- ಪುಣ್ಯಸ್ನಾನ ಮಾಡದ ನಿಮ್ಮಿಂದ ಬಡವರಿಗೆ ಕೊಡುಗೆ ಏನು?ಟಾಪ್- ಕುಂಭ ಸಮರ- ಗಂಗೆಯಲ್ಲಿ ಮಿಂದ ಮೋದಿ ಹಲವು ಕೊಡುಗೆ ಕೊಟ್ಟರು: ಸಚಿವ
ಖರ್ಗೆಗೆ ಕಾನೂನುಸಂಕಷ್ಟದ ಭೀತಿ
ಮುಜಫ್ಫರ್ಪುರ: ಗಂಗೆಯಲ್ಲಿ ಸ್ನಾನ ಮಾಡಿದರೆ ಬಡತನ ನಿರ್ಮೂಲನೆ ಆಗುತ್ತಾ ಎಂಬ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಎಫ್ಐಆರ್ ದಾಖಲಿಗೆ ಸೂಚಿಸಬೇಕು ಎಂದು ಕೋರಿ ವಕೀಲರೊಬ್ಬರು ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಖರ್ಗೆ ಹೇಳಿಕೆಯಿಂದ ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗಿದೆ ಎಂದು ವಕೀಲ ಸುಧೀರ್ ಓಜಾ ತಮ್ಮ ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ. ನ್ಯಾಯಾಲಯವು ಫೆ.3ರಂದು ಪ್ರಕರಣದ ವಿಚಾರಣೆ ನಡೆಸಲಿದೆ.==ನವದೆಹಲಿ: ‘ಗಂಗೆಯಲ್ಲಿ ಮಿಂದರೆ ಬಡತನ ಹೋಗುತ್ತಾ? ಬಡವರ ಹೊಟ್ಟೆ ತುಂಬುತ್ತಾ? ಎಂದು ಪ್ರಶ್ನಿಸುತ್ತೀರಲ್ಲಾ ಖರ್ಗೆ ಸಾಹೇಬ್, ನಿಮಗೀಗ 80 ವರ್ಷ. ನೀವೆಂದೂ ನದಿಯಲ್ಲಿ ಮಿಂದೆದ್ದಿಲ್ಲ. ಹಾಗಿದ್ದರೆ ಹೇಳಿ, ಬಡವರ ಕಲ್ಯಾಣಕ್ಕೆ ನಿಮ್ಮ ಕೊಡುಗೆಯಾದರೂ ಏನು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಿನ್ನೆ ನಾನು ಕುಂಭಮೇಳದಲ್ಲಿ ಸ್ನಾನ ಮಾಡಿದ್ದೆ. ಆದರೆ ಖರ್ಗೆ ಅವರಿಗೆ ಶೀತ ಆಗಿದೆ. ಖರ್ಗೆ ಅವರೇ ನಿಮಗೆ ಮಹಾಕುಂಭದ ಮೇಲೆ ನಂಬಿಕೆ ಇಲ್ಲದೇ ಇದ್ದರೆ ಪರವಾಗಿಲ್ಲ, ಆದರೆ ಕುಂಭಮೇಳಕ್ಕೆ ಆಗಮಿಸುತ್ತಿರುವ 48 ಕೋಟಿ ಭಕ್ತರ ನಂಬಿಕೆಗೆ ಘಾಸಿ ತರುವ ಯತ್ನ ಮಾಡಬೇಡಿ ಎಂದು ಶಾ ತರಾಟೆಗೆ ತೆಗೆದುಕೊಂಡರು. ಜೊತೆಗೆ ಸೋನಿಯಾ ಮತ್ತು ರಾಹುಲ್ ನಾಯಕತ್ವದಲ್ಲಿ ಕಾಂಗ್ರೆಸ್ ಎಂದೆಂದೂ ಸನಾತನ ಧರ್ಮವನ್ನು ಅವಮಾನಿಸಿಕೊಂಡೇ ಬಂದಿದೆ ಎಂದು ಶಾ ಆರೋಪಿಸಿದರು.
ಸೋಮವಾರ ಮಧ್ಯಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಖರ್ಗೆ, ‘ಮಗು ಹಸಿವಿನಿಂದ ಸಾಯುತ್ತಿರುವಾಗ, ಶಾಲೆಗೆ ಹೋಗದಿರುವಾಗ, ಕೂಲಿ ಕಾರ್ಮಿಕರಿಗೆ ಬಾಕಿ ಸಿಗುತ್ತಿಲ್ಲ ಎನ್ನುವ ಹಂತದಲ್ಲಿ, ಈ ಜನರು ಸಾವಿರಾರು ರುಪಾಯಿ ಖರ್ಚು ಮಾಡಿ ಗಂಗಾದಲ್ಲಿ ಸ್ನಾನ ಮಾಡಲು ಪೈಪೋಟಿ ನಡೆಸುತ್ತಿದ್ದಾರೆ. ಕ್ಯಾಮರಾದಲ್ಲಿ ಚೆನ್ನಾಗಿ ಕಾಣಿಸುವವರೆಗೂ ಅವರು ಸ್ನಾನ ಮಾಡುತ್ತಲೇ ಇರುತ್ತಾರೆ. ಅಂತಹವರಿಂದ ದೇಶಕ್ಕೆ ಪ್ರಯೋಜನವಿಲ್ಲ’ ಎಂದು ಅಮಿತ್ ಶಾ ಪುಣ್ಯ ಸ್ನಾನವನ್ನು ಟೀಕಿಸಿದ್ದರು.