ಚಾಮರಾಜನಗರ ದಸರಾ ಮಹೋತ್ಸವಕ್ಕೆ ಸರ್ವರೂ ಸಹಕರಿಸಿ -ಶಿಲ್ಪಾ ನಾಗ್

KannadaprabhaNewsNetwork | Published : Oct 12, 2023 12:01 AM

ಸಾರಾಂಶ

ಮೈಸೂರು ದಸರಾ ಮಹೋತ್ಸವ ಭಾಗವಾಗಿ ಚಾಮರಾಜನಗರ ಜಿಲ್ಲೆಯಲ್ಲಿ ಅ. 17 ರಿಂದ 20ರವರೆಗೆ ಹಮ್ಮಿಕೊಳ್ಳಲಾಗಿರುವ ಚಾಮರಾಜನಗರ ದಸರಾ ಮಹೋತ್ಸವಕ್ಕೆ ಸರ್ವರೂ ಸಹಕರಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮನವಿ ಮಾಡಿದರು.
ಸಭೆಯಲ್ಲಿ ಪ್ರಮುಖ ಮುಖಂಡರ,ಪ್ರತಿನಿಧಿ,ಕಲಾವಿದರ ಅಭಿಪ್ರಾಯ ಸಂಗ್ರಹ । ಅರ್ಥಪೂರ್ಣ ದಸರಾ ಆಚರಣೆಗೆ ಕರೆ ಕನ್ನಡಪ್ರಭ ವಾರ್ತೆ ಚಾಮರಾಜನಗರ ಮೈಸೂರು ದಸರಾ ಮಹೋತ್ಸವ ಭಾಗವಾಗಿ ಚಾಮರಾಜನಗರ ಜಿಲ್ಲೆಯಲ್ಲಿ ಅ. 17 ರಿಂದ 20ರವರೆಗೆ ಹಮ್ಮಿಕೊಳ್ಳಲಾಗಿರುವ ಚಾಮರಾಜನಗರ ದಸರಾ ಮಹೋತ್ಸವಕ್ಕೆ ಸರ್ವರೂ ಸಹಕರಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮನವಿ ಮಾಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚಾಮರಾಜನಗರ ದಸರಾ ಮಹೋತ್ಸವ ಸಂಬಂಧ ವಿವಿಧ ಸಂಘ, ಸಂಸ್ಥೆಗಳ ಪ್ರತಿನಿಧಿಗಳು, ಕಲಾವಿದರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚಾಮರಾಜನಗರ ದಸರಾ ಮಹೋತ್ಸವಕ್ಕೆ ಹಿಂದೆ ನೀಡಿದಂತೆ ಈ ಬಾರಿಯೂ ಎಲ್ಲರ ಸಹಕಾರ, ಸಲಹೆ ಅಗತ್ಯವಿದೆ. ಸರ್ವರ ಸಹಭಾಗಿತ್ವದಲ್ಲಿ ದಸರಾ ನಡೆಸಲಾಗುತ್ತದೆ. ಹೀಗಾಗಿ ಪ್ರತಿಯೊಬ್ಬರ ಅಭಿಪ್ರಾಯ, ಸಲಹೆಗಳು ಮುಖ್ಯವಾಗಿವೆ. ಎಲ್ಲರೂ ಸೇರಿ ಅರ್ಥಪೂರ್ಣವಾಗಿ ದಸರಾ ಮಹೋತ್ಸವ ಆಚರಿಸೋಣ ಎಂದು ಶಿಲ್ಪಾ ನಾಗ್ ತಿಳಿಸಿದರು. ದಸರಾ ಮಹೋತ್ಸವದಲ್ಲಿ ೪ ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುತ್ತಿದೆ. ಇದರೊಂದಿಗೆ ದಸರಾ ಕವಿಗೋಷ್ಠಿ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುತ್ತದೆ ಎಂದರು. ಸಭೆಯಲ್ಲಿ ಹಾಜರಿದ್ದ ಮುಖಂಡರು, ಕಲಾವಿದರು ಮಾತನಾಡಿ, ವಿದ್ಯುತ್ ದೀಪಾಲಂಕಾರ ರಾಮಸಮುದ್ರದ ಕೊನೆಯವರೆಗೂ ಮಾಡಬೇಕು. ನಗರದ ಎಲ್ಲಾ ಪ್ರಮುಖ ವೃತ್ತಗಳು, ರಸ್ತೆಗಳು