ಲಕ್ಷ್ಮಣ ಸವದಿಗೆ ಬಿಜೆಪಿ ಬೀದರ್‌ ಟಿಕೆಟ್‌ ಆಫರ್‌?

KannadaprabhaNewsNetwork |  
Published : Feb 05, 2024, 01:50 AM ISTUpdated : Feb 05, 2024, 12:02 PM IST
Lakshman Savadi

ಸಾರಾಂಶ

ಪಕ್ಷ ತೊರೆದು ಕಾಂಗ್ರೆಸ್‌ಗೆ ವಲಸೆ ಹೋಗಿದ್ದ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಲಕ್ಷ್ಮಣ ಸವದಿ ಅವರನ್ನು ಬಿಜೆಪಿಗೆ ವಾಪಸ್ ಕರೆತಂದು ಬೀದರ್‌ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪಕ್ಷ ತೊರೆದು ಕಾಂಗ್ರೆಸ್‌ಗೆ ವಲಸೆ ಹೋಗಿದ್ದ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಲಕ್ಷ್ಮಣ ಸವದಿ ಅವರನ್ನು ಬಿಜೆಪಿಗೆ ವಾಪಸ್ ಕರೆತಂದು ಬೀದರ್‌ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆದಿದೆ.

ಈ ಸಂಬಂಧ ಬಿಜೆಪಿ ನಾಯಕರು ಸವದಿ ಅವರಿಗೆ ಪ್ರಸ್ತಾಪ ರವಾನಿಸಿದ್ದು, ಮನವೊಲಿಸುವ ಪ್ರಯತ್ನವನ್ನೂ ನಡೆಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ವಾಪಸ್ ಕರೆತಂದ ಬೆನ್ನಲ್ಲೇ ಲಕ್ಷ್ಮಣ ಸವದಿ ಅವರನ್ನೂ ಕರೆತರುವ ಪ್ರಯತ್ನ ಬಿಜೆಪಿ ಪಾಳೆಯದಲ್ಲಿ ಜೋರಾಗಿಯೇ ನಡೆಯುತ್ತಿದೆ. 

ಈಗಾಗಲೇ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರು ಸವದಿ ಅವರೊಂದಿಗೆ ಮಾತುಕತೆಯನ್ನೂ ನಡೆಸಿದ್ದು, ಸತತ ಸಂಪರ್ಕದಲ್ಲಿದ್ದು ಮನವೊಲಿಸುವ ಪ್ರಯತ್ನ ಮುಂದುವರೆಸಿದ್ದಾರೆ.

ಬೀದರ್ ಲೋಕಸಭಾ ಕ್ಷೇತ್ರದ ಹಾಲಿ ಸದಸ್ಯರಾಗಿರುವ ಕೇಂದ್ರ ಸಚಿವ ಭಗವಂತ್ ಖೂಬಾ ಅವರಿಗೆ ಮತ್ತೊಮ್ಮೆ ಟಿಕೆಟ್ ನೀಡುವುದಕ್ಕೆ ಸ್ಥಳೀಯ ಬಿಜೆಪಿ ಶಾಸಕರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 

ಶಾಸಕ ಪ್ರಭು ಚವ್ಹಾಣ್ ಅವರಂತೂ ಬಹಿರಂಗವಾಗಿಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕಾಲಿಗೆ ಎರಗಿ ಮನವಿ ಮಾಡಿದ್ದರು. ಚವ್ಹಾಣ್ ಅವರ ಅಭಿಪ್ರಾಯಕ್ಕೆ ಹಲವು ಶಾಸಕರ ಸಹಮತ ವ್ಯಕ್ತಪಡಿಸಿದ್ದಾರೆ.

ಹೀಗಾಗಿ, ಈಗ ರಾಜ್ಯ ಬಿಜೆಪಿ ನಾಯಕರು ಖೂಬಾ ಅವರನ್ನು ಬದಲಿಸುವುದಾದರೆ ಪರ್ಯಾಯವಾಗಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬ ಚಿಂತನೆ ನಡೆಸಿದ್ದಾರೆ.

ಆಗ ಅವರಿಗೆ ಕಾಣಿಸಿದ್ದು ಕಾಂಗ್ರೆಸ್ಸಿನ ಲಕ್ಷ್ಮಣ ಸವದಿ.ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಮರಾಠಾ ಭಾಷಿಕ ಮತದಾರರೂ ನಿರ್ಣಾಯಕರಾಗಿದ್ದಾರೆ. 

ಜತೆಗೆ ಲಿಂಗಾಯತ ಸಮುದಾಯವೂ ಪ್ರಮುಖ ಪಾತ್ರ ವಹಿಸಲಿದೆ. ಈ ಎರಡೂ ಅಂಶಗಳ ಮೇಲೆ ಲಕ್ಷ್ಮಣ ಸವದಿ ಅವರು ಸೂಕ್ತ ಅಭ್ಯರ್ಥಿಯಾಗಬಲ್ಲರು ಎಂಬ ಲೆಕ್ಕಾಚಾರ ಬಿಜೆಪಿ ಪಾಳೆಯದಲ್ಲಿ ನಡೆದಿದೆ ಎನ್ನಲಾಗಿದೆ.

ಬೀದರ್‌ನಲ್ಲಿ ಛಾಪು ಹೊಂದಿರುವ ಸವದಿ: ಹಿಂದೆ ಸವದಿ ಅವರು ಬಿಜೆಪಿಯಲ್ಲಿದ್ದಾಗ ನಡೆದ ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. 

ಆ ಕ್ಷೇತ್ರದಲ್ಲಿ ಬಿಜೆಪಿ ಗೆಲುವನ್ನೂ ಸಾಧಿಸಿತ್ತು. ಈ ಕಾರಣದಿಂದ ಸವದಿ ಅವರು ಬೀದರ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿದೆ.

ಬೆಳಗಾವಿಯಲ್ಲಿ ಸ್ಪರ್ಧೆಗೆ ಒಲವು ತೋರಿದ್ದ ಸವದಿ?
ಈ ನಡುವೆ ಸವದಿ ಅವರೊಂದಿಗೆ ಕಳೆದ ವಾರ ನಡೆದ ಬೆಳಗಾವಿ ಬಿಜೆಪಿ ನಾಯಕರ ಮಾತುಕತೆ ವೇಳೆ ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ಬಂದಾಗ ಬೆಳಗಾವಿ ಲೋಕಸಭಾ ಕ್ಷೇತ್ರದ ಬಗ್ಗೆ ಒಲವು ವ್ಯಕ್ತವಾಗಿತ್ತು. 

ಆದರೆ, ಅಲ್ಲಿಂದ ಟಿಕೆಟ್ ನೀಡುವುದಕ್ಕೆ ಪಕ್ಷದ ನಾಯಕರಾದ ಜಾರಕಿಹೊಳಿ ಸಹೋದರರು ಒಪ್ಪುವುದಿಲ್ಲ ಎಂಬ ಕಾರಣಕ್ಕಾಗಿ ಬಿಜೆಪಿ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ತಿಳಿದು ಬಂದಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಎಸ್ಕಾಂಗಳಿಂದ ₹110 ಕೋಟಿ ಹೆಚ್ಚುವರಿ ವೆಚ್ಚ : ಸಿಎಜಿ ವರದಿ
ಶಕ್ತಿಯಡಿ ಸರ್ಕಾರದಿಂದ ಸಾರಿಗೆ ನಿಗಮಕ್ಕೆ ₹4000 ಕೋಟಿ ಬಾಕಿ: ರೆಡ್ಡಿ