ಜೆಡಿಎಸ್‌ನ 3ನೇ 2ರಷ್ಟು ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿಕೆಶಿ ಗಾಳ?

KannadaprabhaNewsNetwork | Updated : Jan 10 2025, 08:17 AM IST

ಪಕ್ಷಾಂತರ ಕಾಯ್ದೆಗೆ ಧಕ್ಕೆಯಾಗದಂತೆ, ಉಪಚುನಾವಣೆಗಳ ಗೊಡವೆಯೇ ಎದುರಾಗದಂತೆ ಜೆಡಿಎಸ್‌ನ ಮೂರನೇ ಎರಡು ಭಾಗದಷ್ಟು ಶಾಸಕರ ಸೆಳೆಯಲು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಂಭೀರ ಪ್ರಯತ್ನ ನಡೆಸಿದ್ದಾರೆ ಎಂಬ ಮಾಹಿತಿ ಜೆಡಿಎಸ್ ಪಾಳೆಯದಿಂದ ಹೊರಬಿದ್ದಿದೆ.

 ಬೆಂಗಳೂರು : ಪಕ್ಷಾಂತರ ಕಾಯ್ದೆಗೆ ಧಕ್ಕೆಯಾಗದಂತೆ, ಉಪಚುನಾವಣೆಗಳ ಗೊಡವೆಯೇ ಎದುರಾಗದಂತೆ ಜೆಡಿಎಸ್‌ನ ಮೂರನೇ ಎರಡು ಭಾಗದಷ್ಟು ಶಾಸಕರ ಸೆಳೆಯಲು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಂಭೀರ ಪ್ರಯತ್ನ ನಡೆಸಿದ್ದಾರೆ ಎಂಬ ಮಾಹಿತಿ ಜೆಡಿಎಸ್ ಪಾಳೆಯದಿಂದ ಹೊರಬಿದ್ದಿದೆ.

ಒಟ್ಟು 18 ಶಾಸಕರ ಪೈಕಿ ಮೂರನೇ ಎರಡು ಭಾಗ ಅಂದರೆ, 12ಕ್ಕಿಂತ ಶಾಸಕರನ್ನು ಸೆಳೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶಿವಕುಮಾರ್ ಪ್ರಯತ್ನ ನಡೆಸಿದ್ದು, ಇದರ ಕೊನೆಯ ಹಂತದಲ್ಲಿದ್ದಾರೆ ಎಂದು ತಿಳಿದು ಬಂದಿದೆ.ಬುಧವಾರ ದೆಹಲಿಯಲ್ಲಿ ತಮ್ಮನ್ನು ಭೇಟಿ ಮಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಣದ ಮುಖಂಡರ ಪೈಕಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ತಮ್ಮ ನಿವಾಸಕ್ಕೆ ಉಪಹಾರಕ್ಕಾಗಿ ಆಹ್ವಾನಿಸಿದ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ಡಿಕೆಶಿ ಆಮಿಷ:

ಈಗಾಗಲೇ ಶಿವಕುಮಾರ್ ನಮ್ಮ ಪಕ್ಷದ ಶಾಸಕರನ್ನು ಸಂಪರ್ಕಿಸಿ ಭಾರಿ ಪ್ರಮಾಣದ ಆಮಿಷ ಒಡ್ಡಿದ್ದಾರೆ. ಕಾಂಗ್ರೆಸ್‌ಗೆ ವಲಸೆ ಹೋಗುವುದಿಲ್ಲ ಎಂಬುದಾಗಿ ನಮ್ಮ ಶಾಸಕರು ಹೇಳುತ್ತಿದ್ದರೂ ಅದನ್ನು ಪೂರ್ಣ ಪ್ರಮಾಣದಲ್ಲಿ ನಂಬುವುದು ಕಷ್ಟವಾಗುತ್ತಿದೆ. ಇದನ್ನು ಹೇಗಾದರೂ ತಡೆಗಟ್ಟಬೇಕು ಎಂಬ ಅಭಿಪ್ರಾಯವನ್ನು ಕುಮಾರಸ್ವಾಮಿ ಅವರು ಬೇಸರದಿಂದ ವ್ಯಕ್ತಪಡಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.ಈ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿದ ಕುಮಾರಸ್ವಾಮಿ ಮತ್ತು ಜಾರಕಿಹೊಳಿ ಅವರು ಶಾಸಕರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಂತ್ರ ರೂಪಿಸುವ ನಿಲುವಿಗೆ ಬಂದರು ಎಂದು ತಿಳಿದು ಬಂದಿದೆ.