ಕಾವೇರುತ್ತಿದೆ ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆ : ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಾನಾ ಕಸರತ್ತು

KannadaprabhaNewsNetwork | Updated : Aug 13 2024, 05:28 AM IST

ಸಾರಾಂಶ

ಒಟ್ಟು 31 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 16 ಮಂದಿ ಗೆದ್ದಿದ್ದಾರೆ. ಆದರೆ ಅದರಲ್ಲಿ 5 ಮಂದಿ ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ. ಬಿಜೆಪಿಯ 9, ಜೆಡಿಎಸ್ ನಿಂದ ಇಬ್ಬರು ಹಾಗೂ ಪಕ್ಷೇತರರಾಗಿ ನಾಲ್ವರು ನಗರಸಭೆ ಸದಸ್ಯರಿದ್ದಾರೆ. 

 ಚಿಕ್ಕಬಳ್ಳಾಪುರ :  ಚಿಕ್ಕಬಳ್ಳಾಪುರ ನಗರಸಭೆಯ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆ ಕಾವು ದಿನೇ ದಿನೆ ಏರುತ್ತಲೇ ಇದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ಗಾದಿ ಹಿಡಿಯಲು ನಾನಾ ಕಸರತ್ತುಗಳು ನಡೆಯುತ್ತಿವೆ. ಆಕಾಂಕ್ಷಿಗಳ ಪಟ್ಟಿಯೂ ದಿನೆ ದಿನೇ ಬೆಳೆಯುತ್ತಿದ್ದು ಕಾಂಗ್ರೆಸ್‌ನಲ್ಲಿ ಗೆದ್ದು ಬಿಜೆಪಿಯಲ್ಲಿ ಗುರುತಿಸಿಕೊಂಡಿರುವವರೇ ಈಗ ಎಲ್ಲರ ಕೇಂದ್ರಬಿಂದುವಾಗಿದ್ದಾರೆ.ನಗರಸಭೆ ಅಧ್ಯಕ್ಷ - ಉಪಾಧ್ಯಕ್ಷ ಎರಡನೇ ಅವದಿಗೆ ನಡೆಯುತ್ತಿರುವ ಚುನಾವಣೆ ನಾನಾ ಕಾರಣಗಳಿಂದ ಕಳೆದ ಒಂದೂವರೆ ವರ್ಷದಿಂದ ಮೀಸಲು ಪ್ರಕಟವಾಗದೇ ಖಾಲಿ ಇತ್ತು. ಈಗಿರುವ ಇನ್ನು 13 ತಿಂಗಳ ಅವಧಿಗಾಗಿ ಈಗ ಗಾದಿ ಹಿಡಿಯಲು ನಾನಾ ಕಸರತ್ತುಗಳು ನಡೆಯುತ್ತಿವೆ. ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯರ ನಡುವೆ ಪೈಪೋಟಿ ಏರ್ಪಟ್ಟಿದೆ.

ಬಹುಮತವಿದ್ದರೂ ‘ಕೈ’ಗೆ ಕಷ್ಟ

ಒಟ್ಟು 31 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 16 ಮಂದಿ ಗೆದ್ದಿದ್ದಾರೆ. ಆದರೆ ಅದರಲ್ಲಿ 5 ಮಂದಿ ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ. ಬಿಜೆಪಿಯ 9, ಜೆಡಿಎಸ್ ನಿಂದ ಇಬ್ಬರು ಹಾಗೂ ಪಕ್ಷೇತರರಾಗಿ ನಾಲ್ವರು ನಗರಸಭೆ ಸದಸ್ಯರಿದ್ದಾರೆ. ಪಕ್ಷೇತರರಲ್ಲಿ ಒಬ್ಬರು ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದಾರೆ. ಆದರೆ ಇದು ಹೆಸರಿಗಷ್ಟೇ ಸಂಖ್ಯಾಬಲವಾಗಿದ್ದರೂ ಚುನಾವಣೆ ಹೊತ್ತಿಗೆ ಈ ಬಲ ಏನಾದರೂ ಆಗಬಹುದು.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು

ಇನ್ನು ಈಗ ನಿಗದಿಯಾಗಿರುವ ಮೀಸಲಾತಿಗೆ 13ನೇ ವಾರ್ಡ್ ನ ನಿರ್ಮಲಾ ಪ್ರಭು, 7ನೇ ವಾರ್ಡ್ ನ ಸತೀಶ್, 27ನೇ ವಾರ್ಡ್ ನ ನೇತ್ರಾವತಿ, 22ನೇ ವಾರ್ಡ್ ನ ಸ್ವಾತಿ ಹಾಗೂ 2ನೇ ವಾರ್ಡ್ ನ ಸದಸ್ಯರಾದ ರತ್ನಮ್ಮ ಈ ಐವರ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದರೂ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ.ಇನ್ನು ಕಳೆದ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಗೆದ್ದು ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿರುವ ಸದಸ್ಯರು ಸಂಸದ ಡಾ.ಕೆ.ಸುಧಾಕರ್ ಅವರು ಯಾವ ಸಂದೇಶ ಕೊಡಲಿದ್ದಾರೆ ಎಂಬುದನ್ನು ಕಾದು ನೋಡುತ್ತಿದ್ದಾರೆ. 

ಸಂಸದ ಡಾ ಕೆ.ಸುಧಾಕರ್ ತಮ್ಮ ಬೆಂಬಲಿಗರನ್ನ ಕರೆದು ಆ ಸಭೆ ನಡೆಸಿ, ಆ ಸಭೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದನ್ನು ತೀರ್ಮಾನಿಸಲಿದ್ದಾರೆ. ಇಂದು ಅಥವಾ ನಾಳೆ ಸಮಾಲೋಚನಾ ಸಭೆ ನಡೆಯಲಿದೆ. ಇನ್ನು ಕಳೆದ ನಗರಸಭೆ ಚುನಾವಣೆಯಲ್ಲಿ ಸದಸ್ಯರ ಆಯ್ಕೆ ವೇಳೆ ಪ್ರಮುಖ ಪಾತ್ರ ವಹಿಸಿದ್ದ ಕಾಂಗ್ರೆಸ್ ಮುಖಂಡ ವಿನಯ್ ಶ್ಯಾಮ್ ಪ್ರಭಾವವೂ ಈ ಬಾರಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಕಳೆದ ನಗರಸಭೆ ಚುನಾವಣೆಯಲ್ಲಿ ವಿನಯ್ ಶ್ಯಾಮ್ ಹಲವು ವಾರ್ಡ್ ಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬಂದಿದ್ದರು. ಹೀಗಾಗಿ ಇಂದಿಗೂ ಕೆಲವು ಸದಸ್ಯರು ಅವರ ಮಾತಿಗೆ ಬದ್ಧರಾಗಿದ್ದಾರೆ.

ಕುತೂಹಲ ಕೆರಳಿಸುವಂತೆ ಮಾಡಿದೆ.ಈ ಮದ್ಯೆ 22 ನೇ ವಾರ್ಡಿನ ಸ್ವಾತಿ ಮಂಜುನಾಥ್ ಮಾತ್ರ ಇಗಾಗಲೆ ನಾನೆ ಅಧ್ಯಕ್ಷ ಆಕಾಂಕ್ಷಿ ಎಂದು ಹೇಳಿಕೊಂಡಿದ್ದು ನಮ್ಮ ಪತ್ನಿ ಸ್ಪರ್ದೆ ವಿಚಾರದ ಬಗ್ಗೆ ಡಾ ಕೆ.ಸುಧಾಕರ್ ಗೂ ತಿಳಿಸಲಾಗಿದೆ ನನ್ನ ಪತ್ನಿ ಸೇರಿದಂತೆ ಸಾಕಷ್ಟು ಮಂದಿ ಆಕಾಂಕ್ಷಿಗಳಿದ್ದಾರೆ. ನಮ್ಮ ಬೆಂಬಲಿಗ ಮುಖಂಡರು ಹಾಗೂ ಸದಸ್ಯರ ಜತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ. ಇನ್ನೂ ಕಾಂಗ್ರೆಸ್‌ನಿಂದ ಗೆದ್ದು ಶಾಸಕ ಪ್ರದೀಪ್ ಈಶ್ವರ್ ವಿರುದ್ದ ಗುಡುಗಿರುವ 31 ನೇ ವಾರ್ಡಿನ ಸದಸ್ಯೆ ಮೀನಾಕ್ಷಿಯ ಪತಿ ಮಾಜಿ ನಗರಸಭಾ ಸದಸ್ಯ ಮಿಲ್ಟನ್ ವೆಂಕಟೇಶ್ ಶಾಸಕರು ಸೂಚಿಸುವ ಅಭ್ಯರ್ಥಿ ವಿರುದ್ದವೇ ನನ್ನ ಮತ ಹಾಕುತ್ತೇನೆ ಎನ್ನುತ್ತಾರೆ..

Share this article