ಭಾಷಾ ಅನುಸಂಧಾನದ ಅಗತ್ಯ ನಮ್ಮ ಮುಂದಿದೆ

KannadaprabhaNewsNetwork | Published : Mar 28, 2025 12:31 AM

ಸಾರಾಂಶ

We need a linguistic approach.

-ಬಹುಭಾಷಿಕತೆ, ಆಧುನಿಕತೆ ಶಿಕ್ಷಣದ ಹೊಸ ಸವಾಲು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕುವೆಂಪು ವಿವಿ ಕುಲಪತಿ ಶರತ್ ಅನಂತಮೂರ್ತಿ

------

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜ್ಞಾನ ಶಾಖೆಗಳ ಬೆಳೆಸಲು ಇಂದಿನ ಶಿಕ್ಷಣ ಪದ್ಧತಿ ಯಶಸ್ವಿ ಆಗುತ್ತಿಲ್ಲ. ಕನ್ನಡ ಕೂಡ ಅನ್ನದ ಭಾಷೆಯಾಗುವಲ್ಲಿ ಸೊರಗುತ್ತಿದೆ. ಹೀಗಾಗಿ ಭಾಷಾ ಅನುಸಂದಾನದ ಅಗತ್ಯ ನಮ್ಮ ಮುಂದಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು.

ಸಹ್ಯಾದ್ರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಕುವೆಂಪು ವಿವಿ, ಸಹ್ಯಾದ್ರಿ ಕಲಾ ಕಾಲೇಜು ಭಾಷಾ ಶಾಸ್ತ್ರ ಮತ್ತು ಶಿಕ್ಷಣ ವಿಭಾಗ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಬಹುಭಾಷಿಕತೆ, ಆಧುನಿಕತೆ ಮತ್ತು ಶಿಕ್ಷಣದ ಹೊಸ ಸವಾಲುಗಳು ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಕವನ ಓದುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸ್ಥಳೀಯ ಭಾಷೆಗಳಲ್ಲಿ ಜ್ಞಾನ ದೃಷ್ಟಿಯನ್ನು ಸಮೃದ್ಧಿಗೊಳಿಸುವಲ್ಲಿ ನಾವು ವಿಫಲರಾಗಿದ್ದೇವೆ. ಭಾಷೆಯಿಂದಲೇ ಜ್ಞಾನ ಶಾಖೆಗಳು ಬೆಳೆಯುತ್ತವೆ. ಹಾಗಾಂತ ಯಾವ ಭಾಷೆಯೂ ಹೇರಿಕೆಯೂ ಆಗಬಾರದು. ಬಹುಭಾಷಾ ಸಂಸ್ಕೃತಿಯನ್ನು ನಾವು ಗೌರವಿಸಬೇಕಾಗುತ್ತದೆ. ಯಾವ ಧರ್ಮಕ್ಕೂ ಅದನ್ನು ಜೋಡಿಸುವುದು ಸರಿಯಲ್ಲ ಎಂದರು.

ಪ್ರಭುತ್ವದ ಸಂದರ್ಭದಲ್ಲಿ ಭಾಷೆಯ ಪಾತಿನಿಧ್ಯವೇ ಬೇರೆಯಾಗಿರುತ್ತದೆ. ಪ್ರಭುತ್ವದ ಭಾಷೆಗಿಂತ ಜನಸಾಮಾನ್ಯರ ಭಾಷೆಗಳು ಉಳಿಯುತ್ತವೆ. ಇದಕ್ಕೆ ಲ್ಯಾಟಿನ್ ಮತ್ತು ಸಂಸ್ಕೃತ ಭಾಷೆ ಉದಾಹರಣೆಯಾಗಿದೆ. ಸಂಸ್ಕೃತ ಭಾಷೆ ಕನ್ನಡದ ಜೊತೆ ಸ್ನೇಹ ಬೆಳೆಸಿತ್ತು. ಈಗ ಆ ಜಾಗದಲ್ಲಿ ಇಂಗ್ಲಿಷ್ ಭಾಷೆ ಕುಳಿತುಕೊಂಡಿದೆ ಎಂದರು.