ಸೇರಿದಂತೆ ವಿವಿಧೆಡೆ ದೀಪಾಲಂಕಾರ ಆಗಬೇಕು. ಜನನ ಮಂಟಪ ಸೇರಿದಂತೆ ಐತಿಹಾಸಿಕ ಸ್ಥಳಗಳಲ್ಲಿ ಸ್ವಚ್ಚತೆ ದೀಪಾಲಂಕಾರಕ್ಕೆ ವಿಶೇಷ ಗಮನಹರಿಸಬೇಕು. ಜೈ ಭುವನೇಶ್ವರಿ ಪ್ರತಿಮೆಗೆ ದಸರಾ ಉದ್ಘಾಟನೆಯಂದು ಗೌರವ ಸಲ್ಲಿಸಬೇಕು ಎಂದರು. ದಸರಾ ಸಂದರ್ಭದಲ್ಲಿ ವಜ್ರಮುಷ್ಠಿ ಕಾಳಗ ಅಣಕು ಪ್ರದರ್ಶನಕ್ಕೆ ಅವಕಾಶವಾಗಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ದೊರೆಯಬೇಕು. ದಸರಾ ಸಮಯದಲ್ಲಿ ಮನೆ ಮನೆಗಳಲ್ಲಿ ಗೊಂಬೆ ಕೂರಿಸುವ ಸಂಪ್ರದಾಯವಿದೆ. ಇದನ್ನು ಜಿಲ್ಲಾಡಳಿತ ಗುರುತಿಸಿ ಉತ್ತೇಜಿಸಬೇಕು ಎಂದು ಇನ್ನಿತರ ಸಲಹೆಗಳನ್ನು ಮುಖಂಡರು, ಕಲಾವಿದರು ನೀಡಿದರು. ಕೆಲ ಉದ್ಯಮಿಗಳು, ಮುಖಂಡರು ಕಾರ್ಯಕ್ರಮದ ಆಯೋಜನೆಗೆ ಪ್ರಾಯೋಜಕತ್ವ ನೆರವು ನೀಡುವ ಬಗ್ಗೆ ತಿಳಿಸಿದರು. ಎಲ್ಲರ ಅಭಿಪ್ರಾಯ ಸಲಹೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಸರ್ವರ ಸಹಕಾರದೊಂದಿಗೆ ಈ ಬಾರಿಯ ಚಾಮರಾಜನಗರ ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ಆಚರಿಸುವುದಾಗಿ ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಲಿಂಗಯ್ಯ, ಮುಖಂಡರಾದ ಶಾ. ಮುರಳಿ, ಸುರೇಶ್ ನಾಯಕ, ಸಿ.ಎಂ. ನರಸಿಂಹಮೂರ್ತಿ, ಸುರೇಶ್ ವಾಜಪೇಯಿ, ಸೋಮಶೇಖರ್ ಬಿಸಲ್ವಾಡಿ, ರವಿಚಂದ್ರ ಪ್ರಸಾದ್, ಸುರೇಶ್ ಎನ್. ಋಗ್ವೇದಿ, ಅರುಣ್ ಕುಮಾರ್‌, ಸಿ.ಎಂ. ಕೃಷ್ಣಮೂರ್ತಿ, ಸಿ.ಕೆ. ಮಂಜುನಾಥ್, ಚಾ.ರಂ. ಶ್ರೀನಿವಾಸಗೌಡ, ಕೆ.ಎಂ. ನಾಗರಾಜು, ನಿಜಧ್ವನಿ ಗೋವಿಂದರಾಜು, ಚಾ.ಗು.ನಾಗರಾಜು, ಬ್ಯಾಡಮೂಡ್ಲು ಬಸವಣ್ಣ ಉಪಸ್ಥಿತರಿದ್ದರು. ------------------ 11ಸಿಎಚ್‌ಎನ್‌52 ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚಾಮರಾಜನಗರ ದಸರಾ ಮಹೋತ್ಸವ ಸಂಬಂಧ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಕಲಾವಿದರೊಂದಿಗೆ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್‌ ಅವರು ಸಭೆ ನಡೆಸಿದರು. -----------------

Share this article