ಕಾಂಗ್ರೆಸ್‌ನಿಂದ ಬಿಜೆಪಿ- ದಳ ವಿರುದ್ಧ ಹಗರಣಗಳ ಪ್ರತ್ಯಸ್ತ್ರ!

KannadaprabhaNewsNetwork |  
Published : Jul 17, 2024, 01:27 AM IST
ಬಿಜೆಪಿ | Kannada Prabha

ಸಾರಾಂಶ

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ಮೇಲೆ ಮುಗಿಬಿದ್ದಿರುವ ಬಿಜೆಪಿ ಹಾಗೂ ಜೆಡಿಎಸ್‌ ವಿರುದ್ಧ ಆ ಪಕ್ಷಗಳು ಅಧಿಕಾರದಲ್ಲಿದ್ದಾಗ ನಿಗಮ-ಮಂಡಳಿಗಳಲ್ಲಿ ನಡೆದ ಅಕ್ರಮಗಳ ಕುರಿತ ತನಿಖೆಗೆ ಚುರುಕು ನೀಡುವ ಪ್ರತ್ಯಸ್ತ್ರದ ಮೂಲಕ ದಾಳಿ ನಡೆಸಲು ಕಾಂಗ್ರೆಸ್‌ ಸಜ್ಜಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ಮೇಲೆ ಮುಗಿಬಿದ್ದಿರುವ ಬಿಜೆಪಿ ಹಾಗೂ ಜೆಡಿಎಸ್‌ ವಿರುದ್ಧ ಆ ಪಕ್ಷಗಳು ಅಧಿಕಾರದಲ್ಲಿದ್ದಾಗ ನಿಗಮ-ಮಂಡಳಿಗಳಲ್ಲಿ ನಡೆದ ಅಕ್ರಮಗಳ ಕುರಿತ ತನಿಖೆಗೆ ಚುರುಕು ನೀಡುವ ಪ್ರತ್ಯಸ್ತ್ರದ ಮೂಲಕ ದಾಳಿ ನಡೆಸಲು ಕಾಂಗ್ರೆಸ್‌ ಸಜ್ಜಾಗಿದೆ.

