ಕನ್ನಡಪ್ರಭ ವಾರ್ತೆ ಬೆಳಗಾವಿ
ಲಿಂಗಾಯತ ಧರ್ಮವನ್ನು ಬಸವಣ್ಣರು ಸ್ಥಾಪನೆ ಮಾಡಿರುವ ಕುರಿತು ದಾಖಲೆಗಳು ಎಲ್ಲಿವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು.ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಮಠಾಧೀಶರು, ರಾಜಕಾರಣಿಗಳು ಬಸವಣ್ಣನವರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಬಸವಣ್ಣನವರು ನಮ್ಮ ಜಿಲ್ಲೆಯವರೇ. ಅವರಿಗೆ ಯಾವ ರೀತಿ ಜನರು ನಡೆದುಕೊಂಡರು ಎನ್ನುವುದು ಮನೆ ಮನೆಗೂ ಗೊತ್ತಿದೆ ಎಂದರು.ಹಿಂದು ಧರ್ಮದ ಕುರಿತು ಬಸವಣ್ಣನವರು ಎಂದಿಗೂ ನಿಂದನೆ ಮಾಡಿಲ್ಲ. ಮೂರ್ತಿ ಪೂಜೆ ಮಾಡುವುದು ಹಿಂದುಗಳ ಧರ್ಮದಲ್ಲಿದೆ. ಬಸವಣ್ಣನವರ ಸ್ವತಃ ಶಿವನ ಭಕ್ತರಿದ್ದರು. ಬಸವಣ್ಣನವರ ವಚನದ ಸಾಲಿನಲ್ಲಿ ಕೂಡಲಸಂಗಮ ದೇವ ಎಂದು ಇದೆ. ಕೆಲವೊಂದು ನಾಸ್ತಿಕ ಮಠಾಧೀಶರು, ಕಮ್ಯೂನಿಸ್ಟ್ ಮೈಡೆಂಡ್ ಇರುವ ಸ್ವಾಮೀಜಿಗಳು ಬಸವಣ್ಣನವರನ್ನು ತಮ್ಮ ಮನೆಯ ಆಸ್ತಿ ಎಂದು ಮಾಡಿಕೊಂಡಿದ್ದಾರೆ. ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪನೆ ಮಾಡಿಲ್ಲ ಎಂದರು.ದೇಶದಲ್ಲಿ ಕೇವಲ 6 ಧರ್ಮಗಳಿಗೆ ಮಾತ್ರ ಸಂವಿಧಾನದಲ್ಲಿ ಮಾನ್ಯತೆ ಇದೆ. ಲಿಂಗಾಯತ ವೀರಶೈವ ಭಾರತದ ಸಂವಿಧಾನದಲ್ಲಿ ಮಾನ್ಯತೆ ಇಲ್ಲ. ದಲಿತರು ಸೇರಿದಂತೆ ಎಲ್ಲಾ ಸಮುದಾಯದವರು ಹಿಂದು ಬರೆಸುತ್ತಿದ್ದಾರೆ. ಯಾಕೆಂದರೆ ಹಿಂದು ಎಂದು ಬರೆಸದಿದ್ದರೆ ನಮಗೆ ಸಿಗುವ ಸೌಲಭ್ಯಗಳು ಸಿಗುವುದಿಲ್ಲ. ಲಿಂಗಾಯತ ಧರ್ಮನೇ ಇಲ್ಲ. ಎಲ್ಲಿಯವರೆಗೆ ಕೇಂದ್ರ ಸರಕಾರ ಅನುಮೋದನೆ ಕೊಡುತ್ತದೆಯೋ ಅಲ್ಲಿಯವರೆಗೆ ಸೂಕ್ತವಲ್ಲ ಎಂದರು.ಉತ್ತರ ಕರ್ನಾಟಕದ ಅಭಿವೃದ್ಧಿ ಆಗಬೇಕು. ನಮ್ಮ ಜನಪ್ರತಿನಿಧಿಗಳು ಗಟ್ಟಿಯಾಗಿ ಮಾತನಾಡಿದ್ದರೇ ನಮಗೊಂದು ಶಕ್ತಿ ಇರುತ್ತಿತ್ತು. ನಾವು ಯಾರೂ ಆಗ ದಿ.ಉಮೇಶ ಕತ್ತಿ ಅವರಿಗೆ ಬೆಂಬಲ ಕೊಡಲಿಲ್ಲ. ಯಾವಾಗಲೂ ರಾಜಕಾರಣದ ವ್ಯವಸ್ಥೆಯಲ್ಲಿ ಬೇಡಿಕೆ ಹಾಗೂ ಅನ್ಯಾಯವನ್ನು ವೇದಿಕೆಯಲ್ಲಿ ಮಾತನಾಡಿದರೇ ನ್ಯಾಯ ಸಿಗುತ್ತದೆ ಎನ್ನುವುದಕ್ಕೆ ಉಮೇಶ ಕತ್ತಿ ಅವರು ನಮಗೆ ಮಾದರಿಯಾಗಿದ್ದಾರೆ ಎಂದರು.ಒಬ್ಬ ದೊಡ್ಡದ ಮರ ಬಿದ್ದ ಹೋದ ಮೇಲೆ ಒಂದು ರೀತಿ ಭೂಕಂಪ ಆಗುತ್ತದೆ ಎನ್ನುತ್ತಾರೆ. ಅದೇ ರೀತಿ ಉಮೇಶ ಕತ್ತಿ ಅವರ ಸಮಾವೇಶ ಮಾಡಿ ಉತ್ತರ ಕರ್ನಾಟಕದಲ್ಲಿ ರಾಜಕೀಯ ತಿರುವು ಕೊಡುವ ಸಮಾವೇಶ ಮಾಡಿದ್ದೇವೆ. ನಾವು ಯಾವಾಗಲು ಉಮೇಶ ಕತ್ತಿ ಅವರ ಕುಟುಂಬದ ಪರವಾಗಿದ್ದೇವೆ ಎಂದು ಭರವಸೆ ನೀಡಿದರು.