ಮುಸ್ಲಿಂ ಮೀಸಲಿಗಾಗಿ ಕರ್ನಾಟಕ ಕಾಂಗ್ರೆಸ್‌ ಫತ್ವಾ: ಮೋದಿ ಕಿಡಿ

KannadaprabhaNewsNetwork | Updated : May 03 2024, 04:14 AM IST

ಸಾರಾಂಶ

ಇತರೆ ಹಿಂದುಳಿದ ವರ್ಗದ (ಒಬಿಸಿ) ಕೋಟಾದಲ್ಲಿ ಮುಸ್ಲಿಮರಿಗೆ ಮೀಸಲು ನೀಡಲು ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ರಾತ್ರೋರಾತ್ರಿ ಫತ್ವಾ ಹೊರಡಿಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.

ಜಾಮ್‌ನಗರ: ಇತರೆ ಹಿಂದುಳಿದ ವರ್ಗದ (ಒಬಿಸಿ) ಕೋಟಾದಲ್ಲಿ ಮುಸ್ಲಿಮರಿಗೆ ಮೀಸಲು ನೀಡಲು ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ರಾತ್ರೋರಾತ್ರಿ ಫತ್ವಾ ಹೊರಡಿಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ. ಈ ಮೂಲಕ ಮುಸ್ಲಿಮರಿಗೆ ಮೀಸಲು ವಿರುದ್ಧ ಸತತ 11ನೇ ದಿನವೂ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ.

ಗುರುವಾರ ಗುಜರಾತ್‌ನ ಜಾಮ್‌ನಗರದಲ್ಲಿ ಬಿಜೆಪಿ ಚುನಾವಣಾ ರ್‍ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ ಮೋದಿ, ‘2004ರ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್‌ ಎರಡು ಕಾರ್ಯತಂತ್ರಗಳ ಮೂಲಕ ಹೋರಾಡುತ್ತಿದೆ. ಮೊದಲನೆಯದ್ದು ಜಾತಿಯ ಹೆಸರಲ್ಲಿ ಸಮಾಜ ವಿಭಜನೆ ಮಾಡುವುದು. ಎರಡನೆಯದ್ದು, ಓಲೈಕೆ ರಾಜಕಾರಣದ ಮೂಲಕ ಮತಬ್ಯಾಂಕ್‌ ಧ್ರುವೀಕರಣ ಮಾಡುವುದು’ ಎಂದು ಆರೋಪಿಸಿದರು.

ಧರ್ಮದ ಆಧಾರದಲ್ಲಿ ಮೀಸಲು ನೀಡಲು ಸಂವಿಧಾನವನ್ನೇ ಬದಲಿಸಲು ಕಾಂಗ್ರೆಸ್‌ ಯೋಜಿಸಿದೆ. ಈ ಕಾರಣಕ್ಕಾಗಿಯೇ ಅದು ದಲಿತರು, ಆದಿವಾಸಿಗಳು, ಒಬಿಸಿಗಳ ಮೀಸಲು ಕಡಿತ ಮಾಡಲಾಗುವುದು ಎಂಬ ಸುಳ್ಳು ಸುದ್ದಿ ಹಬ್ಬಿಸಿ ಅದನ್ನು ಚುನಾವಣಾ ಅಜೆಂಡಾ ಮಾಡಿತು ಎಂದು ಮೋದಿ ದೂರಿದರು.ಕಾಂಗ್ರೆಸ್‌ ಎಸ್‌ಸಿ, ಎಸ್ಟಿ ಮತ್ತು ಒಬಿಸಿಗಳ ಮೀಸಲು ಕಸಿದು ಮುಸ್ಲಿಮರಿಗೆ ನೀಡಲು ಪ್ರಯತ್ನಿಸುತ್ತಿದೆ.

 ಕರ್ನಾಟಕದಲ್ಲಿ ಒಬಿಸಿಗಳಿಗೆ ನೀಡಲಾಗಿದ್ದ ಶೇ.27ರಷ್ಟು ಮೀಸಲನ್ನು ತನ್ನ ವೋಟ್‌ ಬ್ಯಾಂಕ್‌ ಅನ್ನು ಓಲೈಸುವ ಸಲುವಾಗಿ ಕಾಂಗ್ರೆಸ್‌ ರಾತ್ರೋರಾತ್ರಿ ಲೂಟಿ ಮಾಡಿತು. ಸಂವಿಧಾನದ ರಚನೆಕಾರರೇ ಧರ್ಮಾಧಾರಿತ ಮೀಸಲಿಗೆ ವಿರೋಧ ವ್ಯಕ್ತಪಡಿಸಿರುವಾಗ ಅದನ್ನೇ ಜಾರಿ ಮಾಡಲು ಕಾಂಗ್ರೆಸ್‌ ಮುಂದಾಗಿದೆ ಎಂದು ಪ್ರಧಾನಿ ಆರೋಪಿಸಿದರು.ದೇಶ ಇಂಥ ಅಪಾಯವನ್ನು ಎದುರಿಸುತ್ತಿರುವಾಗ ಇಂಥದ್ದನ್ನೆಲ್ಲಾ ನೋಡಿಕೊಂಡು ಮೋದಿ ಶಾಂತವಾಗಿಲಿ ಇರಲು ಸಾಧ್ಯವೇ? ಈ ಕಾರಣಕ್ಕಾಗಿಯೇ ನಾನು ಕಾಂಗ್ರೆಸ್‌ ವಿರುದ್ಧ ಧ್ವನಿ ಎತ್ತಿದ್ದು, ನಾನು ಜೀವಂತ ಇರುವವರೆಗೂ ದೇಶವನ್ನು ಧರ್ಮದ ಆಧಾರದಲ್ಲಿ ಬಿಡುವುದಿಲ್ಲ ಎಂದು ಮೋದಿ ಮತ್ತೊಮ್ಮೆ ಗುಡುಗಿದರು.

Share this article