ಜನರ ಭಾವನೆ ಮೇಲೆ ಬಿಜೆಪಿ ರಾಜಕಾರಣ: ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : Apr 21, 2024, 02:19 AM ISTUpdated : Apr 21, 2024, 04:44 AM IST
20ಕೆಎಂಎನ್ ಡಿ21 | Kannada Prabha

ಸಾರಾಂಶ

ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅಳುವ ಮೂಲಕ ಜನರ ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡುತ್ತಾರೆ. ಮತದಾರರನ್ನು ಮರಳು ಮಾಡಲು ಅವರು ಬಳಸುವ ಕೊನೆ ಅಸ್ತ್ರ ವೇದಿಕೆಗಳಲ್ಲಿ ಕಣ್ಣಿರು ಸುರಿಸುವುದು.

 ಕೆ.ಆರ್.ಪೇಟೆ :  ಬಿಜೆಪಿ ಜನರ ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಿದೆ. ಧರ್ಮ ಧರ್ಮಗಳ ನಡುವೆ ಮತ್ತು ಜಾತಿ ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸಿದೆ. ಜನ ಭಾವನಾತ್ಮಕ ವಿಚಾರಗಳಿಗೆ ಬೆಲೆ ಕೊಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಪುರಸಭಾ ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕ ನೆನಪಾಗುವುದು ಚುನಾವಣೆ ಸಂದರ್ಭಗಳಲ್ಲಿ ಮಾತ್ರ. ರಾಜ್ಯದಲ್ಲಿ ಅತೀ ವೃಷ್ಟಿ, ಬರಗಾಲ ಬಂದಾಗ ಒಮ್ಮೆಯೂ ಕರ್ನಾಟಕ್ಕೆ ಬಂದು ಜನರ ಕಷ್ಠ ಸುಖ ಕೇಳಲಿಲ್ಲ. ಮೋದಿ ಈಗ ರಾಜ್ಯದ ಉದ್ದಗಲಕ್ಕೂ ಸಂಚರಿಸುತ್ತಿದ್ದಾರೆ ಎಂದು ಟೀಕಿಸಿದರು.

ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅಳುವ ಮೂಲಕ ಜನರ ಅನುಕಂಪ ಗಿಟ್ಟಿಸುವ ಪ್ರಯತ್ನ ಮಾಡುತ್ತಾರೆ. ಮತದಾರರನ್ನು ಮರಳು ಮಾಡಲು ಅವರು ಬಳಸುವ ಕೊನೆ ಅಸ್ತ್ರ ವೇದಿಕೆಗಳಲ್ಲಿ ಕಣ್ಣಿರು ಸುರಿಸುವುದು ಎಂದು ಕಿಡಿಕಾರಿದರು.

ದೇವೇಗೌಡ ಮತ್ತು ಕುಮಾರಸ್ವಾಮಿ ರೈತರ ಮಕ್ಕಳು ಎನ್ನುವುದು ನಿಜ. ಆದರೆ, ಅವರಿಗೆ ರೈತ ಸಮುದಾಯಕ್ಕೆ ಯಾವ ಅನುಕೂಲ ಮಾಡಿದ್ದಾರೆ. ಹಿಂದೆಲ್ಲಾ ಮೋದಿಯನ್ನು ಹೀನಾಯವಾಗಿ ಬೈಯುತ್ತಿದ್ದ ದೇವೇಗೌಡರು ನಮ್ಮ ಗ್ಯಾರಂಟಿ ಯೋಜನೆಗಳ ಅನುಷ್ಟಾನದಿಂದ ಸೋಲುವ ಭೀತಿಗೆ ಒಳಗಾಗಿ ಕೋಮುವಾದಿಗಳ ಜೊತೆ ಕೈಜೋಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಜೊತೆ ದೇವೇಗೌಡರು ಚೆನ್ನಾಗಿದ್ದಾರೆ. ಅವರು ಏಕೆ ಮೋದಿ ಮೇಲೆ ಒತ್ತಡ ಹಾಕಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿಲ್ಲ. ಬಿಜೆಪಿ ಬೆಂಬಲಿತ ಸಂಸದೆ ಸುಮಲತಾ ಸೇರಿ 27 ಜನ ಬಿಜೆಪಿಗರನ್ನು ನೀವು ಲೋಕಸಭೆಗೆ ಕಳುಹಿಸಿದ್ದೀರಿ. ಇವರು ಒಮ್ಮೆಯಾದರೂ ರಾಜ್ಯದ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಿದ್ದಾರಾ. ಯಾವುದೇ ಕಾರಣಕ್ಕೂ ದೇವೇಗೌಡರ ಕುಟುಂಬದ ಕಣ್ನೀರಿಗೆ ಕ್ಷೇತ್ರದ ಜನ ಮರುಳಾಗಬಾರದೆಂದು ಮನವಿ ಮಾಡಿದರು.

ಸರ್ಕಾರ ಬಸವಣ್ಣನವರನ್ನು ರಾಜ್ಯದ ಸಂಸ್ಕೃತಿಕ ನಾಯಕ ಎಂದು ಘೋಷಿಸಿದ್ದೇವೆ. ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ , ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಿದ್ದೇವೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟವರು ನಾವು. ಅಧಿಕಾರದಲ್ಲಿದ್ದಾಗ ದೇವೇಗೌಡರಾಗಲೀ, ಯಡಿಯೂರಪ್ಪವರಾಗಲೀ ಅಥವಾ ಕುಮಾರಸ್ವಾಮಿಯವರಾಗಲೀ ಇದನ್ನು ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

PREV

Recommended Stories

ಅರಸು ಸಾಮಾಜಿಕ ನ್ಯಾಯದ ಹರಿಕಾರ : ಮುಖ್ಯಮಂತ್ರಿ ಸಿದ್ದರಾಮಯ್ಯ
ಮಹದೇವಪುರ ಮತಗಳವು ವಿರುದ್ಧ ಎಸ್‌ಐಟಿ ತನಿಖೆ ಕೋರಿ ಸುಪ್ರೀಂಗೆ ಅರ್ಜಿ