ಗಣಿ ನಷ್ಟ ವಸೂಲಿ ಬಗ್ಗೆ ಅಧ್ಯಯನಕ್ಕೆ ಎಚ್ಕೆ ನೇತೃತ್ಪದ ಉಪಸಮಿತಿ ರಚನೆ

KannadaprabhaNewsNetwork |  
Published : Jul 06, 2025, 01:53 AM ISTUpdated : Jul 06, 2025, 07:47 AM IST
HK Patil

ಸಾರಾಂಶ

ರಾಜ್ಯದಲ್ಲಿ ನಡೆದಿರುವ ಗಣಿ ಅಕ್ರಮಗಳ ಕುರಿತು ನ್ಯಾಯಾಲಯದಲ್ಲಿರುವ ಪ್ರಕರಣಗಳ ವಿಚಾರಣೆ, ಅಕ್ರಮ ಗಣಿಗಾರಿಕೆಯಿಂದ ನಷ್ಟವಾಗಿರುವ ಹಣ ವಸೂಲಾತಿ ಕುರಿತು ಅಧ್ಯಯನ ನಡೆಸಿ ತಿಂಗಳೊಳಗೆ ವರದಿ ಸಲ್ಲಿಸುವಂತೆ ಕಾನೂನು ಸಚಿವ ಎಚ್.ಕೆ.ಪಾಟೀಲ್‌ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಿ ಸರ್ಕಾರ ಆದೇಶ  

 ಬೆಂಗಳೂರು :  ರಾಜ್ಯದಲ್ಲಿ ನಡೆದಿರುವ ಗಣಿ ಅಕ್ರಮಗಳ ಕುರಿತು ನ್ಯಾಯಾಲಯದಲ್ಲಿರುವ ಪ್ರಕರಣಗಳ ವಿಚಾರಣೆ, ಅಕ್ರಮ ಗಣಿಗಾರಿಕೆಯಿಂದ ನಷ್ಟವಾಗಿರುವ ಹಣ ವಸೂಲಾತಿ ಕುರಿತು ಅಧ್ಯಯನ ನಡೆಸಿ ತಿಂಗಳೊಳಗೆ ವರದಿ ಸಲ್ಲಿಸುವಂತೆ ಕಾನೂನು ಸಚಿವ ಎಚ್.ಕೆ.ಪಾಟೀಲ್‌ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ನಷ್ಟ ವಸೂಲಾತಿಗೆ ವಸೂಲಾತಿ ಆಯುಕ್ತರ ನೇಮಕಾತಿ ಮಾಡುವ ಬಗ್ಗೆ ಹಾಗೂ ತೀವ್ರಗತಿ ನ್ಯಾಯಾಲಯ (ಫಾಸ್ಟ್‌ ಟ್ರ್ಯಾಕ್‌ ಕೋರ್ಟ್) ಬಗ್ಗೆ ತಿಂಗಳೊಳಗೆ ವರದಿ ಸಲ್ಲಿಸುವಂತೆ ಎಚ್.ಕೆ.ಪಾಟೀಲ್ ಅಧ್ಯಕ್ಷತೆಯ ಸಮಿತಿ ರಚಿಸಿದ್ದು, ಸದಸ್ಯರಾಗಿ ಡಾ.ಜಿ. ಪರಮೇಶ್ವರ್‌, ಕೆ.ಎಚ್.ಮುನಿಯಪ್ಪ, ಈಶ್ವರ್‌ಖಂಡ್ರೆ ಹಾಗೂ ಎಸ್‌.ಎಸ್‌. ಮಲ್ಲಿಕಾರ್ಜುನ ಅವರನ್ನು ನೇಮಿಸಲಾಗಿದೆ.

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯುವಲ್ಲಿ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಬಗ್ಗೆ ಕಳವಳ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್.ಕೆ. ಪಾಟೀಲ್‌ ಪತ್ರ ಬರೆದಿದ್ದರು.

ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಮತ್ತು ಕಳೆದುಹೋದ ಸಂಪತ್ತು ಮರಳಿ ಪಡೆಯಬೇಕು. 2007ರಿಂದ 2011ರ ಅವಧಿಯಲ್ಲಿ ಸರ್ಕಾರಕ್ಕೆ ಅಂದಾಜು 1.5 ಲಕ್ಷ ಕೋಟಿ ರು. ನಷ್ಟಕ್ಕೆ ಕಾರಣವಾದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳ ಪೈಕಿ ಇಲ್ಲಿವರೆಗೂ ಕೇವಲ ಶೇ.7.6ರಷ್ಟು ಮಾತ್ರ ತನಿಖೆ ನಡೆಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಲೂಟಿ ನಡೆದರೂ ಸರ್ಕಾರಕ್ಕೆ ತಕ್ಕ ಶಿಕ್ಷೆ ಹಾಗೂ ರಾಜ್ಯದ ಸಂಪತ್ತು ವಸೂಲಿ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕತೆ ಮತ್ತು ಬದ್ಧತೆ ತೋರದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

ಈ ಹಿನ್ನೆಲೆಯಲ್ಲಿ ನಂದಿಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಲು ನಿರ್ಧರಿಸಲಾಗಿತ್ತು. ಇದರಂತೆ ಶನಿವಾರ ಉಪಸಮಿತಿ ರಚಿಸಿ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಆರ್‌.ಚಂದ್ರಶೇಖರ್‌ ಆದೇಶ ಮಾಡಿದ್ದಾರೆ.

ಸಮಿತಿಯಲ್ಲಿ ಯಾರ್‍ಯಾರು?-

ಎಚ್.ಕೆ. ಪಾಟೀಲ್‌, ಕಾನೂನು ಸಚಿವ- ಡಾ। ಜಿ. ಪರಮೇಶ್ವರ್‌, ಗೃಹ ಸಚಿವ- ಕೆ.ಎಚ್‌. ಮುನಿಯಪ್ಪ, ಆಹಾರ ಸಚಿವ - ಈಶ್ವರ ಖಂಡ್ರೆ, ಅರಣ್ಯ ಸಚಿವ- ಎಸ್‌.ಎಸ್‌. ಮಲ್ಲಿಕಾರ್ಜುನ, ತೋಟಗಾರಿಕೆ ಸಚಿವ

- ನ್ಯಾಯಾಲಯದಲ್ಲಿರುವ ಅಕ್ರಮ ಗಣಿಗಾರಿಕೆ ಪ್ರಕರಣಗಳ ವಿಚಾರಣೆ, ಆಗಿರುವ ನಷ್ಟ ಕುರಿತು ಅಧ್ಯಯನಕ್ಕೆ ಸಂಪುಟ ಉಪಸಮಿತಿ

- ನಂದಿ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದಂತೆ ಸಂಪುಟ ಉಪಸಮಿತಿ ರಚನೆ ಕುರಿತು ಸರ್ಕಾರ ಆದೇಶ

- ನಷ್ಟ ವಸೂಲಿಗೆ ವಸೂಲಾತಿ ಆಯುಕ್ತರ ನೇಮಕಾತಿ, ಶೀಘ್ರಗತಿ ನ್ಯಾಯಾಲಯ ಸ್ಥಾಪನೆ ಬಗ್ಗೆ ತಿಂಗಳಲ್ಲಿ ವರದಿ ನೀಡಲು ಸೂಚನೆ

- ಅಕ್ರಮ ಗಣಿ ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತಿಲ್ಲ ಎಂದು ಸಿಎಂಗೆ ಪತ್ರ ಬರೆದಿದ್ದ ಎಚ್‌.ಕೆ. ಪಾಟೀಲ್‌ಗೆ ಸಮಿತಿ ನೇತೃತ್ವ

PREV
Read more Articles on