ಬಿಜೆಪಿಯ ಡಿ.ಎಸ್‌. ವೀರಯ್ಯ ಬಂಧಿತರಾಗಿರುವ ದೇವರಾಜ ಅರಸ್‌ ಟ್ರಕ್‌ ಟರ್ಮಿನಲ್‌ ನಿಗಮದ ಅಕ್ರಮ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್‌ ಆಡಳಿತದಲ್ಲಿ ನಡೆದಿದ್ದ ನಿಗಮ-ಮಂಡಳಿಗಳ ಏಳು ಹಗರಣಗಳ ತನಿಖೆಗೆ ಚುರುಕು ನೀಡಲು ಸರ್ಕಾರ ಮುಂದಾಗಿದೆ.ರಾಜ್ಯ ತನಿಖಾ ಏಜೆನ್ಸಿಗಳ ವ್ಯಾಪ್ತಿಯಲ್ಲಿರುವ ಬಿಜೆಪಿಯ ಜಗದೀಶ್‌ ಶೆಟ್ಟರ್‌, ಬಿ.ಎಸ್‌. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಗಳಲ್ಲಿ ನಡೆದಿರುವ ನಿಗಮ-ಮಂಡಳಿ ಹಗರಣಗಳು ಹಾಗೂ 2018ರ ಮೇ ತಿಂಗಳಿಂದ 2019ರ ಜುಲೈವರೆಗೆ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ನಡೆದಿರುವ ಹಗರಣಗಳ ತನಿಖೆಗೆ ವೇಗ ನೀಡುತ್ತಿದೆ.ಇನ್ನು ಕೆಲ ಪ್ರಕರಣಗಳನ್ನು ಈಗಾಗಲೇ ಸಿಬಿಐ ತನಿಖೆ ನಡೆಸುತ್ತಿದ್ದು, ಇವುಗಳನ್ನೂ ಸದನದಲ್ಲಿ ಪ್ರಸ್ತಾಪಿಸಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಮೇಲೆ ಮುಗಿಬೀಳುವ ಸಿದ್ಧತೆ ನಡೆಸಿರುವುದಾಗಿ ತಿಳಿದುಬಂದಿದೆ.ಯಾವ್ಯಾವ ಹಗರಣ?:2021-22 ರಿಂದ 2022-23ರವರೆಗೆ ನಡೆದ ದೇವರಾಜ ಅರಸ್‌ ಟ್ರಕ್‌ ಟರ್ಮಿನಲ್‌ ನಿಗಮದಲ್ಲಿ 47 ಕೋಟಿ ರು. ಅವ್ಯವಹಾರ ನಡೆದಿತ್ತು. ಪ್ರಕರಣದಲ್ಲಿ 3 ಕೋಟಿ ರು. ನಿಗಮದ ಮಾಜಿ ಅಧ್ಯಕ್ಷರಾದ ಡಿ.ಎಸ್‌. ವೀರಯ್ಯ ಅವರ ಸ್ವಂತ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಡಿ.ಎಸ್‌. ವೀರಯ್ಯ ಹಾಗೂ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಶಂಕರಪ್ಪ ಅವರನ್ನು ಬಂಧಿಸಲಾಗಿದೆ.ಉಳಿದಂತೆ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ವಾಲ್ಮೀಕಿ ನಿಗಮದ ಮಾದರಿಯಲ್ಲೇ 2022ರ ಫೆಬ್ರುವರಿಯಲ್ಲಿ 87 ಕೋಟಿ ರು.ಗಳನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಪ್ರಗತಿಯಲ್ಲಿದ್ದು, ಯಾವುದೇ ಕ್ಷಣದಲ್ಲಿ ತಪ್ಪಿತಸ್ಥರನ್ನು ಬಂಧನ ಮಾಡಿ ಬಿಜೆಪಿಗೆ ತಿರುಗೇಟು ನೀಡುವ ಸಾಧ್ಯತೆಯಿದೆ.

ಇನ್ನು 2020ರ ಜನವರಿಯಲ್ಲಿ ಕೃಷಿ ಮಾರುಕಟ್ಟೆ ಮಂಡಳಿಯ 47.16 ಕೋಟಿ ರು.ಗಳ ಸ್ಥಿರ ಠೇವಣಿ ಹಣವನ್ನು ಚಾಲ್ತಿ ಖಾತೆಗಳಿಗೆ ವರ್ಗಾವಣೆ ಮಾಡಿ ಬಳಿಕ ಖಾಸಗಿ ವ್ಯಕ್ತಿಗಳಿಗೆ ಸಂದಾಯ ಮಾಡಲಾಗಿತ್ತು.ಈ ಬಗ್ಗೆ ಕೇಂದ್ರ ಅಪರಾಧ ವಿಭಾಗ ಪ್ರಕರಣ ತನಿಖೆ ಮಾಡುತ್ತಿದೆ. ಬ್ಯಾಂಕ್‌ನವರು ಇಲಾಖೆಗೆ ಹಣ ಮರು ಪಾವತಿ ಮಾಡಿರುತ್ತಾರೆ. ಆದರೂ ಈ ವಿಚಾರವನ್ನೂ ಸದನದಲ್ಲಿ ಪ್ರಸ್ತಾಪಿಸಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಸರ್ಕಾರ ನಿರ್ಧರಿಸಿದೆ.ಇನ್ನು 2019ರ ಏಪ್ರಿಲ್‌ನಲ್ಲಿ ಕರ್ನಾಟಕ ಕರಕುಶಲ ಅಭಿವೃದ್ದಿ ನಿಗಮದ 22.43 ಕೋಟಿ ರು.ಗಳ ಸ್ಥಿರ ಠೇವಣಿ ಹಣವನ್ನು ಎಸ್‌ಬಿಐ ಬ್ಯಾಂಕ್‌ನ ಖಾತೆಗೆ ವರ್ಗಾವಣೆ ಮಾಡಿ ನಂತರ ಖಾಸಗಿ ವ್ಯಕ್ತಿಗಳಿಗೆ ಸಂದಾಯ ಮಾಡಲಾಗಿದೆ. ಈ ಪ್ರಕರಣದಲ್ಲಿ ಸಿಐಡಿ ತಂಡದವರು ಮೂರು ಚಾರ್ಜ್‌ಶೀಟ್‌ ಮಾಡಿ 2.5 ಕೋಟಿ ರು. ಮೌಲ್ಯದ ಸ್ಥಿರಾಸ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿ ಜೂನ್‌ 2018ರಲ್ಲಿ 4.95 ಕೋಟಿ ರು.ಗಳನ್ನು ಬ್ಯಾಂಕ್‌ ಖಾತೆಯಿಂದ 10 ಜನ ಖಾಸಗಿ ವ್ಯಕ್ತಿಗಳಿಗೆ ವರ್ಗಾವಣೆ ಮಾಡಲಾಗಿತ್ತು. ಆಗ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪದ್ಮನಾಭ ಅವರನ್ನು ಅಮಾನತುಗೊಳಿಸಲಾಗಿತ್ತು. ಅವರ ಮೇಲೆ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ 2022ರ ನ.10 ರಂದು ಕರ್ತವ್ಯಕ್ಕೆ ಮತ್ತೆ ಹಾಜರಾಗಿದ್ದರು.ಇದೀಗ ವಾಲ್ಮೀಕಿ ನಿಗಮದ ಹಗರಣ ನಡೆದ ವೇಳೆ ಇದೇ ಪದ್ಮನಾಭ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಹೀಗಾಗಿ ಇದನ್ನೂ ಬಿಜೆಪಿ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳಲಿದೆ.

