ಪಟ್ಟಣದಲ್ಲಿ ಸುಸಜ್ಜಿತ ಗುಣಮಟ್ಟವುಳ್ಳ ನೂತನ ದೊಡ್ಡದಾದ ನ್ಯಾಯಾಲಯ ಕಟ್ಟಡದ ಸಂಕೀರ್ಣ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ.
ತಾಲೂಕು ವಕೀಲರ ಸಂಘದ ಸಭಾಂಗಣದಲ್ಲಿ ಸನ್ಮಾನ ಸ್ವೀಕರಿಸಿದ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶ
ಕನ್ನಡಪ್ರಭ ವಾರ್ತೆ ಯಲಬುರ್ಗಾ
ಪಟ್ಟಣದಲ್ಲಿ ಸುಸಜ್ಜಿತ ಗುಣಮಟ್ಟವುಳ್ಳ ನೂತನ ದೊಡ್ಡದಾದ ನ್ಯಾಯಾಲಯ ಕಟ್ಟಡದ ಸಂಕೀರ್ಣ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ ಎಂದು ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶ ಹಾಗೂ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಎಂ.ಜಿ. ಶುಕುರೆ ಕಮಾಲ ಹೇಳಿದರು.
ಪಟ್ಟಣದಲ್ಲಿ ತಾಲೂಕು ವಕೀಲರ ಸಂಘದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅವಧಿ ಒಳಗೆ ನೂತನ ನ್ಯಾಯಾಲಯದ ಕಟ್ಟಡ ಕಾಮಗಾರಿಯನ್ನು ಗುಣಮಟ್ಟದಿಂದ ನಿರ್ಮಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ರಾಜ್ಯಕ್ಕೆ ೩೨ ನ್ಯಾಯಾಧೀಶರನ್ನು ಕೊಟ್ಟಿರುವ ಯಲಬುರ್ಗಾ ವಕೀಲರ ಸಂಘ ರಾಜ್ಯಕ್ಕೆ ಮಾದರಿಯಾಗಿದೆ. ಕೆ.ಎ. ಸ್ವಾಮಿ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಆಗಿ ಅಮೋಘ ಸೇವೆ ಸಲ್ಲಿಸಲು ಕಾರಣ ಇದೇ ವಕೀಲರ ಎಂದು ಶ್ಲಾಘಿಸಿದರು.
ಬಳಿಕ ವಕೀಲರ ಸಂಘದ ಮನವಿ ಸ್ವೀಕರಿಸಿ ಯಲಬುರ್ಗಾಕ್ಕೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸ್ಥಾಪಿಸಿರುವುದರ ಬಗ್ಗೆ ಭರವಸೆ ನೀಡಿದರು.
ಅತಿಥಿಗಳಾಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ. ಚಂದ್ರಶೇಖರ, ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ಸಂಗಪ್ಪ ಮಾಂತೇಶ, ಸ್ಥಳೀಯ ಸಿವಿಲ್ ನ್ಯಾಯಾಧೀಶೆ ಆಯುಷಾ ಮಜೀದ್, ವಕೀಲರ ಸಂಘದ ತಾಲೂಕಾಧ್ಯಕ್ಷ ಪ್ರಕಾಶ ಬೇಲೇರಿ, ಅಪರ್ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ, ತಹಸೀಲ್ದಾರ ಬಸವರಾಜ ತೆನ್ನಳ್ಳಿ, ಮುಖ್ಯಾಧಿಕಾರಿ ನಾಗೇಶ, ವಕೀಲರಾದ ಬಿ.ಎಂ. ಶಿರೂರು, ಈರಣ್ಣ ಕೋಳೋರು, ಎಚ್.ಎಚ್. ಹಿರೇಮನಿ, ರಾಜಶೇಖರ ನಿಂಗೋಜಿ, ಎಸ್.ಎಸ್. ಮಾದಿನೂರ ಮತ್ತಿತರರಿದ್ದರು.
ಇದಕ್ಕೂ ಪೂರ್ವದಲ್ಲಿ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ನ್ಯಾಯಾಲಯ ಕಟ್ಟಡ ಸಂಕೀರಣಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿದರು. ಜತೆಗೆ ನೂತನ ಕಟ್ಟಡದಲ್ಲಿ ಕೋರ್ಟ್ ಹಾಲ್ಗಳು, ವಕೀಲರ ಸಂಘದ ಸಭಾಂಗಣ ಕಚೇರಿ ಸೇರಿ ಇತರೆ ಕಾಮಗಾರಿಗಳ ನೀಲನಕ್ಷೆ ವೀಕ್ಷಿಸಿದ ಬಳಿಕ ಪಿಡಬ್ಲ್ಯುಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.