ಕನ್ನಡಪ್ರಭ ವಾರ್ತೆ ಭಾರತೀನಗರ
ಜನವರಿ ತಿಂಗಳಲ್ಲಿ ಬರುವ ಕೊಕ್ಕರೆಗಳು ವರ್ಷದಲ್ಲಿ 6 ತಿಂಗಳ ಕಾಲ ಬೆಳ್ಳೂರಿನಲ್ಲಿ ನೆಲೆಸಿ ಗೂಡು ಕಟ್ಟಿಕೊಂಡು ವಾಸಿಸುತ್ತವೆ. ಈ ಪಕ್ಷಿಗಳನ್ನು ವೀಕ್ಷಿಸಲು ದೇಶ-ವಿದೇಶಗಳಿಂದ ಪಕ್ಷಿ ಪ್ರೇಮಿಗಳು ಬರುವುದು ಸರ್ವೇ ಸಾಮಾನ್ಯವಾಗಿದೆ.
ಪ್ರತಿವರ್ಷವೂ ನಿಗಧಿಯ ಸಮಯಕ್ಕೆ ಬಣ್ಣದ ಕೊಕ್ಕರೆ (ಪೇಟೆಂಡ್ ಸ್ಟಾರ್ಕ್), ಫೆಲಿಕಾನ್, ಪಾರ್ಕ್ಪೇಂಟರ್, ನೈಟ್ಎರಾನ್, ವೈಟ್ಹೇಬಿಸ್, ಪಾಂಡ್ಎರಾನ್, ಕಾರ್ಮೋರೆಂಟ್ ಸೇರಿ ವಿವಿಧ ಬಗೆಯ ಕೊಕ್ಕರೆಗಳು ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಇನ್ನಿತರೆ ವಿವಿಧ ದೇಶದ ಮೂಲೆ-ಮೂಲೆಯಿಂದ ಇಲ್ಲಿಗೆ ಬರುತ್ತಿವೆ.ಈಗಾಗಲೇ ಹಕ್ಕಿಜ್ವರದಿಂದ ಪಕ್ಷಿಗಳು ಕ್ಷೀಣಿಸುತ್ತಿದ್ದವು. ಇದರ ಮಧ್ಯೆ ಭೀಕರ ಬರಗಾಲದಿಂದ ಎಲ್ಲಾ ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಹಕ್ಕಿಗಳು ಸಾವು - ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ಕೊಕ್ಕರೆಗಳು ಆಹಾರ ಮತ್ತು ನೀರಿಗೆ ಶಿಂಷಾನದಿಯನ್ನು ಅವಲಂಬಿಸಿದ್ದವು. ಆದರೀಗ ಅದೂ ಕೂಡ ಸಂಪೂರ್ಣವಾಗಿ ಬರಿದಾಗಿದೆ.
ಬೆಳ್ಳೂರಿನ ಕೂಗಳತೆ ದೂರದಲ್ಲಷ್ಟೆ ೮೦೦ ಎಕರೆ ವಿಸ್ತೀರ್ಣದ ಶಿಂಷಾನದಿ ಕೆರೆ ಅಭಿವೃದ್ದಿಗೂ ಸರ್ಕಾರ ಮುತ್ತುವರ್ಜಿ ತೋರುತ್ತಿಲ್ಲ. ಕೊಕ್ಕರೆಗಳ ಹಿತದೃಷ್ಟಿಯಿಂದ ಅಭಿವೃದ್ಧಿ ಅಗತ್ಯವಾಗಿದೆ. ಆಹಾರಕ್ಕಾಗಿ ಈ ಶಿಂಷಾನದಿ ಪಾತ್ರಕ್ಕೆ ಬರುವ ಕೊಕ್ಕರೆಗಳಿಗೆ ತೊಂದರೆಯಾಗಿದೆ.
