ಕನ್ನಡಪ್ರಭ ವಾರ್ತೆ ಮಂಗಳೂರುರಾಜ್ಯದ ವಿವಿಗಳ ಸ್ಥಿತಿಗತಿಯನ್ನು ಸಮಗ್ರ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಸಂಪುಟ ಉಪಸಮಿತಿ ವರದಿ ಸಿದ್ಧಪಡಿಸುತ್ತಿದೆ. ಈ ವರದಿ ಅಧಾರದಲ್ಲಿ ಆರ್ಥಿಕ ಹಾಗೂ ಆಡಳಿತಾತ್ಮಕವಾಗಿ ದುಸ್ಥಿತಿಯಲ್ಲಿರುವ ವಿ.ವಿ.ಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ವಿವಿ ಸಹ ಕುಲಾಧಿಪತಿ ಹಾಗೂ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದ್ದಾರೆ.
ಕೊಣಾಜೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಆವರಣದ ಮಂಗಳ ಸಭಾಂಗಣದಲ್ಲಿ ಶನಿವಾರ ನಡೆದ 43ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್, ಪಿಎಚ್ಡಿ ಪದವೀಧರರು, ಸ್ನಾತಕೋತ್ತರ ಹಾಗೂ ಪದವಿ ತರಗತಿಗಳ ರ್ಯಾಂಕ್ ವಿಜೇತರಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿದ್ದು, ಸಮಗ್ರ ಅಧ್ಯಯನ ನಡೆಸಿ ವರದಿ ತಯಾರಿಸಲಾಗುತ್ತಿದೆ. ವರದಿಯನ್ನು ಇನ್ನಷ್ಟೇ ಮಂಡನೆ ಮಾಡಬೇಕಾಗಿದೆ. ವರದಿಯನ್ನು ಸಂಪುಟ ಸಭೆಯ ಮುಂದಿರಿಸಿ ಆಳವಾಗಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದವರು ಹೇಳಿದರು.
ವಿವಿಗಳ ಆರ್ಥಿಕ ದುಸ್ಥಿತಿ: ಹಿಂದೆ ವೈದ್ಯಕೀಯ ಹಾಗೂ ತಾಂತ್ರಿಕ ಕಾಲೇಜುಗಳು ಕೂಡಾ ವಿವಿಗಳ ವ್ಯಾಪ್ತಿಗೊಳಪಡುತ್ತಿದ್ದವು. ಇದರಿಂದಾಗಿ ವಿವಿಗೆ ಸಾಕಷ್ಟು ಆದಾಯವೂ ಕ್ರೋಢೀಕರಣವಾಗುತ್ತಿತ್ತು. ಆದರೆ 25 ವರ್ಷಗಳಿಂದೀಚೆಗೆ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ, ಮುಕ್ತ ವಿವಿಗಳು ಆರಂಭಗೊಂಡಂತೆಯೇ ವಿವಿಗಳ ಆರ್ಥಿಕ ಪರಿಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರತೊಡಗಿತು. ಅಲ್ಲದೆ ವಿದೇಶಿ ವಿವಿಗಳ ಅನುಕರಣೆಯಿಂದಾಗಿ ರಾಜ್ಯದ ಹಲವು ಪ್ರತಿಷ್ಠಿತ ವಿವಿಗಳು ಇಂದು ತೀರಾ ದುಸ್ಥಿತಿಗೆ ತಲುಪಿವೆ. ವಿದೇಶಿ ವಿವಿಗಳ ಸೌಲಭ್ಯಗಳನ್ನು ನಮ್ಮಲ್ಲಿಯೂ ಅಳವಡಿಸುವಲ್ಲಿ ವಿಫಲತೆಯನ್ನು ಎದುರಿಸುತ್ತಿದ್ದೇವೆ ಎಂದರು.ಹಂತಗಳಲ್ಲಿ ನೇಮಕಾತಿ:
ರಾಜ್ಯದಲ್ಲಿ ಒಟ್ಟು 2,800 ಬೋಧಕ ಹುದ್ದೆಗಳು ಖಾಲಿ ಇದ್ದು, ಹುದ್ದೆ ಭರ್ತಿಗೆ ಮುಖ್ಯಮಂತ್ರಿಗೆ ಈಗಾಗಲೇ ಮನವಿ ಮಾಡಲಾಗಿದೆ. ಹಲವು ವಿವಿಗಳಲ್ಲಿ ಅನಗತ್ಯವಾಗಿ ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ಹಣಕಾಸು ಇಲಾಖೆಯ ಅನುಮತಿ ಹೊರತಾಗಿ ನೇಮಕ ಮಾಡಿರುವ ಬಗ್ಗೆ ಅಭಿಪ್ರಾಯ ವ್ಯಕ್ತವಾಗಿದೆ. ಹಾಗಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಪರಿನಿಯಮಗಳ ಬದಲಾವಣೆ ತರುವ ಪ್ರಕ್ರಿಯೆಯ ನಡೆಯಬೇಕಿದೆ ಎಂದರು.ಮಂಗಳೂರು ವಿವಿಗೆ ನೆರವು:
ಮಂಗಳೂರು ವಿವಿಗೆ ಈಗಾಗಲೇ ನಿವೃತ್ತ ನೌಕರರ ಪಿಂಚಣಿಗಾಗಿ 11.30 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಹಲವು ಯೋಜನೆಗಳಿಗಾಗಿ ವಿವಿಯಲ್ಲಿ ಕೋಟ್ಯಂತರ ಮೊತ್ತ ಬಂಡವಾಳ ಹಾಕಲಾಗಿದೆ. ಇವುಗಳಿಗೆಲ್ಲ ನೆರವಿನ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ನಡೆಯಲಿದೆ ಎಂದರು. ವೈವಿಧ್ಯತೆ ಪಸರಿಸಿ: ಘಟಿಕೋತ್ಸವ ಭಾಷಣ ಮಾಡಿದ ಭಾರತೀಯ ವಿಶ್ವವಿದ್ಯಾಲಯಗಳ ಸಂಘ ಮತ್ತು ಮುಂಬೈ ಸೋಮಿಯಾ ವಿದ್ಯಾವಿಹಾರ್ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವಿ.ಎನ್. ರಾಜಶೇಖರನ್ ಪಿಳ್ಳೈ ಮಾತನಾಡಿ, ವಿಶ್ವವಿದ್ಯಾನಿಲಯ ಪ್ರಪಂಚದ ಸೂಕ್ಷ್ಮರೂಪ. ವಿಭಿನ್ನ ಸಂಸ್ಕೃತಿ, ಆಚಾರ, ವಿಚಾರಗಳಿಂದ ಕೂಡಿ ಕಲಿಯುವ ಮತ್ತು ಬೆಳೆಯುವ ಸ್ಥಳ ಇದಾಗಿದೆ. ಈ ವೈವಿಧ್ಯತೆಯು ನಮ್ಮ ಶಕ್ತಿಯಾಗಿದ್ದು, ಅದನ್ನು ವಿವಿಯ ತರಗತಿಯಿಂದ ಹೊರಗೆ ಕೊಂಡೊಯ್ಯುವಲ್ಲಿಯೂ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ಹೇಳಿದರು.ವಿಶ್ವವಿದ್ಯಾನಿಲಯದ 64 (ಕಲಾ ನಿಕಾಯ-12, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ-38, ವಾಣಿಜ್ಯ ನಿಕಾಯ - 11, ಶಿಕ್ಷಣ ನಿಕಾಯ - 03) ಸಂಶೋಧನಾ ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ (ಪಿಎಚ್ಡಿ) ಪ್ರದಾನ ಮಾಡಲಾಯಿತು. 54 ಚಿನ್ನದ ಪದಕ ಮತ್ತು 56 ನಗದು ಬಹುಮಾನ, ವಿವಿಧ ಸ್ನಾತಕ/ಸ್ನಾತಕೋತ್ತರ ವಿಭಾಗದ ವಿವಿಧ ಪದವಿಗಳ ಒಟ್ಟು 127 ರ್ಯಾಂಕ್ ವಿಜೇತರಿಗೆ ಪ್ರಮಾಣ ಪತ್ರ ನೀಡಲಾಯಿತು.ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ, ಆಡಳಿತ ಕುಲಸಚಿವ ಕೆ.ರಾಜು ಮೊಗವೀರ, ವಿವಿಧ ನಿಕಾಯಗಳ ಮುಖ್ಯಸ್ಥರು ಇದ್ದರು.