ವಯನಾಡಿಗೆ ಪ್ರಿಯಾಂಕಾ: ರಾಜೀವ್‌ ಚಂದ್ರಶೇಖರ್ ಕಿಡಿ

KannadaprabhaNewsNetwork |  
Published : Jun 19, 2024, 01:02 AM IST
 ರಾಜೀವ್‌ ಚಂದ್ರಶೇಖರ್ | Kannada Prabha

ಸಾರಾಂಶ

ಪ್ರಿಯಾಂಕಾ ಗಾಂಧಿ ಅವರಿಗೆ ಕೇರಳದ ವಯನಾಡ್‌ ಕ್ಷೇತ್ರವನ್ನು ಸೋದರ ರಾಹುಲ್‌ ಗಾಂಧಿ ಬಿಟ್ಟುಕೊಟ್ಟಿರುವ ಬಗ್ಗೆ ಬಿಜೆಪಿ ಕಿಡಿ ಕಾರಿದ್ದು, ಇದು ಕಾಂಗ್ರೆಸ್‌ ‘ರಾಜವಂಶದ ರಾಜಕೀಯ’ ಎಂದು ಟೀಕಿಸಿದೆ.

ತಿರುವನಂತಪುರಂ: ಪ್ರಿಯಾಂಕಾ ಗಾಂಧಿ ಅವರಿಗೆ ಕೇರಳದ ವಯನಾಡ್‌ ಕ್ಷೇತ್ರವನ್ನು ಸೋದರ ರಾಹುಲ್‌ ಗಾಂಧಿ ಬಿಟ್ಟುಕೊಟ್ಟಿರುವ ಬಗ್ಗೆ ಬಿಜೆಪಿ ಕಿಡಿ ಕಾರಿದ್ದು, ಇದು ಕಾಂಗ್ರೆಸ್‌ ‘ರಾಜವಂಶದ ರಾಜಕೀಯ’ ಎಂದು ಟೀಕಿಸಿದೆ.

ಮಾಜಿ ಕೇಂದ್ರ ಸಚಿವ, ಬಿಜೆಪಿ ನಾಯಕ ರಾಜೀವ್‌ ಚಂದ್ರಶೇಖರ್‌ ಮಾತನಾಡಿ, ‘ಕಾಂಗ್ರೆಸ್‌ ಸಾರ್ವಜನಿಕರಿಗೆ ದ್ರೋಹ ಬಗೆದು ತನ್ನ ಉದ್ದೇಶ ಮರೆಮಾಚುತ್ತಿದೆ. ರಾಹುಲ್ ಬೇರೆ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ವಿಚಾರವನ್ನು ನಾಚಿಕೆಯಿಲ್ಲದೆ ಮುಚ್ಚಿಟ್ಟಿದ್ದರು. ಈ ಮೂಲಕ ತಮ್ಮ ಕುಟುಂಬದ ಒಬ್ಬೊಬ್ಬರನ್ನೇ ವಯನಾಡಿನ ಮತದಾರರ ಮೇಲೆ ಹೇರುವುದು ಕಾಂಗ್ರೆಸ್‌ನ ನಾಚಿಕೆಗೇಡಿತನ’ ಎಂದಿದ್ದಾರೆ.

ರಾಜೀವ್ ಹೇಳಿಕೆಗೆ ಕಾಂಗ್ರೆಸ್‌ ನಾಯಕ ಪವನ್ ಖೇರಾ ಮೋದಿ ಹೆಸರು ಪ್ರಸ್ತಾಪಿಸಿ ತಿರುಗೇಟು ನೀಡಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ವಾರಾಣಸಿಯಲ್ಲಿ ಸ್ಪರ್ಧಿಸುವ ಬಗ್ಗೆ ನಾಚಿಕೆಯಿಲ್ಲದೆ ವಡೋದರ ಜನತೆಯಿಂದ ಮುಚ್ಚಿಟ್ಟಿದ್ದರು’ ಎಂದು ವ್ಯಂಗ್ಯವಾಡಿದ್ದಾರೆ.

