ಕನ್ನಡಪ್ರಭ ವಾರ್ತೆ ದಾವಣಗೆರೆ
ಪದವಿ ಪೂರ್ವ, ಪದವಿ ಕಾಲೇಜುಗಳು, ಕ್ಯಾಂಪಸ್ನಲ್ಲಿ ಅನಾವಶ್ಯಕವಾಗಿ ಹೊರಗಿನ ವ್ಯಕ್ತಿಗಳು ಪ್ರವೇಶಿಸದಂತೆ ಗಮನ ಹರಿಸುವ ಜೊತೆಗೆ ವಿದ್ಯಾರ್ಥಿಗಳ ನಡೆ, ನುಡಿಗಳು, ಅಭ್ಯಾಸಗಳ ಬಗ್ಗೆಯೂ ಕಾಲೇಜು ಪ್ರಾಚಾರ್ಯರು, ಬೋಧಕರು ನಿಗಾ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಕಾಲೇಜು ಪ್ರಾಚಾರ್ಯರಿಗೆ ಸೂಚಿಸಿದ್ದಾರೆ.ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಲ್ಲಾ ಕೇಂದ್ರದ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ಪ್ರಾಚಾರ್ಯರ ಸಭೆಯ ಅಧ್ಯಕ್ಷತೆ ವಹಿಸಿ ಕಾಲೇಜುಗಳ ಅಹವಾಲು ಆಲಿಸಿ ಮಾತನಾಡಿ, ನಗರ, ಜಿಲ್ಲೆಯ ಯಾವುದೇ ಕಾಲೇಜುಗಳಿಗೆ, ಕ್ಯಾಂಪಸ್ನಲ್ಲಿ ಹೊರಗಿನ ವ್ಯಕ್ತಿಗಳು ಪ್ರವೇಶಿದಂತೆ ಗಮನ ಹರಿಸಿ, ಈ ಬಗ್ಗೆ ಪ್ರಾಚಾರ್ಯರು ದಿಟ್ಟ ಕ್ರಮ ಕೈಗೊಳ್ಳಿ ಎಂದರು.
ಪೊಲೀಸ್ ಇಲಾಖೆಗೆ ಸಂಬಂಧಿಸಿ ತುರ್ತು ಸೇವೆಗಾಗಿ 112ಗೆ ಕರೆ ಮಾಡಿ. ಅಗತ್ಯವಿದ್ದರೆ ನೇರವಾಗಿ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ, ಸಂಪರ್ಕಿಸಿ. ನಗರದಲ್ಲಿ ತುರ್ತು ಸೇವೆಗಾಗಿ ದಾವಣಗೆರೆ ಸುರಕ್ಷಾ ಆ್ಯಪ್ ಜಾರಿಗೆ ತರಲಾಗಿದೆ. ಜಿಲ್ಲಾ ಕೇಂದ್ರದ ವ್ಯಾಪ್ತಿಯಲ್ಲಿ ಯಾವುದೇ ಆಪತ್ತಿನ ಸಮಯ ಹಾಗೂ ಇತರೆ ತುರ್ತು ಸೇವೆಗೆಈ ಆ್ಯಪ್ ಬಳಸಬಹುದು ಎಂದು ಹೇಳಿದರು.ವಿವಿಧ ಪಿಯು ಕಾಲೇಜುಗಳು, ಪದವಿ ಕಾಲೇಜುಗಳ ಪ್ರಾಚಾರ್ಯರು ತಮ್ಮ ತಮ್ಮ ಕಾಲೇಜುಗಳ ಸಮಸ್ಯೆಗಳ ಬಗ್ಗೆ ಎಸ್ಪಿ ಗಮನಕ್ಕೆ ತಂದರು. ಒಂದೊಂದಾಗಿ ಅಹವಾಲು ಆಲಿಸಿದ ಎಸ್ಪಿ ಉಮಾ ಪ್ರಶಾಂತ್ ನಿಮ್ಮ ಸಮಸ್ಯೆಗಳನ್ನು ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಕಾಲೇಜುಗಳ ಅವಧಿಯಲ್ಲಿ ವಿದ್ಯಾರ್ಥಿನಿಯರಿಗೆ ತೊಂದರೆಯಾಗದಂತೆ ಪೊಲೀಸ್ ಗಸ್ತು ವ್ಯವಸ್ಥೆ ಮಾಡುವ ಭರವಸೆ ನೀಡಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ ಸಂತೋಷ, ನಗರ ಡಿವೈಎಸ್ಪಿ ಮಲ್ಲೇಶ ದೊಡ್ಮನಿ ಸೇರಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು.