ಯಾದಗಿರಿ: ಮೈಲಾಪುರದ ಮೈಲಾರಲಿಂಗೇಶ್ವರ ಜಾತ್ರೆ ಇಂದು

KannadaprabhaNewsNetwork |  
Published : Jan 14, 2024, 01:33 AM IST
ಮೈಲಾಪುರದ ಮೈಲಾರಲಿಂಗೇಶ್ವರ.  | Kannada Prabha

ಸಾರಾಂಶ

ಮಲ್ಲಯ್ಯನ ಸನ್ನಿಧಿಗೆ ಲಕ್ಷಾವಧಿ ಭಕ್ತರ ದಂಡು ಹೆಜ್ಜೆ ಇಡುತ್ತದೆ. ವಿಚಿತ್ರ ಸಂಪ್ರದಾಯಗಳ ಊರು ಮೈಲಾಪೂರಾಗಿದ್ದು, ಜಾತ್ರೆ ಹಿನ್ನೆಲೆ ನಡೆಯುವ ಹರಕೆಯ ಕುರಿಗಳ ಎಸೆತಕ್ಕೆ ಜಿಲ್ಲಾ ಆಡಳಿತ ನಿಷೇಧ ಹೇರಿ, ಕಟ್ಟೆಚ್ಚರ ಮಾಡಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಶತ ಶತಮಾನಗಳ ಇತಿಹಾಸ ಹೊಂದಿರುವ, ವಿಚಿತ್ರ ಹಾಗೂ ವಿಶಿಷ್ಟ ಸಂಪ್ರದಾಯಗಳಿಗೆ ಹೆಸರಾಗಿರುವ, ಯಾದಗಿರಿ ತಾಲೂಕಿನ ಮೈಲಾಪೂರದ ಶ್ರೀಮೈಲಾರಲಿಂಗೇಶ್ವರ ಜಾತ್ರೆ ಭಾನುವಾರ ನಡೆಯಲಿದೆ.

ಯಾದಗಿರಿ ನಗರದಿಂದ 27ಕಿ.ಮೀ. ದೂರದಲ್ಲಿರುವ ಮೈಲಾಪೂರದಲ್ಲಿ ಪ್ರತಿವರ್ಷ ಜ.14ರಂದು ನಡೆಯುವ ಈ ಜಾತ್ರೆಗೆ ರಾಜ್ಯದ ವಿವಿಧೆಡೆಯಿಂದ ಸೇರಿ ತೆಲಂಗಾಣ, ಆಂಧ್ರ, ಹಾಗೂ ಮಹಾರಾಷ್ಟ್ರದಿಂದ ಸುಮಾರು ಐದು ಲಕ್ಷಗಳಿಗೂ ಹೆಚ್ಚು ಭಕ್ತರು ಆಗಮಿಸಿ, ಶ್ರೀಮೈಲಾರಲಿಂಗನ ದರುಶನ ಪಡೆಯುತ್ತಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಹು ಪ್ರಸಿದ್ಧಿ ಪಡೆದಿರುವ ಮೈಲಾರಲಿಂಗೇಶ್ವರ ಜಾತ್ರೆ ಅಂಗವಾಗಿ, ಭಕ್ತರ ಅನುಕೂಲಕ್ಕೆಂದು ಜಿಲ್ಲಾಡಳಿತ ಕಳೆದೊಂದು ತಿಂಗಳಿನಿಂದ ಅಲ್ಲಿ ಸಿದ್ಧತೆಗಳ ನಡೆಸುತ್ತಿದೆ. ಕುಡಿಯುವ ನೀರು, ಭಕ್ತರಿಗೆ ಮೂಲಭೂತ ಸೌಕರ್ಯಗಳು, ತಾತ್ಕಾಲಿಕ ವೈದ್ಯಕೀಯ ವ್ಯವಸ್ಥೆ, ಜನ ಜಾಗೃತಿ ಕೇಂದ್ರ, ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಹರಕೆ ಕುರಿಮರಿಗಳ ಎಸೆತಕ್ಕೆ ನಿಷೇಧ:

ಮೈಲಾರಲಿಂಗೇಶ್ವರ ಜಾತ್ರೆ ವೇಳೆ ಹರಕೆ ಹೆಸರಿನಲ್ಲಿ ದೇವರ ಪಲ್ಲಕ್ಕಿ ಮೇಲೆ ಭಕ್ತರು ಎಸೆಯುತ್ತಿದ್ದ ಕುರಿಮರಿಗಳ ಅಮಾನವೀಯ ಸಂಪ್ರದಾಯ ಇದೀಗ ನಿಯಂತ್ರಣಕ್ಕೆ ಬಂದಿದೆ.

ಜಾತ್ರೆ ದಿನದಂದು, ಅಲ್ಲಿನ ಹೊನ್ನಕೆರೆಯಲ್ಲಿ ಮೈಲಾರಲಿಂಗನ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ಗರ್ಭಗುಡಿಗೆ ಕರೆದೊಯ್ಯುವ ವೇಳೆ ಸಾವಿರಾರು ಹರಕೆ ಕುರಿಗಳನ್ನ ಎಸೆಯುವ ಅಮಾನವೀಯ ಕೃತ್ಯ ನಡೆಯುತ್ತಿತ್ತು. ಭಂಡಾರದ ಬಣ್ಣದ ನಡುವೆ ಭಯ-ಭಕ್ತಿಯ ಪರಾಕಾಷ್ಠೆ ಮುಗಿಲು ಮುಟ್ಟಿ, ಲಕ್ಷಾಂತರ ಭಕ್ತರ ಕಾಲುಗಳಲ್ಲಿ ಸಿಲುಕಿ ಸಾವಿರಾರು ಕುರಿಮರಿಗಳು ಸಾವನ್ನಪ್ಪುತ್ತಿದ್ದವು.

ಆದರೆ, ಕಳೆದ ಕೆಲ ವರ್ಷಗಳಿಂದ ಇದಕ್ಕೆ ವಿರೋಧ ವ್ಯಕ್ತವಾಗಿ, ಪ್ರಾಣಿದಯಾ ಸಂಸ್ಥೆಗಳ ಕೆಂಗಣ್ಣಿಗೂ ಗುರಿಯಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಜಂಟಿಯಾಗಿ ಕಟ್ಟೆಚ್ಚರ ವಹಿಸುತ್ತಿರುವುದರಿಂದ ಕುರಿಮರಿಗಳ ಎಸೆತ ಬಹುತೇಕ ತಗ್ಗಿದೆ. ಹರಕೆಯ ಹೆಸರಿನಲ್ಲಿ ಮೂಕಪ್ರಾಣಿಗಳ ಮೇಲಿನ ದೌರ್ಜನ್ಯಕ್ಕೆ ಅಂತ್ಯ ಹಾಡಬೇಕೆಂದು ಭಕ್ತರ ಮನವೊಲೈಸುವ ಜಾಗೃತಿ, ತಪ್ಪಿದರೆ ಕಾನೂನು ಕ್ರಮ ಕೈಗೊಳ್ಳುವ ಕುರಿತು ಈಗ ಎಚ್ಚರಿಕೆ ನೀಡಲಾಗುತ್ತಿದೆ.

ಕುರಿಮರಿಗಳ ರಕ್ಷಿಸಲು ಮೈಲಾಪೂರದ ಸುತ್ತಮುತ್ತ ಚೆಕ್ ಪೋಸ್ಟ್‌ ನಿರ್ಮಿಸಿ, ಭಕ್ತರಿಂದ ಅಲ್ಲೇ ಪಡೆಯಲಾಗುತ್ತದೆ. ಜಪ್ತಿ ಮಾಡಿದ ಕುರಿಮರಿಗಳನ್ನು ಪಶು ಸಂಗೋಪನಾ ಇಲಾಖೆ ಸುಪರ್ದಿಗೆ ನೀಡಿ, ಮರುದಿನ ಒಟ್ಟು ಕುರಿಮರಿಗಳ ಹರಾಜು ಹಾಕಿ, ಬರುವ ಲಕ್ಷಾಂತರ ರುಪಾಯಿ ಆದಾಯವನ್ನು ಮಲ್ಲಯ್ಯನ ದೇವಸ್ಥಾನದ ಅಭಿವೃದ್ಧಿಗೆ ನೀಡಲಾಗುತ್ತದೆ.

ಮೈಲಾಪೂರದಲ್ಲಿನ ವಿಚಿತ್ರ ಹಾಗೂ ವಿಶಿಷ್ಟ ಆಚರಣೆಗಳು

ಯಾದಗಿರಿ: ವಿಚಿತ್ರ ಹಾಗೂ ವಿಶಿಷ್ಟ ಸಂಪ್ರದಾಯಗಳಿಗೆ ಹೆಸರಾದ ಮೈಲಾಪೂರ ಗ್ರಾಮದ ಬಹುತೇಕ ಆಚರಣೆಗಳು, ವೈಜ್ಞಾನಿಕವಾಗಿ ಮುಂದುವರೆಯುತ್ತಿರುವ ಆಧುನಿಕ ಯುಗದಲ್ಲಿಯೂ ಅಚ್ಚರಿ ಹುಟ್ಟಿಸುತ್ತವೆ.

ಗ್ರಾಮದ ಅಧಿದೇವರು ಮೈಲಾರಲಿಂಗನ ಆಸನ ಮಂಚ ಆಗಿರೋದರಿಂದ ಇಲ್ಯಾರೂ ಅದರ ಮೇಲೆ ಮಲಗುವುದಾಗಲೀ, ಕುಳಿತು ಕೊಳ್ಳುವುದಾಗಲೀ ಮಾಡುವುದಿಲ್ಲ. ಹಸಿ ಬಾಣಂತಿಗೂ ಹೊರಸು (ಮಂಚ) ಮೇಲೆ ಮಲಗುವಂತಿಲ್ಲ.