2014ರ ಲೋಕಸಭೆ ಚುನಾವಣೆಯಲ್ಲಿ ವಾರಣಾಸಿ ಮತ್ತು ವಡೋದರ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಮೋದಿ ಎರಡರಲ್ಲೂ ಗೆಲುವು ಕಂಡಿದ್ದರು. ಬಳಿಕ ವಾರಾಣಸಿಯನ್ನು ಆಯ್ಕೆ ಮಾಡಿಕೊಂಡು ಮೋದಿ ವಡೋದರಾ ಬಿಟ್ಟು ಕೊಟ್ಟಿದ್ದರು. ಇದೇ ವಿಚಾರ ಪ್ರಸ್ತಾಪಿಸಿ ಖೇರಾ ತಿರುಗೇಟು ನೀಡಿದ್ದಾರೆ.

ಪ್ರಿಯಾಂಕಾ ವಿರುದ್ಧ ವಯನಾಡ್‌ನಲ್ಲಿ ಸ್ಪರ್ಧೆ: ಸಿಪಿಐ ಘೋಷಣೆ

ತಿರುವನಂತಪುರ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಯನಾಡ್‌ ಲೋಕಸಭಾ ಕ್ಷೇತ್ರ ತೊರೆದು ಸೋದರಿ ಪ್ರಿಯಾಂಕಾ ಗಾಂಧಿಗೆ ಬಿಟ್ಟುಕೊಟ್ಟಿರುವ ಬೆನ್ನಲ್ಲೇ ಪ್ರಿಯಾಂಕಾ ವಿರುದ್ಧ ತನ್ನ ಅಭ್ಯರ್ಥಿಯನ್ನು ಉಪಚುನಾವಣೆಯಲ್ಲಿ ಕಣಕ್ಕಿಳಿಸುವುದಾಗಿ ಇಂಡಿಯಾ ಕೂಟದ ಅಂಗಪಕ್ಷ ಸಿಪಿಐ ಪ್ರಕಟಿಸಿದೆ. ಮೊನ್ನೆಯ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ವಿರುದ್ಧವೂ ತನ್ನ ಅಭ್ಯರ್ಥಿಯಾಗಿ ಆ್ಯನಿ ರಾಜಾ ಅವರನ್ನು ಸಿಪಿಐ ಕಣಕ್ಕಿಳಿಸಿತ್ತು. ಆದರೆ ಆ್ಯನಿ ವಿರುದ್ಧ ರಾಹುಲ್‌ 3.6 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು.

ಪಕ್ಷದ ರಾಜ್ಯ ಕಾರ್ಯದರ್ಶಿ ಬಿನೋಯ್‌ ವಿಶ್ವಂ ಸುದ್ದಿಗಾರರೊಂದಿಗೆ ಮಾತನಾಡಿ, ‘ಎಲ್‌ಡಿಎಫ್‌ ಮೈತ್ರಿಕೂಟದಲ್ಲಿ ವಯನಾಡ್‌ ಕ್ಷೇತ್ರವನ್ನು ಸಿಪಿಐಗೆ ಬಿಟ್ಟುಕೊಡಲಾಗಿದೆ. ಹಾಗಾಗಿ ನಾವು ಖಂಡಿತ ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ವಿರುದ್ಧ ಸೆಣಸುತ್ತೇವೆ. ನಾವು ಯಾವುದೇ ಕಾರಣಕ್ಕೂ ಬಿಜೆಪಿಗೆ ಗೆಲುವಿನ ಅವಕಾಶ ಬಿಟ್ಟುಕೊಡುವುದಿಲ್ಲ’ ಎಂದು ತಿಳಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

''ದ್ವೇಷ ಭಾಷಣ ಕಾಯ್ದೆ : ಜಾತಿ ನಿಂದನೆಯ ರೀತಿ ದುರ್ಬಳಕೆ ಆಗಬಹುದು''
ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!