ಕೊಕ್ಕರೆಗಳ ವಿವಿಧ ಭಂಗಿ, ಆಹಾರ ಹಿಡಿಯಲು ಕುತೂಹಲಕರ ನೋಟ, ಒಂದಕ್ಕೊಂದು ಪ್ರೀತಿ ಮಾಡುವ ಮಧುರ ಕ್ಷಣಗಳು ಇವೆಲ್ಲವೂ ಇಲ್ಲಿ ವಿಶಿಷ್ಟವಾಗಿರುತ್ತವೆ. ರಾಜ್ಯದಲ್ಲಿ ಹಲವು ಕಡೆ ಪಕ್ಷಿಧಾಮಗಳಿವೆ ಜೊತೆಗೆ ಶಿಂಷಾನದಿಯ ಪಾತ್ರದಲ್ಲಿ ನೂರಾರು ಹೆಮ್ಮರಗಳಿದ್ದರೂ ಹಕ್ಕಿಗಳಿಗೆ ಮಾತ್ರ ಶಿಂಷಾನದಿಯ ದಂಡೆಯ ಮೇಲಿನ ಶ್ರೀ ವೈದ್ಯನಾಥಶ್ವೇರ ದೇವಾಲಯ ಸಮೀಪದ ಕೊಕ್ಕರೆ ಬೆಳ್ಳೂರೇ ಇಷ್ಟ. ಹಾಗಾಗಿ ಕೊಕ್ಕರೆಗಳು ಸಾವಿರಾರು ಕಿಮೀ ದೂರಗಳಿಂದ ಕೊಕ್ಕರೆ ಬೆಳ್ಳೂರಿಗೆ ಆಗಮಿಸುತ್ತವೆ.
ಕೊಕ್ಕರೆಗಳ ಸಂಖ್ಯೆ ಇಳಿಮುಖ:
ಕಳೆದ ೨೫ ವರ್ಷಗಳಿಂದಲೂ ಸರ್ಕಾರ ಅಭಿವೃದ್ಧಿಪಡಿಸುವ ಭರವಸೆ ನೀಡುತ್ತಿದೆ. ಆದರೆ ಶೇ.೧ರಷ್ಟು ಹೊರತು ಪಡಿಸಿದರೆ ಶೇ.೯೯ ರಷ್ಟು ಕೆಲಸಗಳು ಕಾರ್ಯಗತವಾಗಿಲ್ಲ. ವಿದ್ಯುಚ್ಛಕ್ತಿಯ ಬದಲು ಸೌರಶಕ್ತಿ ಬಳಸಿದರೆ ಪಕ್ಷಿಗಳನ್ನು ಸಂರಕ್ಷಿಸಬಹುದು. ಜೊತೆಗೆ ಸಮೀಪವಿರುವ ಶಿಂಷಾನದಿ ತೀರವನ್ನು ಬೆಳ್ಳೂರಿನಂಥ ಪಕ್ಷಿಗ್ರಾಮ ವಿದೇಶದಲ್ಲಿದ್ದಿದ್ದರೆ ಅಭಿವೃದ್ಧಿಪಡಿಸುತ್ತಿದ್ದರು. ಆದರೆ ಇಲ್ಲಿನ ಸರ್ಕಾರದ ಬೇಜವಾಬ್ದಾರಿತನದಿಂದ ನೆನೆಗುದಿಗೆ ಬಿದ್ದಿದೆ.
ಕೊಕ್ಕರೆಗಳು ಹಾಗೂ ಮರಿಗಳನ್ನು ರಕ್ಷಿಸಿ ಚಿಕಿತ್ಸೆ ನೀಡುವ ಕೆಲಸವು ಬಳಗದ ಸದಸ್ಯರಿಂದ ನಡೆಯುತ್ತಿವೆ. ಪ್ರತಿವರ್ಷವೂ 40-50 ವಿವಿಧ ಜಾತಿಯ ಪಕ್ಷಿಗಳನ್ನು ರಕ್ಷಿಸಿ ನಂತರ ಸ್ವತಂತ್ರವಾಗಿ ಹಾರಾಡಲು ಬಿಡುತ್ತಿದ್ದೇವೆ. ಆದರೆ ಈ ಭಾರಿ ಬರಗಾಲ ಆವರಿಸಿರುವುದರಿಂದ ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಕೊಕ್ಕರೆಗಳು ಪರಿತಪಿಸುತ್ತಿವೆ. ಕೂಡಲೇ ಜಿಲ್ಲಾಡಳಿತ ಹಾಗೂ ಸಂಬಂಧ ಪಟ್ಟ ಇಲಾಖೆಗಳು ಅಗತ್ಯಕ್ರಮ ಕೈಗೊಳ್ಳಬೇಕಾಗಿದೆ.