;Resize=(412,232))
ಮೈಸೂರು : ನನ್ನ ಪ್ರಕಾರ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರುತ್ತಾರೆ. ಸಿಎಂ ಬದಲಾವಣೆ ಹೈಕಮಾಂಡ್ ಮುಂದೆ ಇಲ್ಲ. ಎಐಸಿಸಿ ಸೆಕ್ರೆಟ್ರಿ ಈಗಾಗಲೇ ಇದನ್ನ ಸ್ಪಷ್ಟಪಡಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಕೇಂದ್ರ ಓಬಿಸಿ ಕಮಿಟಿಗೆ ಸಿದ್ದರಾಮಯ್ಯ ನೇಮಕ ಪ್ರಶ್ನೆಗೆ ಕೆಂಡಮಂಡಲರಾದ ಸಿಎಂ ಪುತ್ರ ಡಾ.ಯತೀಂದ್ರ ಅವರು, ಯಾರ್ರಿ ಹೇಳಿದ್ದು? ಮುಖ್ಯಮಂತ್ರಿ ಆದವರನ್ನ ಓಬಿಸಿ ಕಮಿಟಿಗೆ ಕಳುಹಿಸಿದ್ರೆ ಪ್ರಮೋಷನ್ನಾ? ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗದ ನಾಯಕ. ದೇಶದಲ್ಲಿರುವ ಹಿಂದುಳಿದ ವರ್ಗಗಳ ನಾಯಕರು ಆ ಕಮಿಟಿಯಲ್ಲಿದ್ದಾರೆ. ಹೀಗಾಗಿ, ಅಲ್ಲಿ ಸದಸ್ಯರಾಗಿರುತ್ತಾರೆ. ಅದು ಪ್ರಮೋಷನಾ? ನೀವೇ ಕಾಮನ್ ಸೆನ್ಸ್ ಉಪಯೋಗಿಸಿ ಎಂದರು.
ಅದಕ್ಕೂ ಸಿಎಂ ಬದಲಾವಣೆ ವಿಚಾರಕ್ಕೂ ಸಂಬಂಧ ಕಲ್ಪಿಸುವ ಅಗತ್ಯ ಇಲ್ಲ. ನೀವುಗಳೇ ಅದನ್ನ ಊಹೆ ಮಾಡಿಕೊಡರೆ ಹೇಗೆ? ಚರ್ಚೆ ಮಾಡುವವರಿಗೂ ಕಾಮನ್ ಸೆನ್ಸ್ ಇರಬೇಕಲ್ವಾ? ಯಾವ ಆಧಾರದಲ್ಲಿ ಈಗೆ ಹೇಳುತ್ತಿದ್ದಾರೆ? ಬಿಜೆಪಿ ಹೇಳೋದನ್ನೆಲ್ಲ ನೀವು ನಂಬಿದ್ರೆ ಆಗಲ್ಲ. ನಮ್ಮ ಸರ್ಕಾರ ಬಂದಾಗಿಂದ ಸರ್ಕಾರ ಬದಲಾಗುತ್ತೆ, ಸಿಎಂ ಬದಲಾಗ್ತಾರೆ ಅಂತಿದ್ದಾರೆ ಎಂದು ಅವರು ಕಿಡಿಕಾರಿದರು.
ನವಂಬರ್ ತಿಂಗಳಿಗೆ ನಮ್ಮ ತಂದೆ ಎರಡೂವರೆ ವರ್ಷ ಪೂರೈಕೆ ಮಾಡ್ತಾರೆ. ಹೀಗಾಗಿ, ಸಿಎಂ ಆಸೆ ಇಟ್ಟುಕೊಂಡಿರೋರು ಕೇಳ್ತಾರೆ. ಕೇಳೋದ್ರಲ್ಲ ತಪ್ಪಿಲ್ಲ, ತೀರ್ಮಾನ ಮಾಡೋದು ಹೈಕಮಾಂಡ್ ಹಾಗೂ ಶಾಸಕರು. ಸರ್ಕಾರ ಬಂದಾಗಿನಿಂದ ಈ ಪ್ರಶ್ನೆಗೆ ಉತ್ತರ ಕೊಡುತ್ತಿದ್ದೇನೆ, ದಯವಿಟ್ಟು ಆ ಪ್ರಶ್ನೆ ಕೇಳಬೇಡಿ ಎಂದರು.
ರಂಭಾಪುರಶ್ರೀಗಳ ಹೇಳಿಕೆಗೆ ತಿರುಗೇಟು:
ಉಚಿತ ಭಾಗ್ಯಗಳಿಂದ ಜನ ಸೋಮಾರಿ ಆಗುತ್ತಿದ್ದಾರೆಂಬ ರಂಭಾಪುರಿ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಡಾ. ಯತೀಂದ್ರ ಅವರು, ಇದನ್ನ ಈಗಲ್ಲ, ಕಳೆದ ಬಾರಿ ಭಾಗ್ಯಗಳನ್ನ ಕೊಟ್ಟಾಗಲೂ ಈಗೇ ಹೇಳುತ್ತಿದ್ರು. ಯಾರಾದ್ರು ಸೋಮಾರಿಗಳಾದ್ರಾ? ಆಗಲ್ಲ. ಬಡವರು ಹೊಟ್ಟೆ ತುಂಬ ಊಟ ತಿಂದು ಸೋಂಬೇರಿ ಆಗೋದಿಲ್ಲ. ಕೇವಲ ಅಕ್ಕಿ ಕೊಟ್ಟ ತಕ್ಷಣ ಎಲ್ಲ ಸಿಗುತ್ತಾ? ಜೀವನಕ್ಕಾಗಿ ಅವರು ದುಡಿಯುತ್ತಾರೆ ಎಂದು ತಿರುಗೇಟು ನೀಡಿದರು.
ಇದು ತಲತಲಾಂತರದಿಂದ ಬೇರೊಬ್ಬರ ಕೈಲಿ ದುಡಿಸಿಕೊಂಡು ಸುಖವಾಗಿ ಬಂದಿರೋರು ಹೇಳುವ ಮಾತುಗಳು. ಇದೇ ಪ್ರಶ್ನೆಯನ್ನ ಶ್ರೀಮಂತರ ಸಾಲ ಮನ್ನಾ ಮಾಡುವ ಕೆಂದ್ರ ಸರ್ಕಾರಕ್ಕೆ ಕೇಳಿ. ಆವಾಗ ಕೇಳದ ಇವರಿಗೆ ಬಡವರಿಗೆ ಕೊಟ್ಟಾಗೆ ಯಾಕೆ ಕಣ್ಣುರಿ. ಯಾರು ಏನೇ ಟೀಕೆ ಮಾಡಿದ್ರು ನಾವು ಕೊಟ್ಟೇ ಕೊಡ್ತೀವಿ ಎಂದರು.