ಕನ್ನಡಪ್ರಭ ವಾರ್ತೆ ಬೆಂಗಳೂರು
ಈ ತಿಂಗಳ 6ರಂದು ಬಿಜೆಪಿ ಸಹಯೋಗದೊಂದಿಗೆ (ಶನಿವಾರ) ನಗರದಲ್ಲಿ ಒಂದು ದಿನದ ಪಂಚಗವ್ಯದಿಂದ ಎಲ್ಲಾ ವಿಧದ ಕ್ಯಾನ್ಸರ್ (ಅಂಕೊಲಜಿ) ರೋಗಿಗಳಿಗೆ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ತಿಳಿಸಿದ್ದಾರೆ.ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಪೋಸ್ಟರ್ ಬಿಡುಗಡೆ ಮಾಡಿದ ಬಳಿಕ ಮಾತನಾಡಿದರು.
ಬೆಂಗಳೂರಿನ ಗೋಸೇವಾ ಗತಿವಿಧಿ, ಪರಕಾಲ ಸ್ವಾಮಿ ಮಠ, ಸಂಪ್ರದಾ ಆಸ್ಪತ್ರೆ, ಸಿದ್ಧಗಿರಿ ನ್ಯಾಚುರಲ್ ಸಹಯೋಗದಲ್ಲಿ ಮತ್ತು ಬಿಜೆಪಿಯ ವೈದ್ಯಕೀಯ ಪ್ರಕೋಷ್ಠದ ಸಹಕಾರದೊಂದಿಗೆ ಈ ಒಂದು ದಿನದ ಶಿಬಿರ ನಡೆಯಲಿದೆ ಎಂದರು.ಪಂಚಗವ್ಯದಿಂದ ಎಲ್ಲಾ ವಿಧದ ಕ್ಯಾನ್ಸರ್ (ಅಂಕೊಲಜಿ) ರೋಗಿಗಳಿಗೆ ಚಿಕಿತ್ಸಾ ಶಿಬಿರವನ್ನು 25 ವರ್ಷಗಳ ಸುದೀರ್ಘ ಅನುಭವವುಳ್ಳ ಡಾ.ಡಿ.ಪಿ.ರಮೇಶ್ ಮತ್ತು ಸಂಪ್ರದಾ ಹಾಸ್ಪಿಟಲ್ ವೈದ್ಯರ ತಂಡದವರಿಂದ ಉಚಿತವಾಗಿ ಆಯೋಜಿಸಲಾಗಿದೆ. ಕ್ಯಾನ್ಸರ್ ಬಗ್ಗೆ ಸಮಾಜದಲ್ಲಿ ಭಯವಿದೆ. ಅದನ್ನು ಗುಣಪಡಿಸಬಹುದು ಎಂಬುದನ್ನು ತಿಳಿಸುವ ಮತ್ತು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ದೃಷ್ಟಿಯಿಂದ ಚಿಕಿತ್ಸೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಪರಕಾಲ ಸ್ವಾಮಿ ಮಠದ ಆವರಣದಲ್ಲಿ ಶಿಬಿರ:ಚಿಕಿತ್ಸಾ ಶಿಬಿರವನ್ನು ಸುಭಾಷ್ ನಗರ (ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಎದುರುಗಡೆ), ಧನ್ವಂತರಿ ರಸ್ತೆಯ ಆಯುರ್ವೇದ ಸರ್ಕಾರಿ ಮೆಡಿಕಲ್ ಕಾಲೇಜ್ ಪಕ್ಕದ ಶ್ರೀಲಕ್ಷ್ಮೀ ಹಯಗ್ರೀವ ದೇವಸ್ಥಾನ, ಪರಕಾಲ ಸ್ವಾಮಿ ಮಠದ ಆವರಣದಲ್ಲಿ ಆಯೋಜಿಸಲಾಗುತ್ತದೆ. ಇದನ್ನು ಆರೆಸ್ಸೆಸ್ನ ದಕ್ಷಿಣ ಪ್ರಾಂತದ ಪ್ರಧಾನ ಕಾರ್ಯದರ್ಶಿ ಡಾ.ಜಯಪ್ರಕಾಶ್ ಉದ್ಘಾಟಿಸಲಿದ್ದಾರೆ. ಸವಿತಾ ಮಠದ ಶ್ರೀಸವಿತಾನಂದನಾಥ ಸ್ವಾಮೀಜಿ, ಡಾ.ರಾಧೇಶಾಮ್ ನಾಯಕ್, ಲೋಕಸೇವಾ ಆಯೋಗದ ಪ್ರಭುದೇವ್, ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಜನರು ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.ಪಂಚಗವ್ಯ ಚಿಕಿತ್ಸಾ ತಜ್ಞ ಡಾ.ಡಿ.ಪಿ.ರಮೇಶ್ ಅವರು ಮಾತನಾಡಿ, ಕ್ಯಾನ್ಸರ್ ಚಿಕಿತ್ಸೆಗೆ ಪಂಚಗವ್ಯ ಬಳಕೆ ಸಾಧ್ಯವಿದೆ. ಅಡ್ಡ ಪರಿಣಾಮವಿಲ್ಲದೇ, ಆರ್ಥಿಕ ಹೊರೆ ಇಲ್ಲದೇ ಚಿಕಿತ್ಸೆ ನೀಡಬಹುದು. ಪರ್ಯಾಯ ಚಿಕಿತ್ಸೆ ಕುರಿತಂತೆ ಜನಜಾಗೃತಿ ಆಗಬೇಕಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೈದ್ಯಕೀಯ ಪ್ರಕೋಷ್ಠದ ಡಾ.ಚನ್ನಮಲ್ಲಸ್ವಾಮಿ, ಲಕ್ಷ್ಮಣ್, ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಲಿಂಗಸುಗೂರು ಹಾಜರಿದ್ದರು.ಫೋಟೋ.. ಬಿಜೆಪಿ ಕಚೇರಿಯಲ್ಲಿ ವಿಧಾನಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಪೋಸ್ಟರ್ ಬಿಡುಗಡೆ ಮಾಡಿದರು.