ಜಲಸಂರಕ್ಷಣೆ, ನಗರ ನೈರ್ಮಲ್ಯ ಜಾಗೃತಿ ಜಾಥಾ

KannadaprabhaNewsNetwork | Published : Jan 26, 2024 1:51 AM

ಎಪಿಎಂಸಿಯಿಂದ ಪ್ರಾರಂಭವಾದ ಜಾಥಾಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳು ಪರಿಸರ ಮತ್ತು ಜಲರಕ್ಷಣೆ ಬಗ್ಗೆ ಗಮನಹರಿಸಬೇಕು.

ಗಂಗಾವತಿ: ಇಲ್ಲಿಯ ಆರೋನ್ ಮಿರಜ್‌ಕರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ನಿವೇದಿತಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಜಲ ಸಂರಕ್ಷಣೆ ಮತ್ತು ನಗರ ನೈರ್ಮಲ್ಯ ಜಾಗೃತಿ ಜಾಥಾ ಜರುಗಿತು.

ಎಪಿಎಂಸಿಯಿಂದ ಪ್ರಾರಂಭವಾದ ಜಾಥಾಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳು ಪರಿಸರ ಮತ್ತು ಜಲರಕ್ಷಣೆ ಬಗ್ಗೆ ಗಮನಹರಿಸಬೇಕು ಎಂದರು.ಪರಿಸರ ಅಭಿಯಂತರ ಚೇತನ್‌ಕುಮಾರ್‌ ಮಾತನಾಡಿ, ಈ ವರ್ಷ ಮಳೆಯ ಕೊರತೆಯಿಂದಾಗಿ ನೀರಿನ ಲಭ್ಯತೆಯು ಗಣನೀಯವಾಗಿ ಕಡಿಮೆಯಾಗಿದೆ. ಆದ್ದರಿಂದ ನೀರನ್ನು ಮಿತವಾಗಿ ಬಳಕೆ ಮಾಡಬೇಕು. ನಗರ ಸ್ವಚ್ಛತೆ ಮತ್ತು ಪರಿಸರ ನೈರ್ಮಲ್ಯ ಕೇವಲ ನಗರಸಭೆಯ ಜವಾಬ್ದಾರಿಯಾಗಿರದೆ ಪ್ರತಿಯೊಬ್ಬ ನಾಗರಿಕನೂ ಈ ನಿಟ್ಟಿನಲ್ಲಿ ಕೈ ಜೋಡಿಸಬೇಕು ಎಂದು ಕರೆ ನೀಡಿದರು.ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಂಕರಗೌಡ ಜಲ ರಕ್ಷಣೆ ಕುರಿತು ವಿವರಿಸಿದರು. ಆರೋನ್ ಮಿರಜ್‌ಕರ್ ಮತ್ತು ನಿವೇದಿತಾ ಶಾಲೆಯ ಸುಮಾರು 500 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಜಲ ಸಂರಕ್ಷಣೆ ಮತ್ತು ನಗರ ನೈರ್ಮಲ್ಯ ಜಾಗೃತಿ ಮೂಡಿಸುವ ಭಿತ್ತಿಪತ್ರಗಳು, ಘೋಷಣೆಗಳದೊಂದಿಗೆ ಸಾರ್ವಜನಿಕರ ಗಮನವನ್ನು ಸೆಳೆದರು.ಸಂಸ್ಥೆಯ ಕಾರ್ಯದರ್ಶಿ ರುಬೀನ್ ಮಿರಜ್‌ಕರ್‌ ಮಾತನಾಡಿ, ಸಂಸ್ಥೆಯ ವತಿಯಿಂದ ಪ್ರತಿ ವರ್ಷವೂ ಒಂದಲ್ಲ ಒಂದು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಈ ವರ್ಷ ಜಲ ಸಂರಕ್ಷಣೆ ಮತ್ತು ನಗರ ನೈರ್ಮಲ್ಯದ ಬಗ್ಗೆ ಜನ ಜಾಗೃತಿ ಜಾಥಾ ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ಕೆ ಕೈ ಜೋಡಿಸಿದ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ಹಾಗೂ ಶಿಕ್ಷಕ ವರ್ಗದವರಿಗೆ ಅಭಿನಂದನೆಗಳು ಎಂದರು.ಸಂಸ್ಥೆಯ ಖಜಾಂಚಿ ಸುನೀತಾ ಮಿರಜ್‌ಕರ್, ಆಡಳಿತಾಧಿಕಾರಿ ಚಂದ್ರಕಾಂತ್ ಜಿ., ಮುಖ್ಯಗುರುಗಳಾದ ಮಂಜುನಾಥ ಮತ್ತು ರೇಖಾ ಠಾಕೂರ್ ಹಾಗೂ ಆರೋನ್ ಮತ್ತು ನಿವೇದಿತಾ ಶಾಲೆಯ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.