ಕಾರವಾರ: ಪ್ರತಿಯೊಬ್ಬರಿಗೂ ಉತ್ತಮ ಜೀವನ ಸಾಗಿಸಲು ಆರೋಗ್ಯ ಬಹಳ ಮುಖ್ಯವಾಗಿದ್ದು, ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಯೋಗ ಸಹಕಾರಿಯಾಗಲಿದೆ ಎಂದು ಶಾಸಕ ಸತೀಶ್ ಸೈಲ್ ಹೇಳಿದರು.
ಅವರು ಶನಿವಾರ ನಗರದ ಕಾಜುಬಾಗ ಪೋಲಿಸ್ ಕಲ್ಯಾಣ ಮಂಟಪದಲ್ಲಿ ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಚಿಕ್ಕವರಿಂದ ದೊಡ್ಡವರವರೆಗೆ ಎಲ್ಲರಿಗೂ ಮಾನಸಿಕ ಒತ್ತಡವಿರುತ್ತದೆ. ಆದರಲ್ಲೂ ಶಾಲಾ ಕಾಲೇಜು ಮಕ್ಕಳಲ್ಲಿ ಹೆಚ್ಚಿನ ಒತ್ತಡ ಇರುತ್ತದೆ. ಪ್ರತಿ ಶಾಲೆಗಳಲ್ಲಿ ಮಕ್ಕಳಿಗೆ ಯೋಗವನ್ನು ಹೇಳಿಕೊಡುವಂತೆ ಶಿಕ್ಷಣ ಇಲಾಖಾಧಿಕಾರಿಗಳಿಗೆ ಸೂಚಿಸಿದ ಅವರು, ಆನ್ಲೈನ್ ಸೇವೆಗಳ ಮೂಲಕ ಪಡೆಯುವ ರೆಡಿಮೇಡ್ ಫುಡ್ ಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪ್ರತಿಯೊಬ್ಬರೂ ಉತ್ತಮ ಆಹಾರ ಸೇವನೆಯ ಜೊತೆಯಲ್ಲಿ, ಆಸಕ್ತಿಯಿಂದ ಯೋಗವನ್ನು ಮಾಡಿ ಆರೋಗ್ಯವಂತರಾಗಿರಬೇಕು ಎಂದರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ವಿಶ್ವದಲ್ಲೇ ಇಂದು ಯೋಗ ದಿನಾಚರಣೆಯನ್ನು ಆಚರಿಸಲಾಗಿದೆ. ನಮ್ಮ ಪೂರ್ವಜರು ಪ್ರತಿ ಕ್ಷಣ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು ಇಂದಿನ ಆಧುನಿಕ ಕಾಲದಲ್ಲಿ ಯಾರು ಕೂಡ ಹೆಚ್ಚಿನ ದೈಹಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ ಪ್ರತಿದಿನ ಯೋಗ ಮಾಡುವುದರ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಪಡೆಯಬಹುದಾಗಿದೆ ಎಂದರು.ಜಿಲ್ಲೆಯಲ್ಲಿ ಯೋಗ ಕಲಿಕೆಗೆ ಪ್ರತಿ ತಾಲೂಕಿನಲ್ಲೂ ಯೋಗ ತರಬೇತಿದಾರರಿದ್ದಾರೆ, ಅವರ ಮೂಲಕ ದೈಹಿಕ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದ್ದು, ಅವರು ಯೋಗವನ್ನು ಕಲಿತು ತಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಯೋಗವನ್ನು ಹೇಳಿಕೊಡಲಾಗುವುದು ಎಂದ ಅವರು ಸಾರ್ವಜನಿಕರು ಆಯುಷ್ ಇಲಾಖೆಯಿಂದ ಸಿಗುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಹಿರಿಯ ವೈದ್ಯಾಧಿಕಾರಿ ಡಾ.ಜಗದೀಶ ಯಾಜಿ ಪ್ರಾಸ್ತವಿಕವಾಗಿ ಮಾತನಾಡಿ, ಪ್ರತಿಯೊಬ್ಬರು ಮಕ್ಕಳಿಗೆ ಯೋಗವನ್ನು ಕಲಿಸಬೇಕು. ಯೋಗ ಶಾಂತಿ ಸಹಬಾಳ್ವೆ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗಲಿದೆ. ವೈ ಬ್ರೇಕ್ ಯೋಗ ಆ್ಯಪ್ನ್ನು ಡೌನ್ಲೋಡ್ ಮಾಡಿಕೊಂಡು ಪ್ರತಿಯೊಬ್ಬರೂ ಯೋಗ ಮಾಡುವುದನ್ನು ಕಲಿಯಬಹುದು ಎಂದರು.ನಗರಸಭೆ ಅಧ್ಯಕ್ಷ ರವಿರಾಜ ಚಂದ್ರ ಅಂಕೋಲೆಕರ್, ಜಿಪಂ ಸಿಇಒ ಈಶ್ವರ ಕಾಂದೂ, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಬ್ರಹ್ಮಕುಮಾರಿ ಕೇಂದ್ರದ ಕವಿತಾ, ಪತಂಜಲಿ ಯೋಗ ಕೇಂದ್ರದ ಪ್ರೇರಣ ನಾಯ್ಕ, ಡಾ.ಅನು ಜಯಪ್ರಕಾಶ್, ಡಾ. ತಾರನಾಥ್ ಎಂ. ಹರಿಕಾಂತ, ಎಲ್.ಕೆ. ನಾಯ್ಕ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಪೊಲೀಸ್ ಸಿಬ್ಬಂದಿ, ಎನ್.ಸಿಸಿ ವಿದ್ಯಾರ್ಥಿಗಳು ಮತ್ತಿತರರು ಭಾಗವಹಿಸಿ, ಯೋಗಾಭ್ಯಾಸ ಮಾಡಿದರು.