ಒಂದು ಮಗು ಕಲಿಯುವುದು ಮಾತೃಭಾಷೆಯಾದರೂ ಬಹುಭಾಷಾ ವಾತಾವರಣದಲ್ಲಿ ಬೆಳೆಸುವುದರಿಂದ ಮಗುವಿನ ಕಲಿಕಾ ಸಾಮರ್ಥ್ಯ ಹೆಚ್ಚುತ್ತದೆ. ಹಾಗಾಗಿ, ಒಂದು ಭಾಷೆಗೆ ಮಾತ್ರ ಬಲವಂತದ ಸ್ಥಾನ ನೀಡುವುದು ಸರಿಯಲ್ಲ. ಕರ್ನಾಟಕ ಬಹುಭಾಷೆಗಳ ಮಿನಿ ಇಂಡಿಯಾ ಆಗಿದೆ. ಶೇ.೫೫ರಷ್ಟು ಕನ್ನಡಿಗರಿದ್ದಾರೆ. ಉಳಿದವರು ಶೇ.೪೫ರಷ್ಟಿದ್ದಾರೆ. ಹಾಗಾಗಿ, ಕನ್ನಡ ಕೂಡ ಹೇರಿಕೆ ಭಾಷೆಯಾಗಬಾರದು ಎಂದರು.

ಇಂಗ್ಲಿಷ್ ಮಾಧ್ಯಮಗಳ ಶಾಲೆಗಳನ್ನು ಸರ್ಕಾರ ತೆರೆದಿದೆ. ಆದರೆ, ಅವು ಸಂಪೂರ್ಣ ವಿಫಲವಾಗಿವೆ. ಇಂಗ್ಲಿಷ್‌ನ್ನು ಕಲಿಯದೇ ಕನ್ನಡವನ್ನು ಕಲಿಯದೇ ಅತಂತ್ರ ಸ್ಥಿತಿಗೆ ತಂದಿಟ್ಟಿದೆ. ಇಂಗ್ಲಿಷ್ ಕಲಿಸುವ ಉಪಾಧ್ಯಯರ ಕೊರತೆಯೂ ಇದೆ. ಒಟ್ಟಾರೆ ಭಾಷಾ ನೀತಿಯಲ್ಲಿಯೇ ತೊಡಕುಗಳಿವೆ ಎಂದರು.

ಭಾಷಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಮೇಟಿ ಮಲ್ಲಿಕಾರ್ಜುನ ಮಾತನಾಡಿ, ಬಹುಭಾಷಾಕತೆ ಎಂಬುದು ಸಹಜ ವಿದ್ಯಾಮಾನ ಅದನ್ನು ಪೋಷಿಸುವ ಬಗ್ಗೆ ನಾವು ಸೋಲುತ್ತಿದ್ದೇವೆ. ಭಾಷಾ ನೀತಿ ಬಗ್ಗೆ ತೀವ್ರ ಚರ್ಚೆಯಾಗುತ್ತದೆ. ತ್ರಿಭಾಷಾ ಸೂತ್ರದ ಬಗ್ಗೆಯೂ ನಾವು ಮಾತನಾಡುತ್ತಿದ್ದೇವೆ. ಶಿಕ್ಷಣದ ಮೇಲೆ ಆಗುವ ಅಪಾಯಗಳ ಬಗ್ಗೆ ನಾವು ಯೋಚಿಸುತ್ತಿಲ್ಲ ಎಂದರು.

