆ ಸತ್ಯ ಒಪ್ಪಿಕೊಳ್ಳಲಿ. ಮಾಡಿದ ಪಾಪಗಳಿಗೆ ಕಾನೂನಿನ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

PREV
Read more Articles on

Recommended Stories

ಕಸದಿಂದ ಲಕ್ಷ ಮನೆಗೆ ವಿದ್ಯುತ್ ಪೂರೈಕೆ: ಕರಿಗೌಡ
‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