ಸೋನಿಯಾ, ರಾಹುಲ್‌ ನಂಟಿನಕಂಪನಿಯ ₹752 ಕೋಟಿ ಆಸ್ತಿ ಜಪ್ತಿ

KannadaprabhaNewsNetwork |  
Published : Nov 22, 2023, 01:00 AM IST
ಜಾರಿ ನಿರ್ದೇಶನಾಲಯ | Kannada Prabha

ಸಾರಾಂಶ

‘ನ್ಯಾಷನಲ್ ಹೆರಾಲ್ಡ್’ ದಿನಪತ್ರಿಕೆ ಹಾಗೂ ಅದಕ್ಕೆ ಸಂಬಂಧಿಸಿದ ಕಂಪನಿಗಳ ಪರಭಾರೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ.) ಕಾಂಗ್ರೆಸ್‌ನ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ನಂಟು ಹೊಂದಿರುವ ಯಂಗ್ ಇಂಡಿಯನ್ ಸಂಸ್ಥೆಗೆ ಸೇರಿದ ₹ 751.9 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.

ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಇ.ಡಿ.ಶಾಕ್‌

ಪಂಚರಾಜ್ಯ ಚುನಾವಣೆ ಸಂದರ್ಭದಲ್ಲೇ ಕ್ರಮ

ಅಸೋಸಿಯೇಟೆಡ್‌ ಜರ್ನಲ್ಸ್‌ (ಎಜೆಎಲ್‌)ನ ದೆಹಲಿ, ಮುಂಬೈ, ಲಖನೌದಲ್ಲಿನ 661 ಕೋಟಿ ರು. ಸ್ಥಿರಾಸ್ತಿ ವಶ

ಇ.ಡಿ. ವಶಪಡಿಸಿಕೊಂಡಿರುವ ಆಸ್ತಿಗಳಲ್ಲಿ ದೆಹಲಿ, ಮುಂಬೈ, ಲಖನೌದಲ್ಲಿನ ಸ್ಥಿರಾಸ್ತಿಗಳು ಕೂಡ ಉಂಟು

ಎಜೆಎಲ್‌ನಲ್ಲಿ ಯಂಗ್‌ ಇಂಡಿಯನ್‌ ಹೂಡಿದ್ದ 90.21 ಕೋಟಿ ರು. ಮೌಲ್ಯದ ಈಕ್ವಿಟಿ ಷೇರು ಮುಟ್ಟುಗೋಲು

ಬಿಜೆಪಿಗೆ ಸೋಲಿನ ಭೀತಿ

ಪಂಚರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಸೋಲುವ ಭೀತಿ ಬಿಜೆಪಿಗೆ ಆವರಿಸಿದೆ. ಹೀಗಾಗಿ ಜನರ ಗಮನ ಬೇರೆಡೆ ತಿರುಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇದು ಕೇಂದ್ರ ಸರ್ಕಾರದ ಸೇಡು, ಹತಾಶೆಯ ಪ್ರತೀಕ- ಅಭಿಷೇಕ್‌ ಮನು ಸಿಂಘ್ವಿ, ಕಾಂಗ್ರೆಸ್‌ ವಕ್ತಾರನವದೆಹಲಿ: ‘ನ್ಯಾಷನಲ್ ಹೆರಾಲ್ಡ್’ ದಿನಪತ್ರಿಕೆ ಹಾಗೂ ಅದಕ್ಕೆ ಸಂಬಂಧಿಸಿದ ಕಂಪನಿಗಳ ಪರಭಾರೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ.) ಕಾಂಗ್ರೆಸ್‌ನ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ನಂಟು ಹೊಂದಿರುವ ಯಂಗ್ ಇಂಡಿಯನ್ ಸಂಸ್ಥೆಗೆ ಸೇರಿದ ₹ 751.9 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.ಜಪ್ತಿ ಮಾಡಲಾದ ಆಸ್ತಿಯಲ್ಲಿ ದೆಹಲಿ ಮತ್ತು ಮುಂಬೈನಲ್ಲಿರುವ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯ ಕಟ್ಟಡಗಳು ಹಾಗೂ ಲಖನೌದ ನೆಹರು ಭವನ ಸೇರಿವೆ. ಪಂಚರಾಜ್ಯ ಚುನಾವಣೆಗಳು ಈಗ ನಡೆಯುತ್ತಿದ್ದು, ಡಿ.3ರಂದು ಮತ ಎಣಿಕೆ ಇದೆ. ಈ ನಡುವೆಯೇ ಇ.ಡಿ. ಈ ಕ್ರಮ ಕೈಗೊಂಡಿದೆ. ಕಾಂಗ್ರೆಸ್‌ ಈ ಬಗ್ಗೆ ಪ್ರತಿಕ್ರಿಯಿಸಿ, ‘ಸೋಲಿನ ಭೀತಿಯಿಂದ ಬಿಜೆಪಿ ಈ ಸೇಡಿನ ಕ್ರಮ ಕೈಗೊಳ್ಳುತ್ತಿದೆ’ ಎಂದು ಆರೋಪಿಸಿದೆ.ಏನಿದು ಪ್ರಕರಣ?:

ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಇ.ಡಿ. ನಡೆಸುತ್ತಿದೆ. ಹಾಲಿ ಇದರ ಮಾತೃಸಂಸ್ಥೆ ಯಂಗ್‌ ಇಂಡಿಯನ್‌ ಪ್ರೈವೇಟ್ ಲಿಮಿಟೆಡ್‌ ಆಗಿದೆ. ಈ ಮುನ್ನ ಪತ್ರಿಕೆಯನ್ನು ನಡೆಸುತ್ತಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ ಅನ್ನು ಯಂಗ್‌ ಇಂಡಿಯನ್‌ ಸ್ವಾಧೀನಪಡಿಸಿಕೊಂಡಿತ್ತು. ಈ ವೇಳೆ ಮೋಸ, ಪಿತೂರಿ ಮತ್ತು ಕ್ರಿಮಿನಲ್ ವಿಶ್ವಾಸದ್ರೋಹ ಎಸಗಲಾಗಿದೆ ಎಂಬ ಪ್ರಕರಣಗಳನ್ನು ಇ.ಡಿ. ದಾಖಲಿಸಿದೆ.ಈ ಸಂಬಂಧ ಈಗಾಗಲೇ ಪತ್ರಿಕೆಯ ಟ್ರಸ್ಟ್‌ನಲ್ಲಿರುವ ಸೋನಿಯಾ, ರಾಹುಲ್ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಅವರ ಸೋದರ, ಸಂಸದ ಡಿ.ಕೆ. ಸುರೇಶ್‌ ಅವರನ್ನು ಇ.ಡಿ. ಪ್ರಶ್ನಿಸಿದೆ.ಷೇರುದಾರರಿಗೆ ವಂಚನೆ- ಇ.ಡಿ:ಈ ಬಗ್ಗೆ ಮಂಗಳವಾರ ಹೇಳಿಕೆ ನೀಡಿರುವ ಇ.ಡಿ., ‘ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್‌) ದೆಹಲಿ, ಮುಂಬೈ ಮತ್ತು ಲಖನೌನಲ್ಲಿ ಹೊಂದಿದ್ದ 661.69 ಕೋಟಿ ಕೋಟಿ ರು.ಗಳ ಸ್ಥಿರಾಸ್ಥಿಯನ್ನು ಜಪ್ತಿ ಮಾಡಲಾಗಿದೆ. ಇನ್ನು ಯಂಗ್ ಇಂಡಿಯನ್‌ ಸಂಸ್ಥೆಯು ಷೇರುಗಳ ಮೂಲಕ ಎಜೆಎಲ್‌ನಲ್ಲಿ ಹೂಡಿಕೆ ಮಾಡಿದ್ದ 90.21 ಕೋಟಿ ರು. ಮೌಲ್ಯದ ಈಕ್ವಿಟಿಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟಾರೆ 751.9 ಕೋಟಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲು ಆದೇಶವನ್ನು ಹೊರಡಿಸಲಾಗಿದೆ. ಇದು ಅಪರಾಧಕ್ಕೆ ಸಂಬಂಧಿಸಿದ ಆದಾಯವಾಗಿದೆ’ ಎಂದು ಹೇಳಿದೆ.ಅಲ್ಲದೆ, ‘ಎಜೆಎಲ್‌ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್‌ ಪಕ್ಷವು ಈ ವ್ಯವಹಾರ ನಡೆಸಿ ದೇಣಿಗೆದಾರರು ಹಾಗೂ ಷೇರುದಾರರಿಗೆ ವಂಚನೆ ಎಸಗಿದೆ’ ಎಂದಿದೆ.ಕಾಂಗ್ರೆಸ್ ಟೀಕೆ:

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಸಿಂಘ್ವಿ, ‘ವಿಧಾನಸಭೆ ಚುನಾವಣೆಗಳಲ್ಲಿ ಸೋಲಿನ ಭೀತಿ ಬಿಜೆಪಿಗೆ ಆವರಿಸಿದೆ. ಹೀಗಾಗಿ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಇದು ಕೇಂದ್ರ ಸರ್ಕಾರದ ಹತಾಶೆ ಪ್ರತೀಕ’ ಎಂದಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳನ್ನು ರಾಜಕೀಯ ಸೇಡಿಗಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಈ ಹಿಂದೆಯೇ ಕಾಂಗ್ರೆಸ್ ಹೇಳಿತ್ತು ಹಾಗೂ ಅಕ್ರಮ ಹಣ ವರ್ಗಾವಣೆ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದಿತ್ತು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮೇಘಾಲಯ ಮೇಲಿಲ್ಲ ಬಾಂಗ್ಲಾ ಸಂಘರ್ಷ ಪರಿಣಾಮ : ವಿಜಯ್‌
ಸದನದಲ್ಲಿ ಅಶೋಕ್ ಆರೆಸ್ಸೆಸ್‌ ಬರೆದ ಭಾಷಣ ಓದ್ತಾರೆ-ಸಿಎಂ