ಕರ್ನಾಟಕದಲ್ಲಿ 174 ಭಾಷೆಗಳಿವೆ. ಕನ್ನಡವೇ ಕಡ್ಡಾಯವಾಗಬೇಕು ಎಂದು ಹೇಳುವುದು ಕಷ್ಟವಾಗುತ್ತದೆ. ಕನ್ನಡದ ಪ್ರಜ್ಞೆಯನ್ನು ಅತ್ಯಂತ ಸರಳಗೊಳಿಸಲಾಗುತ್ತಿದೆ. ಜನರ ಬದುಕಿಗೆ ಭಾಷೆ ಭದ್ರಾವಾಗಬೇಕು. ಅನ್ನದ ಭಾಷೆಯಾಗಬೇಕು. ಭಾಷೆ ಯಾವಾಗಲೂ ಭಾವ ತೀವ್ರತೆಯಾಗಬಾರದು. ಭಾವನ್ಮಾತ್ಮಕವು ಆಗಬಾರದು. ಶಿಕ್ಷಣ ನೀತಿಗಳು ಭಾಷಾ ನೀತಿಯ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ. ಬಹುಭಾಷಿಕತೆಯನ್ನು ಚರ್ಚಿಸುವುದೇ ಕಷ್ಟ. ಅದರ ವಿನ್ಯಾಸವನ್ನು ನಾವು ಕಾಪಾಡಬೇಕು ಎಂದರು.

ಹೊಸ ಶಿಕ್ಷಣ ನೀತಿಗಳ ಬಗ್ಗೆ ಅಪಸ್ವರ ಎತ್ತಿದ ಅವರು ಎನ್‌ಇಪಿಯಲ್ಲಿ ಗೊಂದಲವಿದೆ. ಭಾಷಿಕ ವ್ಯವಿಧ್ಯತೆಯ ಮೂಲಕ ಇದನ್ನು ಸರಿಪಡಿಸಬಹುದೇ ಹೊರತು ವೈವಿಧ್ಯತೆ ಮತ್ತು ಏಕತೆಯನ್ನು ಎರಡು ಒಟ್ಟಿಗೆ ಇಡಲು ಸಾಧ್ಯವಿಲ್ಲ. ಮೇಷ್ಟ್ರುಗಳು ಕೂಡ ನಿದ್ರೆಯಿಂದ ಎದ್ದೇಳದ ಹೊರತು ವಿದ್ಯಾರ್ಥಿಗಳು ಉದ್ಧಾರವಾಗಲ್ಲ ಎಂದರು.

ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಹಾಗೂ ಜನಪ್ರಿಯ ವಕೀಲ ಕೆ.ಪಿ.ಶ್ರೀಪಾಲ್ ಮಾತನಾಡಿ, ಭಾಷೆ ನಮಗೆ ಬಹುಮುಖ್ಯ ಅದರಲ್ಲೂ ನ್ಯಾಯಲಯಗಳಲ್ಲಿ ಬಹುಭಾಷೆಯ ಬಗ್ಗೆ ಅರಿವು ಇರಲೇಬೇಕು. ಕನ್ನಡದ ಜೊತೆಗೆ ಬೇರೆ ಬೇರೆ ಭಾಷೆ ಕಲಿಯುವುದು ಕೂಡ ಅನಿವಾರ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ಸೈಯ್ಯದ್ ಸನಾವುಲ್ಲಾ ವಹಿಸಿದ್ದರು. ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಎಚ್.ಪಿ.ಮಂಜುನಾಥ್ ಸ್ವಾಗತಿಸಿದರು. ಸಂತೋಷ್ ವಂದಿಸಿದರು.

----------------

ಪೊಟೋ: 27ಎಸ್‌ಎಂಜಿಕೆಪಿ03

ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಬಹುಭಾಷಿಕತೆ, ಆಧುನಿಕತೆ ಮತ್ತು ಶಿಕ್ಷಣದ ಹೊಸ ಸವಾಲುಗಳು ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರು ಕವನ ಓದುವ ಮೂಲಕ ಉದ್ಘಾಟಿಸಿದರು.

Share this article