2013ರ ಮೇ ತಿಂಗಳಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಇಲಾಖೆಯ ಗಮನಕ್ಕೆ ತಾರದೆ 10 ಕೋಟಿ ರು.ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು. ಮೊದಲು ಪೊಲೀಸ್‌ ಇಲಾಖೆಗೆ ತನಿಖೆ ವಹಿಸಿ ನಂತರ ಸಿಐಡಿಗೆ ವರ್ಗಾಯಿಸಲಾಯಿತು. ಬಳಿಕ ತನಿಖೆಯನ್ನು ಸಿಬಿಐಗೆ ವರ್ಗಾವಣೆ ಮಾಡಲಾಗಿದೆ.2012ರ ಸೆಪ್ಟೆಂಬರ್‌ನಲ್ಲಿ ಕೆಐಎಡಿಬಿ ಬ್ಯಾಂಕ್‌ ಖಾತೆಯಲ್ಲಿನ ಹಣವನ್ನು ಬೆಂಗಳೂರು ಶಾಖೆಯಿಂದ ಸೇಲಂ ಶಾಖೆಗೆ ವರ್ಗಾವಣೆ ಮಾಡಲಾಗಿದೆ. ತನಿಖೆಯನ್ನು ಪೊಲೀಸ್‌ ಇಲಾಖೆಗೆ ವಹಿಸಿ ನಂತರ ಸಿಬಿಐಗೆ ವರ್ಗಾಯಿಸಲಾಗಿದೆ. ಇವೆಲ್ಲವನ್ನೂ ಪ್ರಸ್ತಾಪಿಸಿ ಬಿಜೆಪಿ ಹಾಗೂ ಜೆಡಿಎಸ್‌ಗೆ ಮುಜುಗರ ಉಂಟು ಮಾಡಲು ಸರ್ಕಾರ ಮುಂದಾಗಲಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

''ದ್ವೇಷ ಭಾಷಣ ಕಾಯ್ದೆ : ಜಾತಿ ನಿಂದನೆಯ ರೀತಿ ದುರ್ಬಳಕೆ ಆಗಬಹುದು''
ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!