ಕಾಂಗ್ರೆಸ್‌ನೊಳಗೆ ಬಣಜಗಳ: ಮಾಜಿ ಶಾಸಕ ಕೆ.ಸುರೇಶ್‌ಗೌಡ

KannadaprabhaNewsNetwork |  
Published : Feb 02, 2024, 01:03 AM ISTUpdated : Feb 02, 2024, 05:42 PM IST
K Suresh Gowda

ಸಾರಾಂಶ

ಕಾಂಗ್ರೆಸ್ ಪಕ್ಷದೊಳಗೆ ಬಣ ರಾಜಕೀಯ, ಒಳಜಗಳ ತಾಂಡವವಾಡುತ್ತಿದೆ. ಸಿದ್ದರಾಮಯ್ಯ, ಡಿಕೆಶಿ ಬಣದವರು ಪರಸ್ಪರ ಕಾಲೆಳೆದಾಟದಲ್ಲಿ ತೊಡಗಿದ್ದಾರೆ. ಯಾರು ಯಾರನ್ನು ಟ್ರ್ಯಾಪ್ ಮಾಡಿದ್ದಾರೆನ್ನುವುದು ಅವರಿಗೇ ತಿಳಿಯದಂತಾಗಿದೆ ಎಂದು ಮಾಜಿ ಶಾಸಕ ಕೆ.ಸುರೇಶ್‌ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾಂಗ್ರೆಸ್ ಪಕ್ಷದೊಳಗೆ ಬಣ ರಾಜಕೀಯ, ಒಳಜಗಳ ತಾಂಡವವಾಡುತ್ತಿದೆ. ಸಿದ್ದರಾಮಯ್ಯ, ಡಿಕೆಶಿ ಬಣದವರು ಪರಸ್ಪರ ಕಾಲೆಳೆದಾಟದಲ್ಲಿ ತೊಡಗಿದ್ದಾರೆ. ಯಾರು ಯಾರನ್ನು ಟ್ರ್ಯಾಪ್ ಮಾಡಿದ್ದಾರೆನ್ನುವುದು ಅವರಿಗೇ ತಿಳಿಯದಂತಾಗಿದೆ ಎಂದು ಮಾಜಿ ಶಾಸಕ ಕೆ.ಸುರೇಶ್‌ಗೌಡ ಹೇಳಿದರು.

ಶಾಸಕ ರವಿಕುಮಾರ್ ಅವರು ತಮ್ಮನ್ನು ಜೆಡಿಎಸ್‌ನವರು ಟ್ರ್ಯಾಪ್ ಮಾಡಿದ್ದಾರೆಂದು ಭಾವಿಸಿದ್ದಾರೆ. ಆದರೆ, ಅವರನ್ನು ಟ್ರ್ಯಾಪ್ ಮಾಡಿರುವುದು ಕಾಂಗ್ರೆಸ್‌ನ ಒಂದು ಬಣ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕಾಂಗ್ರೆಸ್ ಪಕ್ಷವನ್ನು ನುಂಗುವುದಕ್ಕೆ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿದ್ದೇವೆ. ಕಾಂಗ್ರೆಸ್‌ನಿಂದ ಲೋಕಸಭೆಗೆ ಸ್ಪರ್ಧಿಸಲು ಗುತ್ತಿಗೆದಾರನೊಬ್ಬನನ್ನು ಕರೆತರುತ್ತಿದ್ದೀರಾ. ಅವನ ಚುನಾವಣಾ ಖರ್ಚಿಗೆ ಹಣಕ್ಕೆ ಏನೇನು ಮಾಡಿಕೊಟ್ಟಿದ್ದೀರಾ. ಅವನನ್ನೇ ಏಕೆ ಕರೆದುಕೊಂಡು ಬರುತ್ತಿದ್ದೀರಿ ಎಂಬುದನ್ನೆಲ್ಲಾ ದಾಖಲೆ ಸಹಿತ ಹೇಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕೆರಗೋಡು ಧ್ವಜ ವಿವಾದವನ್ನು ಸ್ವಲ್ಪ ತಾಳ್ಮೆ ವಹಿಸಿದ್ದರೆ ಆರಂಭಿಕ ಹಂತದಲ್ಲೇ ಬಗೆಹರಿಸಬಹುದಿತ್ತು. ಜಿಲ್ಲಾಡಳಿತ ಸೇರಿದಂತೆ ಹಲವರ ದುಡುಕಿನ ನಿರ್ಧಾರಗಳು ಪರಿಸ್ಥಿತಿಯನ್ನು ಗಂಭೀರ ಹಂತ ತಲುಪಲು ಕಾರಣವಾಯಿತು. ಗಲಾಟೆ ನಡೆದ ಹಿಂದಿನ ಎರಡು ದಿನ ಚಲುವರಾಯಸ್ವಾಮಿ ಜಿಲ್ಲೆಯಲ್ಲೇ ಇದ್ದರು. ಅವರೇಕೆ ಅಲ್ಲಿಗೆ ಹೋಗಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಲಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿ- ಜೆಡಿಎಸ್‌ನ್ನು ಜಾತಿವಾದಿಗಳೆನ್ನುವ ಕಾಂಗ್ರೆಸ್ ಜಾತ್ಯತೀತವಾಗಿದೆಯೇ. ಅವರು ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳುವ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದ ಸುರೇಶ್‌ಗೌಡ, ಮಧ್ಯರಾತ್ರಿ ಧ್ವಜ ಇಳಿಸುವುದಕ್ಕೆ ಅಧಿಕಾರಿಗಳು ಹೋಗಿದ್ದೇಕೆ. ಅಷ್ಟೊಂದು ಆತುರ, ಅವಸರ ಏನಿತ್ತು. ಊರಿನ ಜನರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪರಸ್ಪರನ್ನು ಕೂರಿಸಿ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಿತ್ತು. ಅದನ್ನು ಮಾಡದೆ ಜೆಡಿಎಸ್ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಉ.ಕ.ಅಭಿವೃದ್ಧಿ ಕೈ ಸರ್ಕಾರ ಬದ್ಧ : ಸಿಎಂ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!