ಟಿಎಂಸಿ ಸಂಸದೆ ವಿರುದ್ಧ ಉನ್ನತ ಕೇಂದ್ರೀಯ ತನಿಖೆಗೆ ಶಿಫಾರಸು
ಪ್ರಶ್ನೆಗಾಗಿ ಲಂಚ: ಟಿಎಂಸಿ ಸಂಸದೆ ವಿರುದ್ಧ ಉನ್ನತ ಕೇಂದ್ರೀಯ ತನಿಖೆಗೆ ಶಿಫಾರಸುನವದೆಹಲಿ: ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸಂಸತ್ ಸ್ಥಾನವನ್ನು ವಜಾ ಮಾಡಬೇಕು ಎಂದು ಶಿಫಾರಸು ಮಾಡಲು ಲೋಕಸಭೆಯ ನೈತಿಕ ಸಮಿತಿ ನಿರ್ಧರಿಸಿದೆ. ಗುರುವಾರ ಸಭೆ ನಡೆಸಿ ಅದು ಲೋಕಸಭೆ ಸ್ಪೀಕರ್ಗೆ ಅದು ಶಿಫಾರಸು ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ನೈತಿಕ ಸಮಿತಿ 500 ಪುಟಗಳ ವರದಿಯನ್ನು ಸಿದ್ಧಪಡಿಸಿದೆ. ಇದರಲ್ಲಿ ಮಹುವಾ ಅವರನ್ನು ಸಂಸತ್ ಸದಸ್ಯತ್ವ ಸ್ಥಾನದಿಂದ ವಜಾ ಮಾಡಬೇಕು. ಮಹುವಾ ಅವರ ಮೇಲಿನ ಆರೋಪ ಗಂಭೀರವಾಗಿದ್ದು, ಆಪರಾಧಿಕ ಕೃತ್ಯವನ್ನು ಅವರು ಎಸಗಿದಂತಿದೆ. ಅಲ್ಲದೆ, ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸುವ ಪ್ರಶ್ನೆ ಕೇಳಲು ಉದ್ಯಮಿ ಗೌತಮ್ ಹೀರಾನಂದಾನಿ ಅವರಿಂದ 2 ಕೋಟಿ ರು. ಪಡೆದ ಆರೋಪ ಅವರ ಮೇಲಿದ್ದು, ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ತನಿಖೆ ಅಗತ್ಯವಿದೆ. ಹೀಗಾಗಿ ಕೇಂದ್ರೀಯ ಉನ್ನತ ತನಿಖಾ ಸಂಸ್ಥೆಗಳಿಂದ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ನೈತಿಕ ಸಮಿತಿಯು ಶಿಫಾರಸು ಮಾಡಲು ತೀರ್ಮಾನಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್ಡಿಟೀವಿ ವರದಿ ಮಾಡಿದೆ.
ಏನಿದು ಪ್ರಕರಣ?:
ಸಂಸತ್ತಿನಲ್ಲಿ ಮೋದಿ ಸರ್ಕಾರವನ್ನು ಹಾಗೂ ಮೋದಿ ಅವರ ಆಪ್ತ ಉದ್ಯಮಿ ಗೌತಮ್ ಅದಾನಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಶ್ನೆ ಕೇಳುವುದಕ್ಕಾಗಿ ಮಹುವಾ ಅವರು ಉದ್ಯಮಿ ದರ್ಶನ್ ಹೀರಾನಂದಾನಿಯಿಂದ ಲಂಚ ಪಡೆದುಕೊಂಡಿದ್ದರು ಎಂದು ನಿಶಿಕಾಂತ್ ದುಬೆ ಅ.21ರಂದು ದೂರು ದಾಖಲಿಸಿದ್ದರು. ಬಳಿಕ ಹೀರಾನಂದಾನಿ ಅವರೂ ತಾವು, ಮಹುವಾಗೆ 2 ಕೋಟಿ ರು. ನೀಡಿದ್ದಾಗಿ ಹಾಗೂ ಮಹುವಾ ಅವರ ಇ-ಮೇಲ್ ಐಡಿ ಬಳಸಿ ತಾವೇ ಲೋಕಸಭೆಗೆ ಪ್ರಶ್ನೆಗಳನ್ನು ಪೋಸ್ಟ್ ಮಾಡಿದ್ದಾಗಿ ಹೇಳಿದ್ದರು. ಇದು ರಾಜಕೀಯ ಬಿರುಗಾಳಿ ಎಬ್ಬಿಸಿತ್ತು.
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.