ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಪ್ರಸ್ತುತ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವುದು ಸವಾಲಿನ ಕೆಲಸವಾಗಿದ್ದು, ಈ ನಿಟ್ಟಿನಲ್ಲಿ ಧರ್ಮಸ್ಥಳ ಸಂಸ್ಥೆ ಗ್ರಾಮೀಣಾಭಿವೃದ್ಧಿ ಹೆಸರಿನಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದು ಆರ್.ಟಿ.ಒ ಅಧಿಕಾರಿ ಹಾಗೂ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನಮ್ಮೂರು-ನಮ್ಮ ಕೆರೆ ಯೋಜನೆಯಡಿ ಪ್ರತಿ ವರ್ಷ ಒಂದೊಂದು ಕೆರೆಗಳನ್ನು ಅಭಿವೃದ್ಧಿ ಮಾಡಿಕೊಂಡು ಬರುತ್ತಿದೆ. ಗ್ರಾಮೀಣ ಪ್ರದೇಶದ ಜನ-ಜಾನುವಾರುಗಳ ಜೀವನಾಡಿಗಳಾಗಿರುವ ಕೆರೆಗಳನ್ನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಾಮೂಹಿಕವಾಗಿ ಅಭಿವೃದ್ಧಿ ಮಾಡುತ್ತಿರುವುದು ಸುಲಭದ ಕೆಲಸವಲ್ಲ. ಅದರಂತೆ ಹೂಳು ತುಂಬಿಕೊಂಡು ನೀರಿನ ಸಂಗ್ರಹ ಕಡಿಮೆಯಿದ್ದ ಬಿಲ್ಲರಾಮನಹಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಹಸ್ತಾಂತರಿಸಿರುವುದು ಸಂತಸದ ವಿಷಯವಾಗಿದೆ ಎಂದರು.
ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಮಮತಾಶೆಟ್ಟಿ ಮಾತನಾಡಿ, ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಜನರಿಗೆ ನೀರಿನ ಸಮಸ್ಯೆಯಾಗಬಾರದು. ದನಕರುಗಳಿಗೆ ನೀರಿನ ಅಭಾವವಾಗಬಾರದು ಎಂಬ ತತ್ವದಡಿ ಕ್ಷೇತ್ರದ ಕಲ್ಪನೆಗಳನ್ನು ಗ್ರಾಮೀಣಾಭಿವೃದ್ಧಿ ಹೆಸರಿನಲ್ಲಿ ಅನುಷ್ಟಾನಗೊಳಿಸಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ಬಿಲ್ಲರಾಮನಹಳ್ಳಿ ಮತ್ತು ಸಾಧುಗೋನಹಳ್ಳಿ ಗ್ರಾಮಗಳ ಕೆರೆಯನ್ನು ಮೂರು ತಿಂಗಳಿನಿಂದಲೂ ಅಭಿವೃದ್ಧಿ ಮಾಡಲಾಗುತ್ತಿದೆ. ಇದಕ್ಕೆ ಗ್ರಾಮದ ಸಾರ್ವಜನಿಕರು ಉತ್ತಮ ಸಹಕಾರ ನೀಡಿದರು. ಇಲ್ಲಿ ಕೆರೆ ಇದೆ ಎಂದು ಗುರುತಿಸಲು ಸಾಧ್ಯವಾಗದಂತೆ ಹೂಳು ತುಂಬಿತ್ತು. ಅದನ್ನು ಅಭಿವೃದ್ಧಿಪಡಿಸಿ ಕೆರೆ ತುಂಬಿಸಿ ನಳನಳಿಸುವಂತೆ ಮಾಡಲಾಗಿದ್ದು ಗಂಗೆಪೂಜೆ ಮಾಡುವ ಮೂಲಕ ಇಂದು ಗ್ರಾಮಕ್ಕೆ ಹಸ್ತಾಂತರಿಸಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಿಸರ್ಗಪ್ರಿಯ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ಅಧಿಕಾರಿ ಜಯರಾಮು ನೆಲ್ಲಿತ್ತಾಯ, ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ, ಜನಜಾಗೃತಿ ವೇದಿಕೆಯ ಸದಸ್ಯರಾದ ಎಸ್.ಅಂಬರೀಶ್, ಕೆ.ಎಸ್.ರಾಜೇಶ್, ಕೆರೆ ಅಭಿವೃದ್ದಿ ಸಂಸ್ಥೆಯ ರಘು, ಬೋರೇಗೌಡ, ಕುಮಾರಣ್ಣ ಮತ್ತು ಸ್ವಸಹಾಯ ಸಂಸ್ಥೆಯ ಪ್ರತಿನಿಧಿಗಳು ಹಾಜರಿದ್ದರು.