ಇನ್ನು, ಮೈಲಾರಲಿಂಗೇಶ್ವರ ದೇವರ ವಾಹನ ಕುದುರೆಯಾಗಿದ್ದರಿಂದ ಈ ಗ್ರಾಮದಲ್ಲಿ ಯಾರೂ ಕುದುರೆ ಮೇಲೆ ಕೂಡುವುದಿಲ್ಲ. ಪೌರಾಣಿಕ ಕತೆಯೊಂದರ ಐತಿಹ್ಯದಂತೆ, ರಾಕ್ಷಸ ಸಂಹಾರ ವೇಳೆ ಕೋಳಿ ಕೂಗಿದ್ದರಿಂದ ದೇವರ ಕೈಯ್ಯಿಂದ ರಾಕ್ಷಸ ತಪ್ಪಿಸಿಕೊಂಡ ಎಂಬ ಕಾರಣಕ್ಕೆ, ಈ ಗ್ರಾಮದಲ್ಲಿ ಯಾರೂ ಕೋಳಿಗಳನ್ನು ಸಾಕುವುದಿಲ್ಲ. ಮುಂಜಾನೆ ಕೋಳಿ ಕೂಗು ಇಲ್ಲಿ ಕೇಳಿಸೋದೇ ಇಲ್ಲ. ಕುಂಬಾರರು ಗಡಿಗೆ ಸಪ್ಪಳ ಕೇಳ ಮಾಡುವಂತಿಲ್ಲ.

ಸಾಹಸ ಮೆರೆಯುವ ಗುಡ್ಡೇರರು:

ಗುಡ್ಡದ ತುತ್ತತುದಿಯಲ್ಲಿರುವ ಮೈಲಾರಲಿಂಗನ ಸನ್ನಿಧಿ ಬಳಿ ಎತ್ತರದಾದ ಒಂದು ಬಂಡೆಗಲ್ಲಿದೆ. ಬಂಡೆಗಲ್ಲಿನ ತುದಿಯಲ್ಲಿ ದೀಪ ಹಚ್ಚಲಿಕ್ಕೆಂದೇ ಗುಡ್ಡೇರರು ಅನ್ನೋ ಪ್ರತ್ಯೇಕ ಜನಾಂಗದವರ ಸಾಹಸ ಶತಮಾನದಿಂದಲೂ ನಡೆದಿದೆ. ಹಗ್ಗವೊಂದನ್ನು ಹಿಡಿದುಕೊಂಡು, ಸರಸರನೇ ಬಂಡೆಗಲ್ಲನ್ನೇರಿ, ಬೃಹತ್ ಪಾತ್ರೆಗೆ ಡಬ್ಬಿಗಟ್ಟಲೇ ಎಣ್ಣೆ ಸುರಿದು ದೀಪ ಹಚ್ಚೋದು ಇವರ ನಿತ್ಯಕಾಯ. ಮೈನವಿರೇಳಿಸುವ ಇವರ ಸಾಹಸ ಜಾತ್ರೆಯ ಆಕರ್ಷಣೆ.

ಇನ್ನೊಂದು, ಸರಪಳಿ ಹರಿಯುವುದು. ದೇವಸ್ಥಾನದ ಕೆಳಗಡೆ ನಿರ್ದಿಷ್ಟವಾದ ಜಾಗೆಯೊಂದರಲ್ಲಿ ಕಟ್ಟಲಾಗಿರುವ ಬೃಹತ್ ಸರಪಳಿಯನ್ನ ಬರಿಗೈಯಿಂದ ತುಂಡುಮಾಡುವ ದೇವರ ಪೂಜಾರಿ ಸಾಹಸ ನೆರೆದಿದ್ದ ಲಕ್ಷಾಂತರ ಜನರ ಭಕ್ತಿಭಾವಕ್ಕೆ ಕಾರಣವಾಗುತ್ತದೆ. ಸರಪಳಿ ಹರಿದಿದ್ದೇ ತಡ, ಲಕ್ಷಾಂತರ ಜನರ ಕರತಾಡನ, ಏಳು ಕೋಟಿಗೆ ಏಳು ಕೋಟಿ ಘೋಷಣೆಗಳು ಮುಗಿಲು ಮುಟ್ಟುತ್ತವೆ. ನೀಲಾಗಾಸ ಭಂಡಾರದ ಅರಿಶಿನ ರಂಗಾಗುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿವ್‌-ಇನ್‌ ಸಂಬಂಧಕ್ಕೆ ಜನಿಸಿದ ಮಗುವಿಗೆ ತಾಯಿ ಸರ್‌ನೇಮ್‌!
ಪಿಎಂ ಹೇಳ್ತಿರೋ ಆರೆಂಜ್‌ ಆರ್ಥಿಕತೆ ರಾಜ್ಯದಲ್ಲಿ 2016ಲ್ಲೇ ನೀತಿ ಜಾರಿ: ಡಿಕೆ